ನಾನು ಕ್ಷಮೆ ಕೇಳೋದು ದೇಶಕ್ಕೆ ಮಾತ್ರ, ಏರ್ ಲೈನ್ಸ್ ಗಲ್ಲ! ರವೀಂದ್ರ ಗಾಯಕ್ ವಾಡ್
ಏರ್ ಇಂಡಿಯಾ ಸಿಬ್ಬಂದಿಯ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದ ಶಿವಸೇನೆಯ ಸಂಸದ ರವೀಂದ್ರ ಗಾಯಕ್ ವಾಡ್ ತಮ್ಮ ವರ್ತನೆಗೆ ದೇಶದ ಜನರ ಕ್ಷಮೆ ಯಾಚಿಸಿದ್ದಾರೆ.
ಏರ್ ಇಂಡಿಯಾ ಸಿಬ್ಬಂದಿಯ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದ ಶಿವಸೇನೆಯ ಸಂಸದ ರವೀಂದ್ರ ಗಾಯಕ್ ವಾಡ್ ತಮ್ಮ ವರ್ತನೆಗೆ ದೇಶದ ಜನರ ಕ್ಷಮೆ ಯಾಚಿಸಿದ್ದಾರೆ.
ನಾನು ಸಂಸತ್ತನ್ನೂ, ನಮ್ಮ ನಾಯಕ ಉದ್ದವ್ ಠಾಕ್ರೆ ಅವರನ್ನು ಅತ್ಯಂತ ಗೌರವದಿಂದ ಕಾಣುತ್ತೇನೆ. ನನ್ನ ವರ್ತನೆಯಿಂದ ನಿಮಗೆ ನೋವಾಗಿದ್ದರೆ ಕ್ಷಮಿಸಿ, ಆದರೆ ನಾನು ಯಾವುದೇ ಕಾರಣಕ್ಕೂ ಏರ್ ಲೈನ್ಸ್ ಅಧಿಕಾರಿಗಳಲ್ಲಿ ಕ್ಷಮೆ ಕೇಳುವುದಿಲ್ಲ ಎಂದು ಸಂಸತ್ತಿನಲ್ಲಿ ಇಂದು ಅವರು ಹೇಳಿದ್ದಾರೆ.[ಚಪ್ಪಲಿಯೇಟು ಪ್ರಕರಣ: ಶಿವಸೇನಾ ಸಂಸದ ವಿರುದ್ಧ ಎಫ್ಐಆರ್]
ಅಲ್ಲದೆ, ಆ ಘಟನೆಯ ಕುರಿತು ನನ್ನನ್ನು ಯಾರೂ ತನಿಖೆ ಮಾಡಿಲ್ಲ, ಸತ್ಯ ತಿಳಿಯುವ ಅಗತ್ಯವಿದ್ದರೆ ನನ್ನನ್ನು ಮುಕ್ತವಾಗಿ ವಿಚಾರಣೆ ಮಾಡಬಹುದಿತ್ತಲ್ಲ ಎಂದರಲ್ಲದೆ, ಪ್ರಧಾನಿ ಮೋದಿಯವರ ಕುರಿತು ಸಿಬ್ಬಂದಿ ಹೇಳಿದ ಮಾತುಗಳು ನನ್ನನ್ನು ರೊಚ್ಚಿಗೊಳಿಸಿದವು ಎಂದಿದ್ದಾರೆ.
ಮಾಧ್ಯಮಗಳು ನನ್ನ ಮೇಲೆ ಸುಮ್ಮನೆ ಗೂಬೆ ಕೂರಿಸುತ್ತಿವೆ. ಅಂದು ನಡೆದ ಘಟನೆಯ ಪೂರ್ಣ ವಿಡಿಯೋವನ್ನು ಮಾಧ್ಯಮಗಳು ತೋರಿಸುತ್ತಿಲ್ಲ. ವಿಡಿಯೋವನ್ನು ತಿರುಚಿ, ಕೇವಲ ನಾನು ಏರ್ ಇಂಡಿಯಾ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ ದೃಶ್ಯವನ್ನಷ್ಟೇ ತೋರಿಸಲಾಗುತ್ತಿದೆ. ಅದಕ್ಕೂ ಮೊದಲು ಅವರು ನನ್ನೊಂದಿಗೆ ಎಷ್ಟು ಅಸಭ್ಯವಾಗಿ ವರ್ತಿಸಿದರು ಎಂಬುದನ್ನು ತೋರಿಸಿಲ್ಲ. ಅದಕ್ಕೆಂದೇ ಸಂಸತ್ತಿನ ಮುಂದೆ ಘಟನೆಯ ಪೂರ್ಣ ವಿಡಿಯೋವನ್ನು ಇಟ್ಟಿದ್ದೇನೆ ಎಂದರು.[ಚಪ್ಪಲಿ ಏಟು ಕೊಟ್ಟ 'ಮಹಾ' ಸಂಸದ ಕಪ್ಪು ಪಟ್ಟಿಗೆ!]
57 ವರ್ಷದ ಮಹಾರಾಷ್ಟ್ರದ ಒಸ್ಮಾನಾಬಾದ್ ಕ್ಷೇತ್ರದ ಸಂಸದ ರವೀಂದ್ರ ಗಾಯಕ್ ವಾಡ್ ಕಳೆದ ತಿಂಗಳು ದೆಹಲಿಯಲ್ಲಿ ಏರ್ ಲೈನ್ಸ್ ಸಿಬ್ಬಂದಿಯೊಬ್ಬರ ಮೇಲೆ ಮಾಡಿದ ಹಲ್ಲೆ ರಾಷ್ಟ್ರ ಮಟ್ಟದಲ್ಲಿ ತೀವ್ರ ಟೀಕೆಗೆ ಗುರಿಯಾಗಿತ್ತು.