ನೋಡಿ ಕಲೀರಿ: ಮುಂಬೈನಲ್ಲಿ ಕೊರೊನಾವೈರಸ್ ಕಡಿವಾಣಕ್ಕೆ ಬಂದಿದ್ದು ಹೇಗೆ?
ಮುಂಬೈ, ಮೇ 05: ಕೊರೊನಾವೈರಸ್ 2ನೇ ಅಲೆಯಿಂದ ತತ್ತರಿಸಿದ ಮುಂಬೈನಲ್ಲಿ ಚಿತ್ರಣ ಬದಲಾಗಿದೆ. ಏಪ್ರಿಲ್ ಮಧ್ಯ ಭಾಗದಲ್ಲಿ ಪ್ರತಿನಿತ್ಯ 11,000ಕ್ಕೂ ಹೆಚ್ಚು ಪ್ರಕರಣ ವರದಿ ಆಗುತ್ತಿದ್ದ ನಗರದಲ್ಲಿ ಮೇ 4ರಂದು ಕೇವಲ 2,554 ಹೊಸ ಪ್ರಕರಣಗಳು ಪತ್ತೆಯಾಗಿವೆ.
ಕಳೆದ ಮಾರ್ಚ್ ತಿಂಗಳಿನಿಂದ ಈಚೆಗೆ ಮೊದಲ ಬಾರಿ ಅತಿ ಕಡಿಮೆ ಕೊವಿಡ್-19 ಸೋಂಕಿತ ಪ್ರಕರಣಗಳು ದೃಢಪಟ್ಟಿವೆ ಎಂದು ಮುಂಬೈ ಮಹಾನಗರ ಪಾಲಿಕೆ ಆಯುಕ್ತ ಸುರೇಶ್ ಕಕಾಣಿ ತಿಳಿಸಿದ್ದಾರೆ. ಮುಂಬೈನಲ್ಲಿ ಕೊರೊನಾವೈರಸ್ ನಿಯಂತ್ರಣಕ್ಕೆ ಟ್ರ್ಯಾಕಿಂಗ್, ಟೆಸ್ಟಿಂಗ್ ಆಂಡ್ ಟ್ರೀಟಿಂಗ್ ಎನ್ನುವ ಸಾಮಾನ್ಯ ಸಿದ್ಧಾಂತವನ್ನು ಅನುಸರಿಸಲಾಗುತ್ತಿದೆ.
ಎಚ್ಚರ ತಪ್ಪದಿರಿ: ಭಾರತದಲ್ಲಿ ಕೊರೊನಾ ಕಡಿಮೆಯಾಗಲು ಇದೇ ಕಾರಣ!?
ನಗರದ ಶಾಪಿಂಗ್ ಮಾಲ್ಗಳು, ಸಬ್ಜಿ ಮಂಡಿ, ಮೀನು ಮಾರುಕಟ್ಟೆ ಸೇರಿದಂತೆ ಅತಿಹೆಚ್ಚು ಜನರು ಸಂಚರಿಸುವ ಪ್ರದೇಶಗಳಲ್ಲಿ ನಾವು ಕೊವಿಡ್-19 ಮಾದರಿ ಸಂಗ್ರಹಣೆ ಮಾಡಿದೆವು ಎಂದು ಮಾಹಿತಿ ನೀಡಿದ್ದಾರೆ. ಮುಂಬೈನಲ್ಲಿ ಕೊರೊನಾವೈರಸ್ ಸೋಂಕು ನಿಯಂತ್ರಣಕ್ಕೆ ಕಾರಣಗಳೇನು, ಸೋಂಕು ಹರಡುವಿಕೆ ತಡೆಯಲು ಅನುಸರಿಸಿದ ಕ್ರಮಗಳೇನು, ಇಂದು ಪರಿಸ್ಥಿತಿ ಹತೋಟಿಗೆ ಬರುವುದರ ಹಿಂದೆ ಎಷ್ಟು ಪರಿಶ್ರಮ ಅಡಗಿದೆ ಎನ್ನುವುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.
ವಾಣಿಜ್ಯ ನಗರಿಯಲ್ಲಿ ಕೊರೊನಾ ತಪಾಸಣೆ ಶೈಲಿ
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಿಸಲು ಮುಂಬೈನಲ್ಲಿ ಪಾಲಿಕೆ ಹಲವು ಕ್ರಮಗಳನ್ನು ಜರುಗಿಸಿದೆ. ಅತಿಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ಮೀನು ಮಾರುಕಟ್ಟೆ, ತರಕಾರಿ ಮಾರುಕಟ್ಟೆ ಹಾಗೂ ಸಂತೆಗಳಲ್ಲಿ ಜನರಿಗೆ ರಾಪಿಡ್ ಆಂಟಿಜೆನಿಕ್ ಟೆಸ್ಟ್ ನಡೆಸಲಾಗುತ್ತಿತ್ತು. 15 ರಿಂದ 30 ನಿಮಿಷಗಳಲ್ಲೇ ಈ ಪರೀಕ್ಷೆಯ ವರದಿ ಹೊರ ಬರುತ್ತದೆ. ಒಂದು ವೇಳೆ ಅಗತ್ಯ ಎನಿಸಿದರೆ ಅಂಥ ವ್ಯಕ್ತಿಗಳನ್ನು ಐಸೋಲೇಟ್ ಮಾಡಲಾಗುತ್ತಿದೆ. ಆಹಾರ ಪದಾರ್ಥ ಮತ್ತು ಅಂಗಡಿಗಳಿಗೆ ತೆರಳುವ ಜನರಿಗೆ RT-PCR ತಪಾಸಣೆ ನಡೆಸಲಾಗುತ್ತಿದ್ದು, ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿರುವುದು ದೃಢಪಟ್ಟರೆ ಮರುದಿನವೇ ಅವರನ್ನು ಐಸೋಲೇಟ್ ಮಾಡಲಾಗುತ್ತದೆ. ಅಗತ್ಯ ಎನಿಸಿದರೆ ಅಲ್ಲಿಂದ ಕ್ವಾರೆಂಟೈನ್ ಕೇಂದ್ರಕ್ಕೆ ಸ್ಥಳಾಂತರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.
ಮುಂಬೈನಲ್ಲಿ ಹೆಚ್ಚುವರಿ ಕ್ವಾರೆಂಟೈನ್ ಕೇಂದ್ರ
ಈ ಮೊದಲೇ ಹೆಚ್ಚುವರಿಯಾಗಿ ಸಿದ್ಧಪಡಿಸಿದ ಕ್ವಾರೆಂಟೈನ್ ಕೇಂದ್ರಗಳ ಸಹಾಯದಿಂದ ಈ ಸೋಂಕಿತರ ಚಿಕಿತ್ಸೆಗೆ ಸಹಕಾರಿಯಾಗಿದೆ. ಕಳೆದ ಅಕ್ಟೋಬರ್ ತಿಂಗಳಿನಿಂದ ಫೆಬ್ರವರಿವರೆಗೂಕೊವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು. ಈ ಹಂತದಲ್ಲಿ ನಾವು ಮೊದಲು ಬಳಸುತ್ತಿದ್ದ ಕ್ವಾರೆಂಟೈನ್ ಕೇಂದ್ರಗಳನ್ನು ಮಾರ್ಚ್ 31ರವರೆಗೂ ಉಳಿಸಿಕೊಳ್ಳಲು ತೀರ್ಮಾನಿಸಲಾಗಿತ್ತು. ಕ್ವಾರೆಂಟೈನ್ ಕೇಂದ್ರಗಳ ನಿರ್ವಹಣೆಗೆ ಸ್ವಲ್ಪ ಹಣವನ್ನೂ ಸಹ ಮೀಸಲಿರಿಸಲಾಗಿತ್ತು. ಆದರೆ ಮಾರ್ಚ್ ತಿಂಗಳ ನಂತರದಲ್ಲಿ ಆದ ಕೊವಿಡ್-19 ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, ಅದೇ ಕ್ವಾರೆಂಟೈನ್ ಕೇಂದ್ರಗಳು ಉಪಯೋಗಕ್ಕೆ ಬಂದವು ಎಂದು ಹೇಳಿದ್ದಾರೆ.
ಯಾವ ಕೊರೊನಾ ಸೋಂಕಿತರಿಗೆ 'ಸಿಟಿ ಸ್ಕ್ಯಾನ್' ಹೆಚ್ಚು ಅಪಾಯಕಾರಿ!?
ಕೊವಿಡ್-19 ರೋಗಿಗಳ ಚಿಕಿತ್ಸೆಗೆ ಆಕ್ಸಿಜನ್ ವ್ಯವಸ್ಥೆ
ಮುಂಬೈನಲ್ಲಿ ಆಮ್ಲಜನಕ ಕೊರತೆ ಸೃಷ್ಟಿಯಾಗದಂತೆ ಮೊದಲೇ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ನಮ್ಮಲ್ಲಿ ಮೊದಲೇ ಇದ್ದ 28,000 ಕೊವಿಡ್-19 ಹಾಸಿಗೆಗಳಲ್ಲಿ 12,000 ದಿಂದ 13,000 ಹಾಸಿಗೆಗಳಿಗೆ ಆಮ್ಲಜನಕ ವ್ಯವಸ್ಥೆ ಕಲ್ಪಿಸಲಾಗಿತ್ತು. ಮೊದಲೇ ನಿರೀಕ್ಷಿಸಿದಂತೆ ಕೊರೊನಾವೈರಸ್ ಎರಡನೇ ಅಲೆಯಲ್ಲಿ ಆಮ್ಲಜನಕದ ಕೊರತೆ ಸೃಷ್ಟಿಯಾಯಿತು. ಆದರೆ ಈ ಸಮಸ್ಯೆಯನ್ನು ಎದುರಿಸುವುದಕ್ಕೆ ಮುಂಬೈ ಮೊದಲೇ ಸಿದ್ಧವಾಗಿತ್ತು. ಏಪ್ರಿಲ್ ತಿಂಗಳಿನಲ್ಲಿ ಸೃಷ್ಟಿಯಾದ ಆಕ್ಸಿಜನ್ ಸಮಸ್ಯೆಯನ್ನು ಮುಂಬೈನಲ್ಲಿ ಸಮರ್ಥವಾಗಿ ಎದುರಿಸಲಾಗಿದ್ದು, ರೋಗಿಗಳನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಯಿತು.
ಜಂಬೋ ಸಿಲಿಂಡರ್ ಮೂಲಕ ಆಮ್ಲಜನಕ ಪೂರೈಕೆ
ಪ್ರಾರಂಭಿರ ಹಂತದಲ್ಲಿ ನಾವೂ ಕೂಡಾ ಸಾಮಾನ್ಯವಾಗಿ ವೈದ್ಯಕೀಯ ಆಮ್ಲಜನಕಕ್ಕಾಗಿ ಸಿಲಿಂಡರ್ ಬಳಸುತ್ತಿದ್ದು, ಪ್ರತಿನಿತ್ಯ ಈ ಸಿಲಿಂಡರ್ ಭರ್ತಿ ಕಾರ್ಯ ದೀರ್ಘಾವಧಿಯಲ್ಲಿ ಸವಾಲಿನ ಕೆಲಸವಾಗುತ್ತದೆ ಎಂಬುದು ಮೊದಲ ಅಲೆಯ ಸಂದರ್ಭದಲ್ಲಿಯೇ ಅರಿವಿಗೆ ಬಂತು. ತದನಂತರದಲ್ಲಿ ನಾವು ಸಾಮಾನ್ಯ ಸಿಲಿಂಡರ್ ಗಳಿಗಿಂತ 10 ಪಟ್ಟು ಹೆಚ್ಚು ಸಾಮರ್ಥ್ಯವನ್ನು ಹೊಂದಿರುವ ಜಂಬೋ ಸಿಲಿಂಡರ್ ಬಳಕೆ ಆರಂಭಿಸಿದೆವು. ಮುಂದಿನ ಹಂತದಲ್ಲಿ ಮೆಡಿಕಲ್ ಲಿಕ್ವಿಡ್ ಆಕ್ಸಿಜನ್ ಬಳಸುವುದಕ್ಕೆ ಶುರು ಮಾಡಿದ್ದು, ಆರಂಭಿಕ ಹಂತದಲ್ಲಿ 13,000 ಕಿಲೋ ಲೀಟರ್ ಸಾಮರ್ಥ್ಯದ ಟ್ಯಾಂಕರ್ ಬಳಸಿದ್ದೆವು. ಈ ಟ್ಯಾಂಕ್ ಮೂಲಕ ಹೆಚ್ಚು ಹೆಚ್ಚು ಬೆಡ್ ಗಳಿಗೆ 2 ರಿಂದ 3 ದಿನಗಳವರೆಗೂ ಆಮ್ಲಜನಕ ಪೂರೈಕೆ ಮಾಡಲು ಸಾಧ್ಯವಾಯಿತು.
ಹಳೆ ಸಿಲಿಂಡರ್ ಸಂಗ್ರಹಿಸಿದ್ದು ವ್ಯರ್ಥವಾಗಲಿಲ್ಲ
ಜಂಬೋ ಸಿಲಿಂಡರ್ ಬಳಕೆ ಆರಂಭಿಸಿದ ನಂತರದಲ್ಲೂ ಕೂಡಾ ನಾವು ಹಳೆಯ ಸಿಲಿಂಡರ್ ಅನ್ನು ಬಿಸಾಡಲಿಲ್ಲ. ಬದಲಿಗೆ ಅವುಗಳನ್ನು ಒಂದು ಕಡೆಯಲ್ಲಿ ಸಂಗ್ರಹಿಸಿಟ್ಟಿದ್ದೆವು. ಒಂದು ವೇಳೆ ಆಮ್ಲಜನಕ ಪೂರೈಕೆ ಪ್ರಮಾಣ ತಗ್ಗಿದರೆ, ತಕ್ಷಣವೇ ನಾವು ಮುಂದಿನ ಒಂದು ಅಥವಾ ಎರಡು ದಿನಗಳವರೆಗೂ ರೋಗಿಗಳ ಅಗತ್ಯಕ್ಕೆ ತಕ್ಕಂತೆ ಈ ಸಿಲಿಂಡರ್ ಮೂಲಕ ವೈದ್ಯಕೀಯ ಆಮ್ಲಜನಕವನ್ನು ಒದಗಿಸುವುದಕ್ಕೆ ಸಾಧ್ಯವಾಯಿತು. ಇದರಿಂದ ಮುಂಬೈನಲ್ಲಿ ಕೊವಿಡ್-19 ಸಾವಿನ ಪ್ರಕರಣಗಳ ಸಂಖ್ಯೆಯೂ ಇಳಿಮುಖವಾಯಿತು.
ಕೊವಿಡ್-19 ವಾರ್ ರೂಮ್ ಸಿಬ್ಬಂದಿಗೆ ಸೋಂಕಿತರ ವರದಿ
ಮುಂಬೈನಲ್ಲಿ ಕೊರೊನಾವೈರಸ್ ಸೋಂಕಿನ ತಪಾಸಣೆ ಮಾಡಿಸಿಕೊಂಡವರ ಪೈಕಿ ಸೋಂಕು ತಗುಲಿದವರ ಪಟ್ಟಿ ಮತ್ತು ಅವರ ಆರೋಗ್ಯ ಸ್ಥಿತಿಯ ಬಗ್ಗೆ ಕೊವಿಡ್-19 ವಾರ್ ರೂಮ್ ಸಿಬ್ಬಂದಿಗೆ ಮೊದಲು ಮಾಹಿತಿ ನೀಡಲಾಗುತ್ತದೆ. ಕೊವಿಡ್-19 ಸೋಂಕಿತನಿಗಿಂತಲೂ ಮೊದಲು ಮಾಹಿತಿ ನಮಗೆ ಸಿಗುತ್ತದೆ. ಇದರಿಂದಾಗಿ ಕೊರೊನಾವೈರಸ್ ಸೋಂಕಿತನ ಆರೋಗ್ಯ ಸ್ಥಿತಿ ಮತ್ತು ಯಾವ ರೀತಿ ವೈದ್ಯಕೀಯ ಸೌಲಭ್ಯಗಳ ಅಗತ್ಯವಿದೆ, ಏನೆಲ್ಲ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದನ್ನು ನೋಡಿಕೊಂಡು ಸೋಂಕಿನನ್ನು ನಿಗದಿತ ಹಾಗೂ ವ್ಯವಸ್ಥೆ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತದೆ.
ಮುಂಬೈನಲ್ಲಿ ಐಸೋಲೇಟ್ ವ್ಯವಸ್ಥೆ ಹೇಗಿತ್ತು?
ಕೊರೊನಾವೈರಸ್ ಎರಡನೇ ಅಲೆಯ ಸಂದರ್ಭದಲ್ಲಿ ಅತಿಹೆಚ್ಚು ಜನರಿಗೆ ಮನೆಗಳಲ್ಲೇ ಐಸೋಲೇಟ್ ಆಗುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಪ್ರತ್ಯೇಕ ಕೊಠಡಿ ಮತ್ತು ಶೌಚಾಲಯಗಳ ವ್ಯವಸ್ಥೆಯಿದ್ದಲ್ಲಿ ಮನೆಗಳಲ್ಲೇ ಐಸೋಲೇಟ್ ಮಾಡಲು ತೀರ್ಮಾನಿಸಲಾಗಿತ್ತು. ಈ ಸೌಲಭ್ಯ ಇಲ್ಲರುವ ಸೋಂಕಿತರನ್ನು ಮಾತ್ರ ಸರ್ಕಾರಿ ಅಥವಾ ಖಾಸಗಿ ಐಸೋಲೇಷನ್ ಕೇಂದ್ರಗಳಿಗೆ ರವಾನಿಸಲಾಗಿತ್ತು ಎಂದು ಮುಂಬೈ ಮಹಾನಗರ ಪಾಲಿಕೆ ಆಯುಕ್ತ ಸುರೇಶ್ ಕಕಾಣಿ ತಿಳಿಸಿದ್ದಾರೆ.
Recommended Video
ಕೊವಿಡ್-19 ಸೋಂಕು ನಿಯಂತ್ರಕ್ಕೆ ತೆಗೆದುಕೊಂಡ ಕ್ರಮಗಳು
* ಕೊರೊನಾವೈರಸ್ ರೋಗಿಗಳ ಸಂಪರ್ಕಿತರನ್ನು ಹುಡುಕುವುದು ಹಾಗೂ ಐಸೋಲೇಟ್ ಮಾಡುವುದು
* ಹೆಚ್ಚಿನ ಅಪಾಯವನ್ನು ಹೊಂದಿರುವ ಸಂಪರ್ಕಿತರನ್ನು ಗುರುತಿಸುವುದು
* ಕೊವಿಡ್-19 ಪರೀಕ್ಷಾ ಸೌಲಭ್ಯವನ್ನು ಒದಗಿಸುವುದು
* ಕೊರೊನಾವೈರಸ್ ಸೋಂಕಿತರನ್ನು ಸ್ಥಳಾಂತರಿಸುವುದು
* ಕೊವಿಡ್-19 ಸೋಂಕಿತರ ಮನೆಗೆ ಭೇಟಿ ನೀಡಿದವರನ್ನು ಸಂಪರ್ಕಿಸುವುದು
* ಪ್ರತಿಯೊಂದು ವಾರ್ಡಿನ ವಾರ್ ಕೊಠಡಿಗಳಿಗೆ ಆಂಬುಲೆನ್ಸ್ ವ್ಯವಸ್ಥೆ