ಅಡ್ಡ ಪರಿಣಾಮದ ಅಪಾಯ: ಪಂಚತಾರಾ ಹೋಟೆಲ್ನ ಸಾಮಾನ್ಯ ಫ್ರಿಜ್ನಲ್ಲಿ ಕೊರೊನಾ ಲಸಿಕೆ!
ಮುಂಬೈ, ಏಪ್ರಿಲ್ 31: ಮುಂಬೈನ ದಿ ಲಲಿತ್ ಪಂಚತಾರಾ ಹೋಟೆಲ್ ನಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಪ್ರಕ್ರಿಯ ಹೇಗೆ ನಡೆಯುತ್ತಿದೆ ಎಂಬುದನ್ನು ಪರಿಶೀಲಿಸಲಾಗುವುದು ಎಂದು ಮೇಯರ್ ಕಿಶೋರಿ ಪಡ್ನೇಕರ್ ತಿಳಿಸಿದ್ದಾರೆ. ಅಲ್ಲದೇ, ಇಲ್ಲಿ ಲಸಿಕೆ ವಿತರಿಸುತ್ತಿರುವ ಬಗ್ಗೆ ಮಹಾನಗರ ಪಾಲಿಕೆಗೆ ಯಾವುದೇ ರೀತಿ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ಖಾಸಗಿ ಕೊರೊನಾವೈರಸ್ ಲಸಿಕೆ ನೀಡುವ ಮೂಲಕ ಅಂಧೇರಿ ಪೂರ್ವ ಭಾಗದ ಹೋಟೆಲ್ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣಗಳಿಂದ ತಿಳಿದುಕೊಂಡಿದ್ದೇವೆ. ಕೊರೊನಾ ಲಸಿಕೆಗಳ ಕೊರತೆ ಹಿನ್ನೆಲೆ ಅದನ್ನು ಪರಿಶೀಲಿಸುವುದು ನನ್ನ ಕರ್ತವ್ಯವಾಗಿ. ಕೊವಿಡ್-19 ಲಸಿಕೆ ವಿತರಣೆಗೆ ಕೇಂದ್ರ ಆರೋಗ್ಯ ಸಚಿವಾಲಯವು ನಿಗದಿತ ಮಾರ್ಗಸೂಚಿಗಳನ್ನು ರೂಪಿಸಿದೆ ಎಂದು ಮೇಯರ್ ಪೆಡ್ನೆಕರ್ ಹೇಳಿದರು.
ಜೂನ್ನಲ್ಲಿ ಎಷ್ಟು ಲಸಿಕೆ ಲಭ್ಯವಾಗಲಿದೆ ಎಂದು ಲೆಕ್ಕ ನೀಡಿದ ಆರೋಗ್ಯ ಸಚಿವಾಲಯ
ಮುಂಬೈನಲ್ಲಿ ಸರ್ಕಾರಿ ಆಸ್ಪತ್ರೆಗಳು ಮತ್ತು ಖಾಸಗಿ ಆಸ್ಪತ್ರೆಗಳು ಕೋಲ್ಡ್ ಸ್ಟೋರೇಜ್ ವ್ಯವಸ್ಥೆಗಾಗಿ ಖಾಸಗಿ ಹೋಟೆಲ್ ಮೇಲೆ ಅವಲಂಬನೆ ಆಗಿರುವುದರ ಬಗ್ಗೆ ಮೇಯರ್ ಪಡ್ನೇಕರ್ ಅನುಮಾನ ವ್ಯಕ್ತಪಡಿಸಿದ್ದಾರೆ. ಖಾಸಗಿ ಹೋಟೆಲ್ ನ ಸಾಮಾನ್ಯ ಫ್ರಿಡ್ಜ್ ನಲ್ಲಿ ಕೊರೊನಾವೈರಸ್ ಲಸಿಕೆಯನ್ನು ಸಂಗ್ರಹಿಸಿಟ್ಟಿರುವುದು ಬೆಳಕಿಗೆ ಬಂದಿದೆ. ಎಲ್ಲ ಲಸಿಕೆಯನ್ನು ವಶಕ್ಕೆ ಪಡೆಯಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಮೇಯರ್ ಪಡ್ನೇಕರ್ ಸ್ಪಷ್ಟಪಡಿಸಿದ್ದಾರೆ.
ಸಾಮಾನ್ಯ ಫ್ರಿಡ್ಜ್ ನಲ್ಲಿ ಲಸಿಕೆ ಸಂಗ್ರಹಿಸಿದರೆ ಅಡ್ಡ ಪರಿಣಾಮ
ಮುಂಬೈನ ಸರ್ಕಾರಿ ಆಸ್ಪತ್ರೆಗಳಲ್ಲೇ ಕೊವ್ಯಾಕ್ಸಿನ್ ಲಸಿಕೆಗಳು ಲಭ್ಯವಿಲ್ಲ. ಇಂಥ ಸಂದರ್ಭದಲ್ಲಿ ಖಾಸಗಿ ಹೋಟೆಲ್ ವೊಂದು ಕೊವ್ಯಾಕ್ಸಿನ್ ಲಸಿಕೆಗಳನ್ನು ಸಂಗ್ರಹಿಸಿಡಲು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನೆ ಮಾಡಿದ್ದಾರೆ. ಸಾಮಾನ್ಯ ಫ್ರಿಡ್ಜ್ ಗಳಲ್ಲಿ ಕೊವ್ಯಾಕ್ಸಿನ್ ಲಸಿಕೆಯನ್ನು ಸಂಗ್ರಹಿಸಿಡಲಾಗಿದ್ದು, ಇದರಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವ ಅಪಾಯವಿದೆ. ಈ ಅಂಶವು ವೈದ್ಯಕೀಯ ಸಂಶೋಧನೆಯಲ್ಲೂ ಸಾಬೀತಾಗಿದೆ ಎಂದು ತಿಳಿಸಿದ್ದಾರೆ.
ಪಂಚತಾರಾ ಹೋಟೆಲ್ ವಿರುದ್ಧ ದೂಷಿಸುವುದಿಲ್ಲ ಎಂದ ಮೇಯರ್
ಕಳೆದ ಮೇ 23ರಿಂದ ಖಾಸಗಿ ಆಸ್ಪತ್ರೆಗಳಲ್ಲೂ ಕೊರೊನಾವೈರಸ್ ಲಸಿಕೆ ವಿತರಿಸುವುದಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿ ನೀಡಲಾಗಿದೆ. ಖಾಸಗಿ ಆಸ್ಪತ್ರೆಗಳೊಂದಿಗೆ ಸಹಕರಿಸುವ ಕಾರ್ಪೊರೇಟ್ ಸಂಸ್ಥೆಗಳು ಲಸಿಕೆ ವಿತರಿಸುವ ಹಕ್ಕನ್ನು ಕೇಂದ್ರದಿಂದ ಪಡೆದುಕೊಂಡಿದ್ದರೆ, ಮಹಾನಗರ ಪಾಲಿಕೆಗೆ ಈ ಬಗ್ಗೆ ಮಾಹಿತಿಯನ್ನು ನೀಡಬೇಕು. ಲಸಿಕೆಯ ಸಂಗ್ರಹಣೆ ವ್ಯವಸ್ಥೆ ಸರಿಯಾಗಿಲ್ಲ. ಇಂಥದರ ಮಧ್ಯೆ ಈಗಾಗಲೇ ಸಾಕಷ್ಟು ಜನರಿಗೆ ಲಸಿಕೆಯನ್ನು ನೀಡಲಾಗಿದ್ದು, ಇದರ ಬಗ್ಗೆ ತನಿಖೆ ನಡೆಸಲಾಗುವುದು. ಅಂಧೇರಿ ಭಾಗದ ಆಸ್ಪತ್ರೆಗಳಲ್ಲಿ ಕೊವಿಡ್-19 ಲಸಿಕೆ ಸಂಗ್ರಹಿಸಿಡುವಲ್ಲಿ ಸರಿಯಾದ ವ್ಯವಸ್ಥೆ ಹೊಂದಿಲ್ಲದ ಕಾರಣ ನಾವು ಖಾಸಗಿ ಹೋಟೆಲ್ ಅನ್ನು ದೂಷಿಸುವುದಕ್ಕೆ ಬರುವುದಿಲ್ಲ ಎಂದು ಮೇಯರ್ ಕಿಶೋರಿ ಪಡ್ನೇಕರ್ ಹೇಳಿದ್ದಾರೆ.
ಪಂಚತಾರಾ ಹೋಟೆಲ್ ಗೆ ಕ್ಲೀನ್ ಚಿಟ್ ನೀಡಿದ ಮೇಯರ್
ಕೊರೊನಾವೈರಸ್ ಲಸಿಕೆ ಪಡೆದ ನಂತರದ ಪ್ಯಾಕೇಜ್ ಅನ್ನು ಮಾತ್ರ ಪಂಚತಾರಾ ಹೋಟೆಲ್ ನೀಡುತ್ತಿದೆ ಎನ್ನುವ ಮೂಲಕ ಮೇಯರ್ ಕಿಶೋರಿ ಪಡ್ನೇಕರ್ ಕ್ಲೀನ್ ಚಿಟ್ ನೀಡಿದ್ದಾರೆ. ನಾವು ಯಾವುದೇ ರೀತಿ ಲಸಿಕೆ ವಿತರಣೆ ಪ್ರಕ್ರಿಯೆಯನ್ನು ನಡೆಸುತ್ತಿಲ್ಲ. ನಮ್ಮ ಬಳಿ ಯಾವುದೇ ಲಸಿಕೆಯೂ ಇಲ್ಲ. ಮುಂಬೈ ಮಹಾನಗರದಲ್ಲಿ ಒಬ್ಬಂಟಿ ಆಗಿರುವ ಜನರಿಗೆ ಕೊವಿಡ್-19 ಲಸಿಕೆ ನಂತರ ಹೋಟೆಲ್ ನಲ್ಲಿ ಉಳಿದುಕೊಳ್ಳುವುದಕ್ಕೆ ವಿಶೇಷ ಪ್ಯಾಕೇಜ್ ಅನ್ನು ಮಾತ್ರ ಘೋಷಿಸುತ್ತಿದ್ದೇವೆ ಎಂದು ಪಂಚಾತಾರಾ ಹೋಟೆಲ್ ಪ್ರತಿನಿಧಿಯೊಬ್ಬರು ತಿಳಿಸಿರುವ ಬಗ್ಗೆ ಮೇಯರ್ ಉಲ್ಲೇಖಿಸಿದರು.
ಕೊರೊನಾವೈರಸ್ ಲಸಿಕೆಯನ್ನು ಪಡೆದುಕೊಂಡ ನಂತರದಲ್ಲಿ ಸಾಮಾನ್ಯವಾಗಿ ಜ್ವರ, ತಲೆನೋವು ಹಾಗೂ ಇತರೆ ಅನಾರೋಗ್ಯ ಸಮಸ್ಯೆ ಎದುರಾಗುತ್ತವೆ. ಕೆಲವು ಸಂದರ್ಭದಲ್ಲಿ ವೈದ್ಯರ ಅಗತ್ಯವೂ ಇರುತ್ತವೆ. ಇಂಥ ಸಮಯದಲ್ಲಿ ಲಸಿಕೆ ಪಡೆದವರನ್ನು ಗಮನಿಸಿಕೊಳ್ಳಲು ಸಹಪಾಟಿಗಳೇ ಇಲ್ಲದೇ ಒಬ್ಬಂಟಿಯಾಗಿರುವ ಜನರನ್ನು ಗಮನದಲ್ಲಿ ಇಟ್ಟುಕೊಂಡು ಹೋಟೆಲ್ ವಿಶೇಷ ಪ್ಯಾಕೇಜ್ ಅನ್ನು ನೀಡುತ್ತಿದೆ ಎಂದು ಹೋಟೆಲ್ ಪ್ರತಿನಿಧಿಯು ಸ್ಪಷ್ಟಪಡಿಸಿದ್ದಾರೆ.
ಕೊವಿಡ್-19 ಲಸಿಕೆ ವಿತರಿಸಲು ಕೇಂದ್ರ ಸರ್ಕಾರದ ಮಾರ್ಗಸೂಚಿ
ದೇಶದ ಕೆಲವು ಖಾಸಗಿ ಆಸ್ಪತ್ರೆಗಳು ಪಂಚತಾರಾ ಹೋಟೆಲ್ ಸಹಭಾಗಿತ್ವದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಮಾಡುತ್ತಿರುವುದು ಬೆಳಕಿಗೆ ಬರುತ್ತಿದ್ದಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾರ್ಗಸೂಚಿಯನ್ನು ಪ್ರಕಟಿಸಿತು. ಮೇ 29ರಂದು ಆರೋಗ್ಯ ಸಚಿವಾಲಯ ಹೊರಡಿಸಿದ ಪ್ರಕಟಣೆಯಲ್ಲಿ ಕೊರೊನಾವೈರಸ್ ಲಸಿಕೆಯನ್ನು ಎಲ್ಲಿ ನೀಡಬಹುದು ಎಂಬುದರ ಬಗ್ಗೆ ಉಲ್ಲೇಖಿಸಲಾಗಿದೆ.
* ಸರ್ಕಾರದ ಅನುಮತಿ ಪಡೆದಿರುವ ಕೇಂದ್ರಗಳಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ
* ಖಾಸಗಿ ಆಸ್ಪತ್ರೆಗಳು ನಡೆಸುತ್ತಿರುವ ಕೊವಿಡ್ ಲಸಿಕೆ ವಿತರಣೆ ಕೇಂದ್ರ
* ಸರ್ಕಾರಿ ಆಸ್ಪತ್ರೆಗಳು ನಿರ್ವಹಿಸುವ ಸರ್ಕಾರಿ ಕೆಲಸದ ಕಚೇರಿಗಳಲ್ಲಿ ಲಸಿಕೆ ವಿತರಣೆ
* ಖಾಸಗಿ ಆಸ್ಪತ್ರೆಗಳು ನಿರ್ವಹಿಸುವ ಖಾಸಗಿ ಕೇಂದ್ರಗಳಲ್ಲಿ ಲಸಿಕೆ ವಿತರಣೆ
* ವೃದ್ಧರು ಮತ್ತು ವಿಕಲಚೇತನರಿಗಾಗಿ ಆಯೋಜಿಸಿದ ಶಿಬಿರಗಳಲ್ಲಿ ಲಸಿಕೆ ವಿತರಿಸುವುದು, ಆರ್ ಡಬ್ಲ್ಯುಎ ಕಚೇರಿ, ಸಮುದಾಯ ಕೇಂದ್ರ, ಪಂಚಾಯಿತಿ ಭವನ, ಶಾಲಾ ಕಾಲೇಜು ಹಾಗೂ ವಯೋವೃದ್ಧರಿಗೆ ಮನೆಗಳಲ್ಲಿ ಲಸಿಕೆ ವಿತರಿಸುವುದಕ್ಕೆ ಅನುಮತಿ ನೀಡಲಾಗಿದೆ.