'ಪದ್ಮಾವತಿ'ಗೆ ಬೆಂಬಲವಾಗಿ 15 ನಿಮಿಷ ಚಿತ್ರೀಕರಣ ಸ್ಥಗಿತ
ಮುಂಬೈ, ನವೆಂಬರ್ 25 :ಬಿಡುಗಡೆಗೂ ಮುನ್ನವೇ ದೇಶದಾದ್ಯಂತ ಪ್ರತಿಭಟನೆ, ವಿರೋಧಗಳಿಗೆ ಗುರಿಯಾಗಿರುವ 'ಪದ್ಮಾವತಿ' ವಿವಾದ ಪ್ರಾರಂಭವಾದಾಗಿನಿಂದಲೂ ಚಿತ್ರಕ್ಕೆ ಮೊದಲ ಬಾರಿಗೆ ಸಮೂಹ ಒಂದರ ಬೆಂಬಲ ಸಿಕ್ಕಿದೆ.
ಚಲನಚಿತ್ರರಂಗದ ಅಲ್ಲೊಬ್ಬರು ಇಲ್ಲೊಬ್ಬರು ಮಾತ್ರವೇ "ಪದ್ಮಾವತಿ' ಚಿತ್ರಕ್ಕೆ ಬೆಂಬಲ ಸೂಚಿಸುತ್ತಿದ್ದರು. ಆದರೆ ಈಗ ಇಡೀಯ ಚಿತ್ರರಂಗವೇ ಸಂಜಯ್ ಲೀಲಾ ಬನ್ಸಾಲಿ ಅವರ ನಿರ್ದೇಶನದ "ಪದ್ಮಾವತಿ' ಬೆನ್ನಿಗೆ ನಿಂತಿದೆ.
ಚಿತ್ರರಂಗದ ಜೊತೆ ಟಿವಿಯ ಹಲವು ಸಕ್ರಿಯ ಸಂಘಗಳು ಪದ್ಮಾವತಿ ಚಿತ್ರಕ್ಕೆ ಬೆಂಬಲ ಸೂಚಿಸಿದ್ದು ಭಾನುವಾರ (ನವೆಂಬರ್ 25) 15 ನಿಮಿಷಗಳ ಕಾಲ ದೇಶಾದ್ಯಂತ ಚಿತ್ರೀಕರಣವನ್ನು ಸ್ಥಗಿತಗೊಳಿಸಿ 'ಪದ್ಮಾವತಿ' ಚಿತ್ರವನ್ನು ಹಿಂಸಾತ್ಮಕವಾಗಿ ವಿರೋಧಿಸುತ್ತಿರುವವರ ವಿರುದ್ಧ ಪ್ರತಿಭಟನೆ ದಾಖಲಿಸಲಿದೆ.
ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳ ರಕ್ಷಣೆಗಾಗಿ ಭಾರತೀಯ ಚಲನಚಿತ್ರ ಮತ್ತು ಟಿವಿ ನಿರ್ದೇಶಕರ ಸಂಘ ಸೇರಿ ಸೃಜನಶೀಲ ರಂಗದ 19 ಸಂಘಟನೆಗಳು ಭಾನುವಾರ 15 ನಿಮಿಷಗಳು ಚಿತ್ರೀಕರಣ ನಿಲ್ಲಿಸಿ ಪ್ರತಿಭಟಿಸಲಿವೆ.
ಭಾನುವಾರ (ನವೆಂಬರ್ 25)ರಂದು ಫಿಲಂ ಸಿಟಿಯಲ್ಲಿ ಮಧ್ಯಾಹ್ನ 3:30ರಿಂದ 'ನನಗೆ ಸ್ವತಂತ್ರ ಇದೆಯೇ' ಪ್ರತಿಭಟನೆ ನಡೆಯಲಿದ್ದು, ಭಾರತೀಯ ಚಿತ್ರರಂಗ ಮತ್ತು ಟಿವಿ ಕ್ಷೇತ್ರದ ನಿರ್ದೇಶಕರು, ಬರಹಗಾರರು, ತಂತ್ರಜ್ಞಾನ ಸೇರಿ 600-700 ಜನರು ಇಲ್ಲಿ ಸೇರಲಿದ್ದಾರೆ.
ಭಾನುವಾರ (ನವೆಂಬರ್ 25)ರಂದು 4:15ರಿಂದ 4:30ರ ವರೆಗೆ ಚಿತ್ರೀಕರಣ ಸ್ಥಗಿತಗೊಳ್ಳಲಿದೆ. ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇದ್ದೇವೆಯೇ? ಎಂಬುದನ್ನು ತಿಳಿಯುವುದೂ ಸಹ ಪ್ರತಿಭಟನೆಯ ಉದ್ದೇಶ ಎಂದು ಚಿತ್ರಕರ್ಮಿ ಅಶೋಕ್ ಪಂಡಿತ್ ಹೇಳಿದ್ದಾರೆ.