ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸಹೋದರಿ ಮನೆ ಮೇಲೆ ಐಟಿ ದಾಳಿ
ಮುಂಬೈ, ಅಕ್ಟೋಬರ್ 07: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಹೋದರಿಉ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದೇಶದ ಹಲವೆಡೆ ದಾಳಿ ನಡೆಸಿರುವಂತೆ ಮಹಾರಾಷ್ಟ್ರದ ಹಲವು ನಗರಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಡಿಬಿ ರಿಯಾಲಿಟಿ ಸೇರಿದಂತೆ ಹಲವು ನಿರ್ಮಾಣ ಕಂಪನಿಗಳ ವಿರುದ್ಧ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಾಜಿ ಸಿಎಂ ಯಡಿಯೂರಪ್ಪ ಪಿಎ ಉಮೇಶ್ ಮನೆ ಮೇಲೆ ಐಟಿ ದಾಳಿ ಯಾಕೆ? ಇಲ್ಲಿದೆ ಮಾಹಿತಿ!
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಜಿತ್ ಪವಾರ್ ರೇಡ್ ನಡೆಸುವುದು ಅವರ ಕರ್ತವ್ಯ ಎಂದಿದ್ದು, ಈಗ ನಡೆದಿರುವ ದಾಳಿ ರಾಜಕೀಯ ಪ್ರೇರಿತವಾಗಿದೆ. ನಾನು ತೆರಿಗೆ ಕಟ್ಟುತ್ತಿದ್ದೇವೆ. ನಮಗೆ ತೆರಿಗೆ ಕಟ್ಟುವುದು ಹೇಗೆ ಎಂಬುದು ಗೊತ್ತಿದೆ ಎಂದರು.
ನನ್ನ ಸಹೋದರಿಯ ಮನೆಯ ಮೇಲೆಯೂ ಕೂಡಾ ದಾಳಿ ನಡೆಸಲಾಗಿದೆ. ರಾಜಕೀಯ ಅಧಃಪತನಗೊಳ್ಳುತ್ತಿದೆ. ಸರ್ಕಾರದ ಏಜೆನ್ಸಿಗಳನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ನನ್ನ ಸಹೋದರಿ ಎಂಬ ಕಾರಣಕ್ಕೆ ದಾಳಿ ನಡೆಸಲಾಗಿದೆ. ಕೇಂದ್ರವು ಕೇಂದ್ರದ ಕೆಲಸವನ್ನು ಮಾಡಬೇಕು ಮತ್ತು ರಾಜ್ಯಗಳು ರಾಜ್ಯದ ಕೆಲಸವನ್ನು ಮಾಡುತ್ತವೆ ಎಂದು ಪವಾರ್ ಹೇಳಿದ್ದಾರೆ.
ಮುಂಬೈ, ಪುಣೆ, ಸತಾರಾ, ದೌಂಡ್ ಮತ್ತು ಕೊಲ್ಹಾಪುರದಲ್ಲಿರುವ ಕಂಪನಿಗಳ ಮೇಲೆ ದಾಳಿ ನಡೆಸಲಾಗಿದ್ದು, ಮಹಾರಾಷ್ಟ್ರ ಹಿರಿಯ ಸಚಿವರೊಬ್ಬರಿಗೆ ನಿಕಟ ಸಂಪರ್ಕದಲ್ಲಿರುವ ಉದ್ಯಮಿಗಳ ಕಂಪನಿಗಳ ಮೇಲೆ ದಾಳಿ ನಡೆಸಲಾಗಿದೆ.
ಈ ಮಧ್ಯೆ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಂಬಂಧಿಯೋರ್ವರು ನಡೆಸುತ್ತಿದ್ದ ಜಾರಂದೇಶ್ವರ ಸಕ್ಕರೆ ಕಾರ್ಖಾನೆಯ ಮೇಲೆಯೂ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಕರ್ನಾಟಕದಲ್ಲೂ ಐಟಿ ದಾಳಿ: ಬೆಂಗಳೂರಿನ ಭಾಷ್ಯಂ ಸರ್ಕಲ್ನಲ್ಲಿರುವ ಬಿಎಸ್ ಯಡಿಯೂರಪ್ಪ ಆಪ್ತ ಸಹಾಯಕ ಉಮೇಶ್ ಮನೆ ಮತ್ತು ಕಚೇರಿ ಸೇರಿ 4 ಕಡೆಗಳಲ್ಲಿ ಐಟಿ ದಾಳಿ ನಡೆದಿದೆ.
ಉಮೇಶ್ ಅವರು ಮಾಜಿ ಸಿಎಂ ಯಡಿಯೂರಪ್ಪ, ಸಂಸದ ರಾಘವೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಮೂವರಿಗೂ ಪಿಎ ರೀತಿ ಕೆಲಸ ಮಾಡುತ್ತಿದ್ದರು. ರಾಘವೇಂದ್ರ ಬೆಂಗಳೂರಿಗೆ ಬಂದಾಗ ರಾಘವೇಂದ್ರ ಅವರ ಕೆಲಸಗಳ ನಿರ್ವಹಣೆ ಮಾಡುತ್ತಿದ್ದರು. ಯಡಿಯೂರಪ್ಪ ವಿಪಕ್ಷ ನಾಯಕರಾಗಿದ್ದಾಗ ಮತ್ತು ಮುಖ್ಯಮಂತ್ರಿ ಆಗಿದ್ದಾಗ ಅವರಿಗೆ ಉಮೇಶ್ ಪಿಎ ಆಗಿದ್ದರು.
ಶಿವಮೊಗ್ಗ ಮೂಲದ ಉಮೇಶ್, ಬಾಷ್ಯಂ ಸರ್ಕಲ್ ನಲ್ಲಿ 15 x 40 ಅಳತೆಯ ಮನೆಯೊಂದರಲ್ಲಿ ಬಾಡಿಗೆಗೆ ಇದ್ದಾರೆ. ಈ ಮನೆಗೆ ಬಂದು ಸುಮಾರು 8 ವರ್ಷ ಆಗಿರಬಹುದು. ಆದರೆ ಇಷ್ಟು ಚಿಕ್ಕ ಮನೆಗೇ ಭಾರೀ ಪ್ರಮಾಣದ ಸರ್ಕಾರಿ ಭದ್ರತೆ ಹಾಕಿಸಿಕೊಂಡಿದ್ದರು. ಆಯನೂರು ಮೂಲದ ಉಮೇಶ್ ಅವರು ಆಯನೂರು ಮಂಜುನಾಥ್ ಅವರಿಗೆ ಮೊದಲು ಪಿಎ ಆಗಿದ್ದರು.
ಯಡಿಯೂರಪ್ಪ ಜೊತೆ 2008 ರಿಂದಲೂ ಇದ್ದಾರೆ. ಉಮೇಶ್ ಈಗಲೂ ಕೂಡ ಸರ್ಕಾರಿ ವಾಹನವನ್ನ ಬಳಸುತ್ತಿದ್ದಾರೆ. ವರ್ಗಾವಣೆ, ಕಡತ ವಿಲೇವಾರಿಯಂತಹ ಕೆಲಸ ಉಮೇಶ್ ಮಾಡುತ್ತಿದ್ದರು ಅನ್ನೋ ಆರೋಪಗಳು ಇವೆ. ನೀರಾವರಿ ಇಲಾಖೆಯ ಪ್ರಮುಖ ಕಡತಗಳನ್ನ ವಿಲೇವಾರಿ ಮಾಡುತ್ತಿದ್ದ ಅನ್ನೋ ಆರೋಪವೂ ಇವರ ಮೇಲಿದೆ.
BSY ಮುಖ್ಯಮಂತ್ರಿ ಆಗಿದ್ದಾಗ ಪಿಎ ಆಗಿದ್ದ ಉಮೇಶ್ ಅದಕ್ಕೂ ಮೊದಲು ಬಿಎಂಟಿಸಿ ಬಸ್ ಕಂಡಕ್ಟರ್ ಕಂ ಡ್ರೈವರ್ ಆಗಿದ್ದ. ಯಲಹಂಕದ ಪುಟ್ಟೇನಹಳ್ಳಿ ಬಿಎಂಟಿಸಿ ಡಿಪೋದಲ್ಲಿ ಕೆಲಸ ಮಾಡುತ್ತಿದ್ದ. ಡೆಪ್ಯುಟೇಷನ್ ಮೇಲೆ ಬಿಎಸ್ವೈ ಆಪ್ತನಾಗಿ ಕೆಲಸ ಮಾಡ್ತಿದ್ದ ಉಮೇಶ್ ಭಾಷ್ಯಂ ಸರ್ಕಲ್ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ.
ಭಾಷ್ಯಂ ಸರ್ಕಲ್ನಲ್ಲಿ ಉಮೇಶ್ ಸುಮಾರು 10 ವರ್ಷದಿಂದ ಬಾಡಿಗೆ ಮನೆಯಲ್ಲಿದ್ದಾರೆ. ಆ ಬಾಡಿಗೆ ಮನೆಯಲ್ಲಿಯೇ ಆದಾಯ ತೆರಿಗೆ ಇಲಾಖೆಯ 10 ಅಧಿಕಾರಿಗಳಿಂದ ಉಮೇಶ್ ವಿಚಾರಣೆ ನಡೆದಿದೆ. ಇನ್ನು ಯಡಿಯೂರಪ್ಪ ಅವರು ಶಿವಮೊಗ್ಗಕ್ಕೆ ತೆರಳಿದ್ದಾರೆ.