ನೀವು ವಿಲನ್ ಆಗಿದ್ದಕ್ಕೆ ನಾನು ಹೀರೋ ಹಾಗೆ ಕಾಣುತ್ತಿದ್ದೇನೆ ಎಂದ ಕಂಗನಾ!
ಮುಂಬೈ, ನವೆಂಬರ್.27: ನೀವು ಖಳನಾಯಕರಂತೆ ವರ್ತಿಸಿದ್ದಕ್ಕೆ ನಾನು ಇಂದು ಹೀರೋನಂತೆ ಕಾಣುತ್ತಿದ್ದೇನೆ. ಬಾಲಿವುಡ್ ನಟಿ ಕಂಗನಾ ರಣಾವತ್ ಮಹಾರಾಷ್ಟ್ರ ಸರ್ಕಾರ ಮತ್ತು ಮುಂಬೈ ಮಹಾನಗರ ಪಾಲಿಕೆ ನಡೆಯ ಬಗ್ಗೆ ಈ ಹೇಳಿಕೆಯನ್ನು ನೀಡಿ ಸುದ್ದಿ ಆಗಿದ್ದಾರೆ.
ಕಳೆದ ಸಪ್ಟೆಂಬರ್ ನಲ್ಲಿ ನಟಿ ಕಂಗನಾ ರಾವತ್ ಅವರ ನಿವಾಸದ ಒಂದು ಭಾಗವನ್ನು ಒಡೆದು ಹಾಕಲಾಗಿತ್ತು. ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳ ಕೃತ್ಯವು ದುರುದ್ದೇಶದಿಂದ ಕೂಡಿತ್ತು ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಕಂಗನಾ ರಣಾವತ್ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ನಿಮ್ಮ ಮಗನ ವಯಸ್ಸಿನವಳು, ನಾಚಿಕೆಯಾಗಬೇಕು: ಸಿಎಂ ಠಾಕ್ರೆ ವಿರುದ್ದ ಗುಡುಗಿದ ಕಂಗನಾ ರಣಾವತ್
"ಯಾವಾಗ ಒಬ್ಬ ವ್ಯಕ್ತಿಯು ಒಂದು ವ್ಯವಸ್ಥೆ ಮತ್ತು ಸರ್ಕಾರದ ವಿರುದ್ಧ ಹೋರಾಡಿ ಗೆಲುವು ಸಾಧಿಸುತ್ತಾನೋ, ಅದು ಆ ವ್ಯಕ್ತಿಯ ಗೆಲುವು ಆಗಿರುವುದಿಲ್ಲ ಬದಲಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಗೆಲುವು ಆಗಿರುತ್ತದೆ" ಎಂದು ಕಂಗನಾ ರಣಾವತ್ ಹೇಳಿದ್ದಾರೆ. ಅಲ್ಲದೇ ತಮ್ಮ ಹೋರಾಟದಲ್ಲಿ ಜೊತೆಗಿದ್ದು ಬೆಂಬಲಿಸಿದ ಎಲ್ಲ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
"ನೀವು ಖಳನಾಯಕರಾಗಿದ್ದಕ್ಕೆ ನಾನು ಹೀರೋ"
ನನ್ನ ಕನಸಿನ ಗೋಪುರವೇ ಕುಸಿದ ಸಂದರ್ಭದಲ್ಲಿ ನನಗೆ ಆತ್ಮಸ್ಥೈರ್ಯ ತುಂಬಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಲು ಬಯಸುತ್ತೇನೆ. ಇದರ ಜೊತೆಗೆ ಅಂದಿನ ನನ್ನ ಪರಿಸ್ಥಿತಿ ನೋಡಿಕೊಂಡು ನಕ್ಕವರಿಗೂ ಧನ್ಯವಾದ ತಿಳಿಸುತ್ತೇನೆ. ಏಕೆಂದರೆ ಅಂದು ನೀವು ಖಳನಾಯಕರಂತೆ ವರ್ತಿಸಿದಕ್ಕಾಗಿ ಇಂದು ನಾನು ಎಲ್ಲರ ಎದುರಿಗೆ ನಾಯಕನಂತೆ ಕಾಣಿಸಿಕೊಳ್ಳುತ್ತಿದ್ದೇನೆ" ಎಂದು ಕಂಗನಾ ರಣಾವತ್ ಹೇಳಿದ್ದಾರೆ.
ಪರಿಹಾರ ತುಂಬಿಕೊಡುವ ಬಗ್ಗೆ ಕೋರ್ಟ್ ಉಲ್ಲೇಖ:
ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ಸೇರಿದ ಕಟ್ಟಡ ಒಡೆದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿರುವ ನಷ್ಟದ ಕುರಿತು ಮಾಹಿತಿ ಸಂಗ್ರಹಿಸಲು ಮೌಲ್ಯಮಾಪಕರನ್ನು ನೇಮಿಸಬೇಕು. ನಷ್ಟದ ಮೌಲ್ಯದ ಕುರಿತು ಈ ಅಧಿಕಾರಿಗಳು ಹೈಕೋರ್ಟ್ ಗೆ ವರದಿ ಸಲ್ಲಿಸಬೇಕು. ತದನಂತರದಲ್ಲಿ ನಷ್ಟ ತುಂಬಿಕೊಡುವ ಉದ್ದೇಶದಿಂದ ಪರಿಹಾರವನ್ನು ಎಷ್ಟು ಪ್ರಮಾಣದಲ್ಲಿ ನೀಡಬೇಕು ಎನ್ನುವುದರ ಕುರಿತು ಆದೇಶಿಸಲಾಗುತ್ತದೆ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಎಸ್ ಜೆ ಕಥಾವಾಲಾ ಮತ್ತು ನ್ಯಾ. ರಿಯಾಜ್ ಚಾಗ್ಲಾ ನೇತೃತ್ವದ ದ್ವಿಸದಸ್ಯ ಪೀಠವು ಎರಡು ತಿಂಗಳ ಸುದೀರ್ಘ ವಿಚಾರಣೆ ಬಳಿಕ ಈ ತೀರ್ಪು ಹೊರಡಿಸಿತ್ತು.