ಬೆಂಬಲ ವಾಪಸ್ ಪಡೆದ ಇಬ್ಬರು ಶಾಸಕರು ಹೇಳಿದ್ದೇನು?
ಮುಂಬೈ, ಜನವರಿ 15 : ಸಮ್ಮಿಶ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಇಬ್ಬರು ಪಕ್ಷೇತರ ಶಾಸಕರು ವಾಪಸ್ ಪಡೆದಿದ್ದಾರೆ. ಜೊತೆಗೆ ಆ ಇಬ್ಬರೂ ಶಾಸಕರು ಬಿಜೆಪಿಗೆ ಬೆಂಬಲ ನೀಡುವುದಾಗಿಯೂ ಹೇಳಿದ್ದಾರೆ.
ರಾಣೆಬೆನ್ನೂರಿನ ಶಾಸಕ ಆರ್. ಶಂಕರ್ ಮತ್ತು ಮುಳಬಾಗಿಲು ಶಾಸಕ ಎಚ್ ನಾಗೇಶ್ ಅವರು ತಾವು ಸಮ್ಮಿಶ್ರ ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆದಿದ್ದಾರೆ. ಆರ್. ಶಂಕರ್ ಅವರು ಕೆಪಿಜೆಪಿ ಪಕ್ಷದಿಂದ ಸ್ಪರ್ಧಿಸಿ ಆಯ್ಕೆ ಆಗಿದ್ದರೆ, ಪಕ್ಷೇತರವಾಗಿ ಸ್ಪರ್ಧಿಸಿದ್ದ ಎಚ್. ನಾಗೇಶ್ ಅವರು ಕಾಂಗ್ರೆಸ್ ಬೆಂಬಲದಿಂದಲೇ ಗೆದ್ದಿದ್ದರು.
ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ಬರೂ ಶಾಸಕರು ಬೆಂಬಲ ವಾಪಸ್ ಪಡೆದಿದ್ದಾಗಿ ಹೇಳಿದ್ದು, ವಾಪಸ್ ಪಡೆಯಲು ಕಾರಣವನ್ನೂ ಸಹ ನೀಡಿದ್ದಾರೆ.
ಅತೃಪ್ತ ಶಾಸಕರ ರಾಜೀನಾಮೆ ತಡೆಯಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್
ಸಮ್ಮಿಶ್ರ ಸರ್ಕಾರ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ. ಶಾಸಕನಾದ ನಾನೇ ಒಂದು ವರ್ಗಾವಣೆಗೆ ಕಚೇರಿಯಿಂದ ಕಚೇರಿಗೆ ಅಲೆದಿದ್ದೇನೆ. ಹೀಗಾದರೆ ಜನಕ್ಕೆ ಮೋಸ ಮಾಡಿದಂತಾಗುತ್ತದೆ. ಹಾಗಾಗಿ ನಾನು ಬೆಂಬಲ ವಾಪಸ್ ಪಡೆಯುತ್ತಿದ್ದೇನೆ. ಸಂಕ್ರಾಂತಿಯಂದು ಉತ್ತಮ ನಿರ್ಣಯ ತೆಗೆದುಕೊಂಡಿದ್ದೇನೆ ಎಂದು ಶಾಸಕ ಎಚ್.ನಾಗೇಶ್ ಅವರು ಮಾಧ್ಯಮಗಳಿಗೆ ಹೇಳಿದ್ದಾರೆ.
'ಜನರಿಗೆ ನಿರೀಕ್ಷೆಯಂತೆ ಆಡಳಿತ ಇಲ್ಲ'
ಐದು ವರ್ಷಗಳ ಕಾಲ ಉತ್ತಮ ಕಾರ್ಯ ಮಾಡಬೇಕೆಂಬ ನಿರೀಕ್ಷೆ ಇತ್ತು. ಆದರೆ ಅದು ಈವರೆಗೂ ಸಾಧ್ಯವಿಲ್ಲ. ಬಿಜೆಪಿ ರಾಜ್ಯದ ದೊಡ್ಡ ಪಕ್ಷ ಅವರಿಗೆ ಬೆಂಬಲ ನೀಡುತ್ತೇವೆ. ಸದೃಢ ಸರ್ಕಾರ ಹೆಚ್ಚು ಉತ್ತಮವಾಗಿ, ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬಹುದು ಹಾಗಾಗಿ ಬಿಜೆಪಿಗೆ ಬೆಂಬಲ ನೀಡುತ್ತಿದ್ದೇನೆ ಎಂದು ನಾಗೇಶ್ ಅವರು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ : ಇಬ್ಬರು ಶಾಸಕರಿಂದ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್
'ಸಮ್ಮಿಶ್ರ ಸರ್ಕಾರದಲ್ಲಿ ಅನ್ಯೋನ್ಯತೆ ಇಲ್ಲ'
ಇನ್ನು ರಾಣೆಬೆನ್ನೂರು ಶಾಸಕ ಆರ್.ಶಂಕರ್ ಅವರು ಮಾತನಾಡಿ, ಸಮ್ಮಿಶ್ರ ಸರ್ಕಾರದಲ್ಲಿ ಅನ್ಯೋನ್ಯತೆ ಇಲ್ಲ. ಬಹಳ ಗೊಂದಲಗಳು ಸಮ್ಮಿಶ್ರ ಸರ್ಕಾರದಲ್ಲಿದೆ. ಅಲ್ಲಿ ನಿರೀಕ್ಷೆಗೆ ತಕ್ಕಂತೆ ಕೆಲಸಗಳಾಗುತ್ತಿಲ್ಲ ಹಾಗಾಗಿ ನಾನು ಬೆಂಬಲ ವಾಪಸ್ ಪಡೆಯುತ್ತಿದ್ದೇನೆ ಎಂದು ಶಂಕರ್ ಹೇಳಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಸಂಪುಟದ ನಾಲ್ವರು ಸಚಿವರ ರಾಜೀನಾಮೆ?
ಸರ್ಕಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ
ಈ ಸರ್ಕಾರದಲ್ಲಿ ಏಳು ತಿಂಗಳ ಕಾಲ ಸಚಿವನಾಗಿದ್ದೆ ಆದರೆ ಈ ಸರ್ಕಾರ ಜನರ ಆಶಯಗಳಿಗೆ ತಕ್ಕಂತೆ ಕಾರ್ಯ ಮಾಡುತ್ತಿಲ್ಲ. ಪರಸ್ಪರ ಎರಡು ಪಕ್ಷಗಳ ನಡುವೆ ಹೊಂದಾಣಿಕೆ ಇಲ್ಲ. ರಾಜ್ಯದಲ್ಲಿ ಸ್ಪಷ್ಟವಾದ ಸದೃಢವಾದ ಸರ್ಕಾರವನ್ನು ರಚಿಸಬೇಕಿದೆ ಹಾಗಾಗಿ ನಾನು ಬೆಂಬಲ ವಾಪಸ್ ಪಡೆದಿದ್ದೇನೆ ಎಂದು ಶಂಕರ್ ಹೇಳಿದ್ದಾರೆ.
ಇಂದು ಸಂಜೆ ರಾಜ್ಯಪಾಲರ ಭೇಟಿ
ಮುಂಬೈನಲ್ಲಿರುವ ಇಬ್ಬರು ಪಕ್ಷೇತರ ಶಾಸಕರು ತಾವು ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆವ ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಇಂದು ಸಂಜೆ ಇಬ್ಬರು ಶಾಸಕರು ಬೆಂಗಳೂರಿಗೆ ಬಂದು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆಯಲಿದ್ದಾರೆ.