ಒಲ್ಲದ ಮನಸ್ಸಿನಲ್ಲೇ ಡಿಸಿಎಂ ಹುದ್ದೆ ಒಪ್ಪಿಕೊಂಡರೇ ಮಾಜಿ ಸಿಎಂ ದೇವೇಂದ್ರ?
ಮುಂಬೈ, ಜೂನ್ 30: "ಮಹಾರಾಷ್ಟ್ರದಲ್ಲಿ ಉಪ ಮುಖ್ಯಮಂತ್ರಿ ಎಂಬ 2ನೇ ಸ್ಥಾನವನ್ನು ದೇವೇಂದ್ರ ಫಡ್ನವೀಸ್ ಸಂತೋಷದಿಂದ ಒಪ್ಪಿಕೊಂಡಿಲ್ಲ ಎಂಬುದು ನನ್ನ ಭಾವನೆ" ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ರಾಜ್ಯದ ನೂತನ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ಆಗಿ ದೇವೇಂದ್ರ ಫಡ್ನವೀಸ್ ಪದಗ್ರಹಣ ಮಾಡಿರುವ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದರು.
Timeline: ಮಹಾ ವಿಕಾಸ ಅಘಾಡಿ ಸರ್ಕಾರದ ಅಂದಿನ ಹುಟ್ಟಿನಿಂದ ಇಂದಿನ ಪತನದವರೆಗೆ!
"ಡಿಸಿಎಂ ಆಗಿರುವುದಕ್ಕೆ ದೇವೇಂದ್ರ ಫಡ್ನವೀಸ್ ಸಂತೋಷವಾಗಿಲ್ಲ ಎಂಬುದು ಆತನ ಮುಖದ ಮೇಲೆಯೇ ಎದ್ದು ಕಾಣುತ್ತಿದೆ. ಆದರೆ ಅವರು ನಾಗ್ಪುರದಲ್ಲಿ ವಾಸಿಸುತ್ತಿದ್ದು, ಅದು ಆರ್ಎಸ್ಎಸ್ ನೀತಿಯಾಗಿದೆ. ಆದ್ದರಿಂದ ಮರು ಮಾತನಾಡದೇ ಅವರು ಡಿಸಿಎಂ ಸ್ಥಾನವನ್ನು ಒಪ್ಪಿಕೊಂಡಿದ್ದಾರೆ" ಎಂದು ಶರದ್ ಪವಾರ್ ಹೇಳಿದ್ದಾರೆ.
ನಂಬಿದವರಿಗೆ ಸಂಪೂರ್ಣ ಜವಾಬ್ದಾರಿ ನೀಡಿದ್ದೇ ತಪ್ಪಾ?: ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಒಮ್ಮೆ ಯಾರನ್ನಾದರೂ ನಂಬಿದರೆ ಅಂಥವರಿಗೆ ಸಂಪೂರ್ಣ ಜವಾಬ್ದಾರಿಯನ್ನು ನೀಡುತ್ತಾರೆ. ಹಾಗೆಂದು ನಾನೂ ಕೂಡಾ ಭಾವಿಸುತ್ತೇನೆ. ಅದೇ ವಿಶ್ವಾಸವನ್ನು ಏಕನಾಥ್ ಶಿಂಧೆ ಮೇಲೆ ತೋರಿಸಿದ್ದರು. ಅವರಿಗೆ ವಿಧಾನಸಭೆ ಹಾಗೂ ಪಕ್ಷದ ಜವಾಬ್ದಾರಿಯನ್ನು ನೀಡಿದ್ದರು. ಇದು ರಾಜಕೀಯ ಬಿಕ್ಕಟ್ಟಿನ ಪರಿಣಾಮವೋ ಏನೋ ಎಂಬುದು ನನಗೆ ಗೊತ್ತಿಲ್ಲ ಎಂದು ಶರದ್ ಪವಾರ್ ಹೇಳಿದರು.
ಏಕನಾಥ್ ಶಿಂಧೆಗೆ ಶುಭಾಷಯ ಕೋರಿದ್ದೇನೆ ಎಂದ ಪವಾರ್: "ನಾನೂ ಸಹ ಏಕನಾಥ್ ಶಿಂಧೆ ಜೊತೆಗೆ ಮಾತನಾಡಿ ಶುಭಾಶಯಗಳನ್ನು ಕೋರಿದ್ದೇನೆ. ರಾಜ್ಯದ ಮುಖ್ಯಸ್ಥರು ಇಡೀ ರಾಜ್ಯವನ್ನು ಮುನ್ನಡೆಸುತ್ತಾರೆಯೇ ಹೊರತು ಕೇವಲ ಪಕ್ಷವನ್ನು ಅಲ್ಲ ಎಂಬುದು ನನ್ನ ನಿರೀಕ್ಷೆ ಆಗಿದೆ. ನೀವು ಈಗ ಒಂದು ಪಕ್ಷವನ್ನು ಪ್ರತಿನಿಧಿಸಬಹುದು, ಆದರೆ ಪ್ರಮಾಣ ವಚನದ ನಂತರ ನೀವು ಇಡೀ ರಾಜ್ಯವನ್ನು ಪ್ರತಿನಿಧಿಸುತ್ತೀರಿ. ಆದ್ದರಿಂದ, ಅವರು ಎಲ್ಲಾ ಇಲಾಖೆಗಳ ಸಮಸ್ಯೆಗಳನ್ನು ಪರಿಹರಿಸಲು ಕೆಲಸ ಮಾಡುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ, ಎಂದು ಶರದ್ ಪವಾರ್ ಹೇಳಿದ್ದಾರೆ.