ಶಿರಡಿಯಲ್ಲಿ ಪತ್ನಿ ನಾಪತ್ತೆ: 3 ವರ್ಷದಿಂದ ಪತಿಯಿಂದ ಹುಡುಕಾಟ
ಮುಂಬೈ, ನವೆಂಬರ್ 23: ರಜೆ ದಿನ ಕಳೆಯಲು ಕುಟುಂಬದೊಂದಿಗೆ ಶಿರಡಿಗೆ ತೆರಳಿದ್ದ ಸಂದರ್ಭದಲ್ಲಿ ಪತ್ನಿಯನ್ನು ಕಳೆದುಕೊಂಡಿದ್ದ ಮನೋಜ್ ಸೋನಿ ಎಂಬುವವರ ಛಲಬಿಡದ ಪ್ರಯತ್ನದ ಬಳಿಕ ಬಾಂಬೆ ಹೈಕೋರ್ಟ್ನ ಔರಂಗಾಬಾದ್ ಪೀಠವು ಇದೇ ರೀತಿಯ ನಾಪತ್ತೆ ಪ್ರಕರಣಗಳ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದೆ.
2017ರ ಆಗಸ್ಟ್ ತಿಂಗಳಲ್ಲಿ ಮನೋಜ್ ಸೋನಿ ಅವರು 38 ವರ್ಷದ ಪತ್ನಿ ದೀಪ್ತಿ ಮತ್ತು ಇಬ್ಬರು ಮಕ್ಕಳೊಂದಿಗೆ ಪ್ರಸಿದ್ಧ ಸಾಯಿಬಾಬ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಶಿರಡಿಯ ಉತ್ಸವದಲ್ಲಿ ಭಾಗವಹಿಸಿದ್ದ ಬಳಿಕ ಕೆಲವು ಅಂಗಡಿಗಳಿಗೆಂದು ತೆರಳಿದ್ದ ದೀಪ್ತಿ ಮತ್ತೆ ಹಿಂದಿರುಗಿರಲಿಲ್ಲ.
ನಾಪತ್ತೆಯಲ್ಲ, ಕೊಲೆ... ಮಂಡ್ಯದಲ್ಲಿ 5 ವರ್ಷದ ನಂತರ ಬೆಳಕಿಗೆ ಬಂದ ಕೃತ್ಯ
ತಮ್ಮ ಪತ್ನಿ ಸಿಗಬಹುದು ಎಂಬ ಆಶಯದೊಂದಿಗೆ ಒಂದರ ಮೇಲೊಂದು ಕಚೇರಿಗಳು, ಪೊಲೀಸದ ಠಾಣೆಗಳು, ವಿವಿಧ ನಗರಗಳು ಮಾತ್ರವಲ್ಲ, ಕೊನೆಗೆ ರೆಡ್ ಲೈಟ್ ಪ್ರದೇಶಗಳಿಗೂ ಸತತ ಮೂರು ವರ್ಷಗಳಿಂದ ಅಲೆದಾಡಿ ಹುಡುಕಾಟ ನಡೆಸಿದರೂ ಮನೋಜ್ ಸೋನಿ ಅವರ ಪ್ರಯತ್ನಕ್ಕೆ ಯಶ ಸಿಗಲಿಲ್ಲ. ಕೊನೆಗೂ ಅವರ ಪ್ರಯತ್ನವನ್ನು ಪರಿಗಣಿಸಿದ ಔರಂಗಾಬಾದ್ ವಿಭಾಗೀಯ ಪೀಠ, ಪ್ರಸಿದ್ಧ ದೇವಾಲಯ ಪಟ್ಟಣವಾದ ಶಿರಡಿಯಲ್ಲಿನ ಇದೇ ರೀತಿಯ ನಾಪತ್ತೆ ಪ್ರಕರಣಗಳನ್ನು ವಿಚಾರಣೆ ಮಾಡುವಂತೆ ಮತ್ತು ಮಾನವ ಕಳ್ಳಸಾಗಣೆ ಆಯಾಮದಿಂದ ತನಿಖೆ ನಡೆಸುವಂತೆ ಮಹಾರಾಷ್ಟ್ರದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕೋರ್ಟ್ ಸೂಚಿಸಿದೆ.
ಮೂರು ವರ್ಷಗಳಿಂದ ಅವರು ಪತ್ನಿಯನ್ನು ಪತ್ತೆಹಚ್ಚಲು ವಿವಿಧ ಪ್ರಯತ್ನಗಳನ್ನು ಮಾಡಿದ್ದಾರೆ. ಅವರು ಇಂದೋರ್ನ ನಿವಾಸಿ. ಇಷ್ಟು ದೂರದಲ್ಲಿದ್ದರೂ ಅವರು ಇಂದಿಗೂ ಪತ್ನಿಯನ್ನು ಪತ್ತೆಮಾಡುವ ಸಲುವಾಗಿ ಪಟ್ಟುಬಿಡದೆ ಹುಡುಕಾಟ ನಡೆಸುತ್ತಿದ್ದಾರೆ. ಇಂತಹ ಪ್ರಕರಣಗಳು ಬಡಜನರಿಗೆ ಆದಾಗ, ಅವರ ಸಂಬಂಧಿಕರು ನಾಪತ್ತೆಯಾದಾಗ ಅವರು ಅಸಹಾಯಕರಾಗುತ್ತಾರೆ. ಹೆಚ್ಚಿನವರು ಪೊಲೀಸರನ್ನೇ ಸಂಪರ್ಕಿಸುವುದಿಲ್ಲ. ಅಂತಹ ಬಡ ಜನರು ನ್ಯಾಯಾಲಯದವರೆಗೂ ಬರುವುದೇ ಅತಿ ವಿರಳ ಎಂದು ನ್ಯಾಯಾಲಯ ಹೇಳಿದೆ.