ಮುಂಬೈನಲ್ಲಿ ನಿರ್ಮಾಣವಾಗಲಿದೆ ಶಿವಾಜಿ ಪ್ರತಿಮೆ
ಈ ಸಂಬಂಧ ಮಹಾರಾಷ್ಟ್ರ ಸರಕಾರವು 100 ಕೋಟಿ ರೂ ವ್ಯಯಿಸಲಿದೆ. ಚೌಪಟ್ಟಿ ತೀರದಿಂದ ಒಂದು ಕಿಮೀ ದೂರದಲ್ಲಿ ಅರಬ್ಬೀ ಸಮುದ್ರದಲ್ಲಿ ಈ ಬೃಹತ್ ಪ್ರತಿಮೆ ತಲೆಯೆತ್ತಲಿದೆಯಾದರೂ ಮರಾಠಾ ರಾಜ ಛತ್ರಪತಿ ಶಿವಾಜಿ ಅವರ ಪ್ರತಿಮೆಯ ಎತ್ತರ ಎಷ್ಟಿರಬೇಕು ಎಂಬುದನ್ನು ರಾಜ್ಯ ಸರಕಾರ ಇನ್ನೂ ನಿರ್ಧರಿಸಿಲ್ಲ.
ಮೂಲಗಳ ಪ್ರಕಾರ ಶಿವಾಜಿ ಪ್ರತಿಮೆಯು 300 ಅಡಿ ಎತ್ತರದಲ್ಲಿರಲಿದೆ. ಅಂದಹಾಗೆ ನರ್ಮದಾ ನದಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸರ್ದಾರ್ ಪಟೇಲ್ ಪ್ರತಿಮೆಯು 2,400 ಕೋಟಿ ರೂ ವೆಚ್ಚದಲ್ಲಿ, 182 ಮೀಟರ್ ಎತ್ತರದ್ದಾಗಲಿದೆ.
ಯೋಜನೆ ಹಳೆಯದ್ದೇ ಆದರೂ ಪರಿಸರ ಇಲಾಖೆಯ ಅನುಮೋದನೆ ತಡವಾಗಿ ಬಂದ ಕಾರಣ ಪ್ರತಿಮೆ ಸ್ಥಾಪನೆ ಕಾರ್ಯ ವಿಳಂಬವಾಗಿತ್ತು. ಆದರೆ ಈಗ ಎಲ್ಲವೂ ಸುಸೂತ್ರವಾಗಿ ನಡೆದಿದ್ದು, ಸದ್ಯದಲ್ಲೇ ಬೃಹತ್ ಕಲ್ಲಿನ ಶಿಲ್ಪವು ಶಿವಾಜಿ ರೂಪದಲ್ಲಿ ತಲೆಯೆತ್ತಲಿದೆ. (ಚಿತ್ರ ಕೃಪೆ: ವಿಕಿಪೀಡಿಯಾ)
ಸಮುದ್ರದಲ್ಲಿ 16 ಹೆಕ್ಟೇರ್ ವಿಸ್ತೀರ್ಣದಲ್ಲಿ ಕಲ್ಲಿನ ಬಂಡೆಯ ಮೇಲೆ ಶಿವಾಜಿ ಶಿಲ್ಪ ಕಾಣಿಸಿಕೊಳ್ಳಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ತಿಳಿಸಿದ್ದಾರೆ. ಯೋಜನೆಯು Coastal Regulation Zone-4 ಅಪಾಯಕಾರಿ ವಲಯದಲ್ಲಿ ತಲೆಯೆತ್ತಲಿದೆಯಾದರೂ ವೀಶೇಷ ಪ್ರಕರಣವೆಂದು ಪರಿಗಣಿಸಿ, ಕೇಂದ್ರ ಸರಕಾರವೂ ಈಗಾಗಲೇ ಅನುಮತಿ ನೀಡಿದೆ.