ಸುಶಾಂತ್ ಸಿಂಗ್ ಕೇಸ್: ಗೆಳತಿ ರಿಯಾ ಚಕ್ರವರ್ತಿಗೆ ಬಂಧನದ ಭೀತಿ!
ಮುಂಬೈ, ಆಗಸ್ಟ್ 03: ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾರೊಬ್ಬರು ಬಂಧನ ಆಗಿಲ್ಲ. ಸದ್ಯದ ಪರಿಸ್ಥಿತಿ ಗಮನಿಸಿದರೆ ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿ ಬಂಧನ ಆಗುವ ಸಾಧ್ಯತೆ ಹೆಚ್ಚಿದೆ.
ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣವನ್ನು ಬಿಹಾರ ಪೊಲೀಸರು ಮತ್ತು ಮುಂಬೈ ಪೊಲೀಸರು ಪ್ರತ್ಯೇಕವಾಗಿ ತನಿಖೆ ಮಾಡುತ್ತಿದ್ದಾರೆ. ಎರಡು ರಾಜ್ಯದ ಪೊಲೀಸರ ನಡುವೆ ಸಮಯನ್ವಯದ ಕೊರತೆ ಉಂಟಾಗಿದ್ದು, ಭಿನ್ನಾಭಿಪ್ರಾಯವೂ ಜೋರಾಗಿದೆ. ಮುಂಬೈ ಪೊಲೀಸರು ರಿಯಾ ಹಾಗೂ ಬಾಲಿವುಡ್ ಗೆ ರಕ್ಷಣೆ ಕೊಡುತ್ತಿದ್ದಾರೆ ಎಂಬ ಟೀಕೆ ಎದುರಾಗಿದೆ.
ಸುಶಾಂತ್ ಕೇಸ್: ತನಿಖೆಗಾಗಿ ಮುಂಬೈಗೆ ಬಂದ ಬಿಹಾರ ಪೊಲೀಸ್ಗೆ ಕ್ವಾರಂಟೈನ್!
ಇದರ ಪರಿಣಾಮ ಸುಶಾಂತ್ ಸಿಂಗ್ ಕೇಸ್ ರಾಜಕೀಯ ತಿರುವು ಪಡೆದುಕೊಂಡಿದೆ. ಬಿಹಾರದಲ್ಲಿರುವ ಜೆಡಿ(ಯು) ಸರ್ಕಾರ ಮತ್ತು ಮಹಾರಾಷ್ಟ್ರದ ಸಮ್ಮಿಶ್ರ ಸರ್ಕಾರದ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಇಲ್ಲಿಯವರೆಗೂ ನಡೆದ ಘಟನೆಗಳ ಹಿನ್ನೆಲೆ ರಿಯಾ ಚಕ್ರವರ್ತಿಗೆ ಮುಳುವಾಗುವ ಸಾಧ್ಯತೆ ಹೆಚ್ಚಿದೆ. ಈ ಕುರಿತು ಬಿಹಾರ ಪೊಲೀಸರು ಸಹ ಪರೋಕ್ಷವಾಗಿ ಸುಳಿವು ನೀಡಿದ್ದಾರೆ. ಮುಂದೆ ಓದಿ....
ಅಗತ್ಯ ಬಿದ್ದರೆ ರಿಯಾ ವಶಕ್ಕೆ!
ಸುಶಾಂತ್ ಸಿಂಗ್ ರಜಪೂತ್ ಅವರ ತಂದೆ ಪಾಟ್ನಾದಲ್ಲಿ ರಿಯಾ ಚಕ್ರವರ್ತಿ ಮತ್ತು ಇತರೆ ಆರು ಜನರ ವಿರುದ್ಧ ದೂರು ನೀಡಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ, ವಂಚನೆ ಹಾಗೂ ಗೌರವಕ್ಕೆ ಧಕ್ಕೆ ತರುವ ಯತ್ನ ಆರೋಪದಲ್ಲಿ ಎಫ್ ಐ ಆರ್ ದಾಖಲಾಗಿದೆ. ಇಲ್ಲಿಯವರೆಗೂ ಈ ಎಫ್ ಐ ಆರ್ ಗೆ ಸಂಬಂಧಿಸಿದಂತೆ ರಿಯಾ ಅವರ ಹೇಳಿಕೆ ಪಡೆದಿಲ್ಲ. ''ಸದ್ಯಕ್ಕೆ ರಿಯಾ ಅವರನ್ನು ಬಂಧಿಸುವ ಉದ್ದೇಶ ಇಲ್ಲ, ಅಗತ್ಯ ಬಿದ್ದರೆ ಅವರನ್ನು ವಶಕ್ಕೆ ಪಡೆಯಲಾಗುವುದು'' ಎಂದು ಪಾಟ್ನಾ ಐಪಿಎಸ್ ಅಧಿಕಾರಿ ಹೇಳಿದ್ದಾರೆ, ಇದು ರಿಯಾಗೆ ಆತಂಕ ಹೆಚ್ಚಿಸಿದೆ.
ಮುಂಬೈನಲ್ಲಿ ಬಿಹಾರ ಪೊಲೀಸ್ ಬಲವಂತದ ಕ್ವಾರಂಟೈನ್!
ಸುಶಾಂತ್ ಸಿಂಗ್ ಸಾವಿನ ಪ್ರಕರಣದ ತನಿಖೆಗಾಗಿ ಬಿಹಾರ ಪೊಲೀಸ್ ತಂಡ ಮುಂಬೈಗೆ ಆಗಮಿಸಿದೆ. ಆದರೆ, ಮುಂಬೈ ಪೊಲೀಸರಿಂದ ಸಹಕಾರ ಸಿಗುತ್ತಿಲ್ಲ ಎಂದು ಪಾಟ್ನಾ ಅಧಿಕಾರಿಗಳು ದೂರಿದ್ದಾರೆ. ಈ ಮಧ್ಯೆ ಓರ್ವ ಬಿಹಾರ ಅಧಿಕಾರಿಯನ್ನು ಬಲವಂತವಾಗಿ ಕ್ವಾರಂಟೈನ್ ಮಾಡಲಾಗಿದೆ ಎಂಬ ಸುದ್ದಿ ರಾಜಕೀಯವಾಗಿ ಸದ್ದು ಮಾಡುತ್ತಿದೆ. ಮುಂಬೈ ಪೊಲೀಸರು ಮರಣೋತ್ತರ ಪರೀಕ್ಷೆ, ಎಫ್ ಐ ಆರ್ ವಿವರಣೆ, ತನಿಖೆಯ ವಿವರಣೆ ಹಾಗೂ ಇನ್ನಿತರೆ ದಾಖಲೆಗಳನ್ನು ನಮಗೆ ನೀಡಿಲ್ಲ. ಹಾಗಾಗಿ, ನಾವೇ ಪಡೆಯುತ್ತಿದ್ದೇವೆ'' ಎಂದು ಪಾಟ್ನಾ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮುಂಬೈ ಪೊಲೀಸ್ Vs ಬಿಹಾರ ಪೊಲೀಸ್: ಸುಶಾಂತ್ ಸಾವಿನ ಹಿಂದೆ ಏನೆಲ್ಲಾ ಅಗುತ್ತಿದೆ?
ಕ್ವಾರಂಟೈನ್ ಖಂಡಿಸಿದ ಬಿಹಾರ ಸಿಎಂ
ಸುಶಾಂತ್ ಸಿಂಗ್ ಪ್ರಕರಣದಲ್ಲಿ ತನಿಖೆಗಾಗಿ ಮುಂಬೈಗೆ ಹೋಗಿದ್ದ ಬಿಹಾರ ಅಧಿಕಾರಿಯನ್ನು ಕ್ವಾರಂಟೈನ್ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಬಿಹಾರ ಸಿಎಂ ನಿತೇಶ್ ಕುಮಾರ್ ''ಈಗ ಆಗಿರುವುದು ಸರಿಯಲ್ಲ. ಇದರಲ್ಲಿ ಯಾವ ರಾಜಕೀಯವೂ ಇಲ್ಲ. ಬಿಹಾರ ಪೊಲೀಸರು ತಮ್ಮ ಕರ್ತವ್ಯ ಮಾಡುತ್ತಿದ್ದಾರೆ. ಹಿರಿಯ ಅಧಿಕಾರಿಗಳು ಮಾತನಾಡುತ್ತಾರೆ'' ಎಂದು ಹೇಳಿದ್ದಾರೆ.
ಆರೋಪ, ಟೀಕೆಗಳಿಗೆ ಡೋಂಟ್ಕೇರ್
ಸುಶಾಂತ್ ಸಿಂಗ್ ಪ್ರಕರಣದಲ್ಲಿ ಇಷ್ಟೆಲ್ಲಾ ಗೊಂದಲ ನಡೆಯುತ್ತಿದ್ದರೂ ಮಹಾರಾಷ್ಟ್ರ ಸರ್ಕಾರ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಸದ್ಯದ ಬೆಳವಣಿಗೆಗಳ ಬಗ್ಗೆ ಮಾತನಾಡಿದ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ''ಮುಂಬೈ ಪೊಲೀಸ್ ತನಿಖೆ ಸರಿಯಾದ ರೀತಿಯಲ್ಲಿ, ವೃತ್ತಿಪರ ರೀತಿಯಲ್ಲಿ ನಡೆಯುತ್ತಿದೆ'' ಎಂದು ಹೇಳಿ ಹೊರಟು ಹೋದರು.
ಸಿಬಿಐ ತನಿಖೆಗೂ ಹೆಚ್ಚಿದ ಆಗ್ರಹ
ಇಷ್ಟೆಲ್ಲ ಬೆಳವಣಿಗೆ ಮಧ್ಯೆ ಸಿಬಿಐ ತನಿಖೆಗೆ ಒತ್ತಾಯ ಹೆಚ್ಚಿದೆ. ಮಹಾರಾಷ್ಟ್ರ ಸರ್ಕಾರದ ಮೇಲೆ ವಿರೋಧ ಪಕ್ಷ ಸೇರಿ ಅಭಿಮಾನಿಗಳು, ಕುಟುಂಬಸ್ಥರು ಸಿಬಿಐ ತನಿಖೆಗೆ ವಹಿಸಿ ಎಂದು ಆಗ್ರಹಿಸಿದ್ದಾರೆ. ಆದರೆ, ಮಹಾರಾಷ್ಟ್ರ ಸರ್ಕಾರ ಸಾಧ್ಯವಿಲ್ಲ, ಮುಂಬೈ ಪೊಲೀಸರೇ ತನಿಖೆ ಮಾಡ್ತಾರೆ ಎಂದಿದೆ. ಆದರೆ, ಬಿಹಾರ ಸರ್ಕಾರ ಸಿಬಿಐಗೆ ನೀಡಲು ಸಮ್ಮತಿ ಸೂಚಿಸಿದೆ. ಕುಟುಂಬದವರು ಆಗ್ರಹಿಸಿದರೆ ಸಿಬಿಐ ತನಿಖೆಗೆ ನೀಡಲು ಶಿಫಾರಸ್ಸು ಮಾಡುತ್ತೇವೆ ಎಂದು ಸಿಎಂ ನಿತೇಶ್ ಕುಮಾರ್ ತಿಳಿಸಿದ್ದಾರೆ.