ಸಿದ್ದರಾಮಯ್ಯಗೆ ಕೈಕೊಟ್ಟ ಎಂಟಿಬಿ ನಾಗರಾಜು ಕೊಟ್ಟ ಕಾರಣವೇನು?
Recommended Video
ಮುಂಬೈ, ಜುಲೈ 14: ನಿನ್ನೆ ಸಿದ್ದರಾಮಯ್ಯ ಅವರ ಸಂಧಾನದ ಬಳಿಕ ರಾಜೀನಾಮೆ ಹಿಂಪಡೆಯಲು ಒಪ್ಪಿದ್ದ ಎಂಟಿಬಿ ನಾಗರಾಜು ಇಂದು ಏಕಾ-ಏಕಿ ಕಾಂಗ್ರೆಸ್ಗೆ ಕೈಕೊಟ್ಟ ಮುಂಬೈಗೆ ಹಾರಿ ಅತೃಪ್ತರ ಬಣ ಸೇರಿದ್ದಾರೆ. ಮತ್ತು ಅಲ್ಲಿ ತಮ್ಮ ಈ ನಡೆಗೆ ಕಾರಣ ತಿಳಿಸಿದ್ದಾರೆ.
ಇಂದು ಅತೃಪ್ತ ಶಾಸಕರು ಸುದ್ದಿಗೋಷ್ಠಿ ನಡೆಸಿದ ಸಂದರ್ಭ ಮಾಧ್ಯಮಗಳೊಟ್ಟಿಗೆ ಚುಟುಕಾಗಿ ಮಾತನಾಡಿದ ಎಂಟಿಬಿ ನಾಗರಾಜು ಅವರು, ರಾಜೀನಾಮೆ ವಾಪಸ್ ಪಡೆಯುವುದಿಲ್ಲ ಎಂದರು.
ರಾಜೀನಾಮೆ ವಾಪಸ್ ಪಡೆಯುತ್ತೇನೆ ಎಂದು ಹೇಳಿರಲಿಲ್ಲವೆಂದು ಯೂಟರ್ನ್ ಹೊಡೆದ ಶಾಸಕ ಎಂಟಿಬಿ ನಾಗರಾಜು, ಸುಧಾಕರ್ ಅವರು ರಾಜೀನಾಮೆ ವಾಪಸ್ ಪಡೆದರೆ ನಾನು ಪಡೆಯುತ್ತೇನೆ ಎಂದಿದ್ದೆ ಎಂದು ಹೇಳಿದರು.
ಈಗಲೂ ಆ ಮಾತಿಗೆ ಬದ್ಧವಾಗಿದ್ದೇನೆ, ಸುಧಾಕರ್ ರಾಜೀನಾಮೆ ವಾಪಸ್ ಪಡೆದರೆ ನಾನು ಪಡೆಯುತ್ತೇನೆ. ಸದ್ಯಕ್ಕೆ ಸುಧಾಕರ್ ಅವರು ಸುರಕ್ಷಿತ ಸ್ಥಳದಲ್ಲಿ ಇದ್ದು, ಅವರು ಬಂದ ನಂತರ ನಮ್ಮ ಮುಂದಿನ ನಡೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.
ತಾವು ಆಪರೇಷನ್ ಕಮಲಕ್ಕೆ ಬಲಿ ಆಗಿಲ್ಲ ಎಂದ ಎಂಟಿಬಿ ನಾಗರಾಜು, ನಾನು ಅಶೋಕ್ ಅವರ ಜೊತೆ ಮುಂಬೈಗೆ ಬಂದಿಲ್ಲ, ನಾನು ಹೊರಡುವ ಸಂದರ್ಭದಲ್ಲಿ ಆರ್.ಅಶೋಕ್ ಎಚ್ಎಎಲ್ಗೆ ಬಂದಿದ್ದು ಕಾಕತಾಳೀಯ ಇರಬಹುದು ಎಂದರು.
ಪತ್ರಕರ್ತರ ಪ್ರಶ್ನೆಗಳನ್ನು ಎದುರಿಸಲು ಮೊದಲಿಗೆ ಆತಂಕ ವ್ಯಕ್ತಪಡಿಸಿದ ಎಂಟಿಬಿ ನಾಗರಾಜು ಅವರು ಬೇಗನೇ ಸುದ್ದಿಗೋಷ್ಠಿ ಮುಗಿಸಿ ಹೊರಡುವ ಆತುರ ವ್ಯಕ್ತಪಡಿಸಿದರು. ಪ್ರಶ್ನೆಗಳನ್ನು ಸಹ ಭಯದಿಂದಲೇ ಎದುರಿಸಿದರು.