"ಪುಲ್ವಾಮಾ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಸಾಬೀತುಪಡಿಸಿದ ಇಮ್ರಾನ್ ಖಾನ್!"
ಮುಂಬೈ, ಆಗಸ್ಟ್ 09: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ಬಗ್ಗೆ ಮಾತನಾಡುತ್ತ, "ಮತ್ತೊಂದು ಪುಲ್ವಾಮಾ ದಾಳಿಯನ್ನು ಎದುರಿಸಬೇಕಾಗುತ್ತದೆ" ಎಂದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಮಾತನ್ನು ಶಿವಸೇನೆ ಕಟು ಮಾತುಗಳಿಂದ ಟೀಕಿಸಿದೆ.
"ತಮ್ಮ ಮಾತಿನ ಮೂಲಕ ಇಮ್ರಾನ್ ಖಾನ್ ಫೆಬ್ರವರಿ 14 ರಂದು ನಡೆದ ಪುಲ್ವಾಮಾ ಉಗ್ರದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂಬುದನ್ನು ನೇರವಾಗಿಯೇ ಒಪ್ಪಿಕೊಂಡಿದ್ದಾರೆ" ಎಂದು ಶಿವಸೇನೆ ಹೇಳಿದೆ.
ತನ್ನ ಮುಖವಾಣಿ ಸಾಮ್ನಾದಲ್ಲಿ ಈ ಬಗ್ಗೆ ಬರೆದುಕೊಂಡಿರುವ ಶಿವಸೇನೆ, "ಇಂಥ ಬೇಜವಾಬ್ದಾರಿ ಹೇಳಿಕೆಯಿಂದ ಪಾಕಿಸ್ತಾನಕ್ಕೇ ನಷ್ಟ. ಭಾರತಕ್ಕೆ ಇದರಿಂದ ಯಾವ ನಷ್ಟವೂ ಆಗುವುದಿಲ್ಲ. ಭಾರತ ಏನು ಎಂಬುದು ವಿಶ್ವಕ್ಕೆ ಗೊತ್ತು" ಎಂದು ಅದು ಹೇಳಿದೆ.
"ಪಾಕಿಸ್ತಾನದಿಂದ ಭಾರತೀಯ ಹೈಕಮಿಶನರ್ ಅನ್ನು ಆಚೆ ಕಳಿಸಿದ್ದು, ಮತ್ತು ಭಾರತದಿಂದ ಪಾಕಿಸ್ತಾನಿ ಹೈ ಕಮಿಶ್ನರ್ ಅನ್ನು ವಾಪಸ್ ಕರೆಸಿಕೊಂಡಿದ್ದು, ಪಾಕಿಸ್ತಾನ ಮಾಡಿದ ಅತ್ಯುತ್ತಮ ಕೆಲಸ. ಏಕೆಂದರೆ ಭಾರತದಲ್ಲಿ ಉಗ್ರ ದಾಳಿ ನಡೆಸಲು ಅಂಥವರೇ ಸಹಾಯ ಮಾಡುತ್ತಿದ್ದಿದ್ದು. ಅವರನ್ನು ವಾಪಸ್ ಕರೆಸಿಕೊಂಡಿದ್ದರಿಂದ ಭಾರತಕ್ಕೆ ಯಾವ ಸಮಸ್ಯೆಯೂ ಇಲ್ಲ" ಎಂದು ಶಿವಸೇನೆ ಹೇಳಿದೆ.
ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸುವ ಭಾರತದ ನಿರ್ಧಾರವನ್ನು ಪಾಕಿಸ್ತಾನದ ಸಂಸತ್ತಿನ ಜಂಟಿ ಸದನವನ್ನುದ್ದೇಶಿ ಮಾತನಾಡುವಾಗ ವಿರೋಧಿಸಿದ್ದ ಇಮ್ರಾನ್ ಖಾನ್, "ಭಾರತದ ಈ ನಡೆಯಿಂದ ಅದು ಮತ್ತೊಂದು ಪುಲ್ವಾಮಾ ದಾಳಿಯನ್ನು ಎದುರಿಸಬೇಕಾಗಬಹುದು" ಎಂಬ ಹೇಳಿಕೆ ನೀಡಿದ್ದರು.