ಶಿವಸೇನೆಗೆ ಬೆಂಬಲ ನೀಡುತ್ತೇವೆ ಎಂದ ಬಿಜೆಪಿ; ನಿಲ್ಲುತ್ತಾ ಮಹಾ ಅ'ಗಾಡಿ'?
ಬೆಂಗಳೂರು, ಮಾರ್ಚ್ 4: ಈ ವರ್ಷದ ಆರಂಭದಲ್ಲಿ ನಡೆದ ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಮಹಾರಾಷ್ಟ್ರ ಗದ್ದುಗೆ ಹಿಡಿದ ಮಹಾ ವಿಕಾಸ್ ಅಘಾಡಿ (ಶೀವಸೇನಾ, ಕಾಂಗ್ರೆಸ್ ಹಾಗೂ ಎನ್ಸಿಪಿ) ತನ್ನ ಅಧಿಕಾರವಧಿಯನ್ನು ಪೂರೈಸುತ್ತಾ? ಎನ್ನುವ ಅನುಮಾನ ಮೂಡತೊಡಗಿದೆ.
ಮಹಾರಾಷ್ಟ್ರದಲ್ಲಿ ಮುಸ್ಲಿಮರಿಗೆ ಶಿಕ್ಷಣದಲ್ಲಿ ಮೀಸಲಾತಿ ನೀಡುವ ಪ್ರಸ್ತಾವನೆ ಮಹಾರಾಷ್ಟ್ರ ರಾಜಕಾರಣದಲ್ಲಿ ಹೊಸ ಬಿರುಗಾಳಿ ಎಬ್ಬಿಸಿದೆ. ಇದು ಮೈತ್ರಿ ಸರ್ಕಾರದಲ್ಲಿ ಬಿರುಕು ಮೂಡಿಸಲು ಕಾರಣವಾಗುತ್ತಿದೆ ಎಂದು ವರದಿಗಳು ಹೊರ ಬಿದ್ದಿವೆ. ಮುಸ್ಲಿಂ ಮೀಸಲಾತಿ ಪ್ರಸ್ತಾವನೆ ಮಹಾರಾಷ್ಟ್ರದಲ್ಲಿ ಮತ್ತೊಂದು ಸುತ್ತಿನ ರಾಜಕೀಯ ಸಮೀಕರಣ ಬದಲಾಯಿಸುವ ಮುನ್ಸೂಚನೆ ನೀಡಿದೆ.
ಸಿಎಎ ವಿರುದ್ಧ ನಿರ್ಣಯ ತೆಗೆದುಕೊಳ್ಳುವುದಿಲ್ಲ; ಅಜಿತ್ ಪವಾರ್
ಮುಸ್ಲಿಂ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಎನ್ಸಿಪಿ ಮೈತ್ರಿ ಸರ್ಕಾರದಿಂದ ಹೊರ ನಡೆದರೆ ಶಿವಸೇನೆಗೆ ಬೆಂಬಲ ನೀಡುವುದಾಗಿ ಬಿಜೆಪಿ ಮುಂದೆ ಬಂದಿದೆ. ಅಲ್ಲಿನ ಬಿಜೆಪಿ ಮುಖಂಡರ ಈ ಹೇಳಿಕೆ ಎನ್ಸಿಪಿ ಹಾಗೂ ಕಾಂಗ್ರೆಸ್ ಮುಖಂಡರ ಅಚ್ಚರಿಗೆ ಕಾರಣವಾಗಿದೆ.
ಏನಿದು ಹೊಸ ಮೀಸಲಾತಿ?
ಮಹಾರಾಷ್ಟ್ರದ ಮಹಾ ವಿಕಾಸ ಅಗಾಡಿ ಮೈತ್ರಿ ಸರ್ಕಾರ ಮುಸ್ಲಿಮರಿಗೆ ಶಿಕ್ಷಣದಲ್ಲಿ ಶೇ.5ರಷ್ಟು ಮೀಸಲಾತಿ ಘೋಷಿಸಲು ಮುಂದಾಗಿದೆ. ಅಘಾಡಿಯ ಪಾಲುದಾರರಾಗಿರುವ ಎನ್ಸಿಪಿ ಹಾಗೂ ಕಾಂಗ್ರೆಸ್ ಈ ಮೀಸಲಾತಿ ಪರವಾಗಿದ್ದರೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಸದ್ಯಕ್ಕೆ ಇದರ ಉಸಾಬರಿ ಬೇಡ ಎನ್ನುತ್ತಿದೆ. ಇದು ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಅಲೆ ಎಬ್ಬಿಸಿದೆ.
ಮೈತ್ರಿ ಮುರಿದರೆ ಬೆಂಬಲ ನೀಡುತ್ತೇವೆ
ಇದರ ನಡುವೆಯೇ ಮುಸ್ಲಿಂ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಎನ್ಸಿಪಿ ಮೈತ್ರಿ ಸರ್ಕಾರದಿಂದ ಹೊರನಡೆದರೆ ಶಿವಸೇನೆಗೆ ಬೆಂಬಲ ನೀಡುವುದಾಗಿ ಬಿಜೆಪಿ ಘೋಷಿಸಿದೆ. ಬಿಜೆಪಿಯ ಈ ಘೋಷಣೆ ಮತ್ತೆ ಹಳೆಯ ದೋಸ್ತಿಗಳು ಒಂದಾಗುವ ಮುನ್ಸೂಚನೆ ನೀಡಿದೆ. ಈ ಕುರಿತು ಮಾತನಾಡಿರುವ ಬಿಜೆಪಿ ಮುಖಂಡ ಸುಧೀರ್ ಮುಂಗಂಟಿವಾರ್, ಮುಸ್ಲಿಂ ಮೀಸಲಾತಿ ವಿಚಾರವಾಗಿ ಮಹಾ ವಿಕಾಸ್ ಅಘಾಡಿ ಸರ್ಕಾರದ ನಡುವೆ ಬಿರುಕು ಮೂಡಿದರೆ, ಶಿವಸೇನೆಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.
ಸಿಎಂ ಠಾಕ್ರೆ ಮೇಲೆ ಒತ್ತಡ
ಮುಸ್ಲಿಂ ಮತ ಬ್ಯಾಂಕ್ ಹಿಡಿತ ಸಾಧಿಸಿರುವ ಎನ್ಸಿಪಿ ಹಾಗೂ ಕಾಂಗ್ರೆಸ್ ಈ ಮೀಸಲಾತಿ ಜಾರಿಗೊಳಿಸಬೇಕು ಎಂಬ ಒತ್ತಾಯವನ್ನು ಮುಖ್ಯಮಂತ್ರಿ ಮೇಲೆ ಹೇರುತ್ತಿವೆ. ಆದರೆ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವುದನ್ನು ಬಿಜೆಪಿ ವಿರೋಧಿಸುತ್ತದೆ. ಅದರಂತೆ ಶಿವಸೇನೆ ಕೂಡ ಮುಸ್ಲಿಂ ಮೀಸಲಾತಿ ವಿರೋಧಿಯಾಗಿದ್ದು, ಕಾಂಗ್ರೆಸ್ ಹಾಗೂ ಎನ್ ಸಿಪಿ ಜೊತೆಗಿನ ಮೈತ್ರಿ ಕಡಿದುಕೊಂಡರೆ ಶಿವಸೇನೆಗೆ ಬೆಂಬಲ ನಿಡುವುದಾಗಿ ಬಿಜೆಪಿ ಮುಖಂಡರು ಹೇಳಿದ್ದಾರೆ.
ಸಿಎಎ ವಿರೋಧಿ ನಿರ್ಣಯ ತೆಗೆದುಕೊಳ್ಳುವುದಿಲ್ಲ
ಮೊನ್ನೆಯಷ್ಟೇ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸಿಎಎ ವಿರುದ್ಧ ನಿರ್ಣಯ ಮಂಡಿಸುವುದಿಲ್ಲ ಎಂದು ಹೇಳಿದ್ದರು. ಇದಕ್ಕೆ ಮಹಾ ಕಾಂಗ್ರೆಸ್ನ ಸಂಪೂರ್ಣ ಒಪ್ಪಿಗೆ ಇರಲಿಲ್ಲ ಎಂದು ವರದಿಗಳೂ ಸಹ ಬಂದಿವೆ. ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಮಹಾರಾಷ್ಟ್ರದ ರಾಜಕೀಯ ಲೆಕ್ಕಾಚಾರ ಬದಲಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.