ನಾನು ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿಯಲ್ಲ; ಶರದ್ ಪವಾರ್ ಸ್ಪಷ್ಟನೆ
ಮುಂಬೈ, ಜುಲೈ 14: "ರಾಷ್ಟ್ರಪತಿ ಆಯ್ಕೆಗಾಗಿ 2022ರಲ್ಲಿ ನಡೆಯಲಿರುವ ಚುನಾವಣಾ ಅಭ್ಯರ್ಥಿ ನಾನಲ್ಲ" ಎಂದು ಎನ್ಸಿಪಿ ವರಿಷ್ಠ ಶರದ್ ಪವಾರ್ ಹೇಳಿದ್ದಾರೆ.
"ನಾನು ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿಯಲ್ಲ. 2024ರ ಲೋಕಸಭಾ ಚುನಾವಣೆಯ ಪ್ರಧಾನಿ ಅಭ್ಯರ್ಥಿಯೂ ಅಲ್ಲ" ಎಂದು ಬುಧವಾರ ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ಚುನಾವಣೆಗಳು ಇನ್ನೂ ದೂರವಿವೆ. ಕ್ಷಣಕ್ಷಣಕ್ಕೂ ರಾಜಕೀಯ ಸನ್ನಿವೇಶಗಳು ಬದಲಾಗುತ್ತಿರುತ್ತವೆ. ಈ ಚುನಾವಣೆಗಳ ಕುರಿತು ಯೋಚಿಸಿಲ್ಲ" ಎಂದು ತಿಳಿಸಿದ್ದಾರೆ.
ಪಂಜಾಬ್ ಚುನಾವಣೆ ಬಗ್ಗೆ ಚರ್ಚೆ?: ರಾಹುಲ್ ಗಾಂಧಿಯನ್ನು ಭೇಟಿಯಾದ ಚುನಾವಣಾ ಚಾಣಕ್ಯ
ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್, ರಾಹುಲ್ ಗಾಂಧಿ ಹಾಗೂ ಶಿವಸೇನಾ ಮುಖ್ಯ ವಕ್ತಾರ ಸಂಜಯ್ ರಾವತ್ ಅವರನ್ನು ಭೇಟಿ ಮಾಡಿದ್ದು, ಭೇಟಿ ನಂತರ ಸಂಜಯ್ ರಾವತ್ ನೀಡಿದ್ದ ಹೇಳಿಕೆ ಸುದ್ದಿಯಾಗಿತ್ತು. "ಪ್ರಧಾನಿ ಸ್ಥಾನಕ್ಕೆ ಶರದ್ ಪವಾರ್ ಅವರಿಗಿಂತ ಉತ್ತಮ ಅಭ್ಯರ್ಥಿ ಬೇರೆ ಇಲ್ಲ" ಎಂದು ಅವರು ಹೇಳಿದ್ದು ಚರ್ಚೆಯಾಗಿತ್ತು. ಬುಧವಾರ ಈ ಸಂಬಂಧ ಶರದ್ ಪವಾರ್ ಸ್ಪಷ್ಟನೆ ನೀಡಿದ್ದಾರೆ.
"ಮುನ್ನೂರಕ್ಕೂ ಅಧಿಕ ಸಂಸದರನ್ನು ಹೊಂದಿರುವ ಪಕ್ಷ ಆಡಳಿತ ನಡೆಸುತ್ತಿದೆ. ಹೀಗಾಗಿ ರಾಷ್ಟ್ರಪತಿ ಚುನಾವಣೆ ಫಲಿತಾಂಶ ಏನಾಗಲಿದೆ ಎಂಬುದು ನನಗೆ ತಿಳಿದಿದೆ. ನಾನು ರಾಷ್ಟ್ರಪತಿ ಅಭ್ಯರ್ಥಿ ಆಗುವುದಿಲ್ಲ" ಎಂದು ಹೇಳಿದ್ದಾರೆ.