ಕತ್ತರಿಸಿದ ಮುಗಿಲು, ತತ್ತರಿಸಿದ ಮುಂಬೈ: ಚಿತ್ರದಲ್ಲಿ ನೋಡಿ
ಮುಂಬೈ, ಜು.11: ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಕೊಂಚವೂ ಬಿಡುವು ಪಡೆಯದೇ ಸುರಿಯುತ್ತಿರುವ ಕುಂಭದ್ರೋಣ ಮಳೆ ಜನರನ್ನು ಸಂಕಷ್ಟಕ್ಕೀಡುಮಾಡಿದೆ.
ಮಂಗಳವಾರವೂ ಮಳೆ ಮುಂದುವರೆಇದ ಪರಿಣಾಮ, ಬಹುತೇಕ ರಸ್ತೆಗಳಲ್ಲಿ ಗುತ್ತಿಗೆಯವರೆಗೂ ನೀರು ನಿಂತಿದೆ. ಬಸ್ ಹಾಗೂ ಉಪನಗರ ರೈಲು ಸಂಚಾರ ಸ್ತಬ್ಧವಾಗಿದೆ. ರೈಲ್ವೆ ಹಳಿಯಲ್ಲಿ ನೀರು ತುಂಬಿದ ಕಾರಣ ಪಶ್ಚಿಮ ರೈಲ್ವೆ ದೂರದ ರೈಲುಗಳ ಸಂಚಾರವನ್ನೂ ದಿನದಮಟ್ಟಿಗೆ ರದ್ದುಪಡಿಸಿದೆ.
ಮಳೆಯ ರುದ್ರತಾಂಡವಕ್ಕೆ ಮುಂಬೈನಲ್ಲಿ ಜಲಪ್ರಳಯ, ತೇಲಾಡುತಿದೆ ವಾಣಿಜ್ಯನಗರಿ
ವಿವಿಧ ನಿಲ್ದಾಣಗಳಲ್ಲಿ ನಿಲುಗಡೆಯಾಗಿರುವ ರೈಲುಗಳ ಪ್ರಯಾಣಿಕರಿಗೆ ತಿಂಡಿ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ನಗರಕ್ಕೆ ಬಹಹುದೊಡ್ಡ ನೀರಿನ ಸೆಲೆ ಎನಿಸಿಕೊಂಡಿರುವ ತುಳಸಿ ಸರೋವರ ಕೂಡ ತುಂಬಿ ಹರಿಯತೊಡಗಿದೆ. ಕೆಲವೆಡೆ ಮನೆ, ಅಂಗಡಿಗಳಿಗೂ ನೀರು ನುಗ್ಗಿದೆ. ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಡಬ್ಬಾವಾಲಾಗಳೂ ಮಂಗಳವಾರ ಸೇವೆ ಸ್ಥಗಿತಗೊಳಿಸಿದ್ದರು.
ಮುಂಬೈಗೆ ಹೊಂದಿಕೊಂಡಿರುವ ಪಾಲ್ಘರ್ ಮತ್ತು ಥಾಣೆ ಜಿಲ್ಲೆಗಳಲ್ಲೂ ಮಳೆ ಅಬ್ಬರ ಮುಂದುವರೆದಿದ್ದು, ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಗುರುವಾರದವರೆಗೂ ಇದೇ ರೀತಿ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರೈಲು ಹಳಿಯ ಮೇಲೆ ತುಂಬಿದ ನೀರು, ಸಂಚಾರ ಸ್ಥಗಿತ
ಮುಂಬೈನಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ ಅಲ್ಲಿನ ರೈಲ್ವೆ ಹಳಿಯ ಮೇಲೆ ಕೂಡ ನೀರು ನಿಂತಿದ್ದು ಒದು ದಿನದ ಮಟ್ಟಿಗೆ ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು.ಕೆಲವು ಮಾರ್ಗಗಳಲ್ಲಿ 10 ರಿಂದ 15 ನಿಮಿಷಕ್ಕೊಂದು ರೈಲುಗಳು ಸಂಚಾರ ನಡೆಸುವತ್ತಿವೆ. ವಾಸಯ್ ಮತ್ತು ವಿಹಾರ್ ನಡುವಿನ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಮಳೆಯಲ್ಲಿ ಮಕ್ಕಳು, ಪೋಷಕರ ಚೆಂಡಿನಾಟ
ಒಂದೆಡೆ ಭಾರಿ ಮಳೆ, ಇನ್ನೊಂದೆಡೆ ಮಕ್ಕಳಿಗೆ ರಜೆ ಇನ್ನೇನು ತಾನೆ ಮಾಡಬೇಕು, ಮನೆಯಲ್ಲೂ ನೀರು, ಹೊರಗಡೆ ಕಾಲಿಟ್ಟರೂ ನೀರು ಹಾಗಾಗಿ ಪೋಷಕರು ತಮ್ಮ ಮಕ್ಕಳನ್ನು ಹೊರಗಡೆ ಕರೆದುಕೊಂಡು ಬಂದು ನೀರಿನಲ್ಲಿ ಆಟವಾಡಿದರು.
ಜನಸಾಗರ ಎಂದರೆ ಇದೇ ಇರಬೇಕು
ಕುಂಭದ್ರೋಣ ಮಳೆ ಮುಂಬೈನಲ್ಲಿ ಬೆಂಬಿಡದೆ ಸುರಿಯುತ್ತಿದೆ, ಜನರು ಸಂಕಷ್ಟದಲ್ಲಿದ್ದಾರೆ, ಸರ್ಕಾರಿ ಶಾಲಾ, ಕಾಲೇಜು, ಕಚೇರಿಗಳೇನೋ ರಜೆ ಇದೆ, ಆದರೆ ಖಾಸಗಿ ಕಾಲೇಜು, ಕಚೇರಿಗಳಿಗೆ ತೆರಳಲೇ ಬೇಕಿದೆ, ಅನಿವಾರ್ಯವಾಗಿ ಆ ಮಳೆಯಲ್ಲೇ ಜನರು ಪ್ರಯಾಣ ಬೆಳೆಸಿದ್ದಾರೆ ನೋಡಿ.
ಕೂದಲೆಳೆಯಲ್ಲಿ ತಪ್ಪಿದ ವಿಮಾನ ಅಪಘಾತ
ಭಾರಿ ಮಳೆಯ ನಡುವೆಯೇ ಮಂಗಳವಾರ ಮಧ್ಯಾಹ್ನ 2.50ಕ್ಕೆ ವಿಜಯವಾಡಾದಿಂದ ಆಗಮಿಸಿದ್ದ ಏರ್ ಇಂಡಿಯಾ ಐಎಕ್ಸ್ 213 ವಿಮಾನ ಮುಂಬೈ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡುವ ವೇಳೆ ಅಪಘಾತವಾಗಿರುವುದರಿಮದ ಕೂದಲೆಳೆ ಅಂತರದಿಂದ ಪಾರಾಗಿದೆ. ಮುಖ್ಯ ರನ್ವೇ 27ರ ಬದಲು ಪರ್ಯಾಯ ರನ್ವೇ 14ರಲ್ಲಿ ಲ್ಯಾಂಡ್ ಆಗು ಸಂದರ್ಭದಲ್ಲಿ ಜಾರಿದ ಪರಿಣಾಮ ರನ್ವೇಗಿಂತ 10 ಅಡಿಗಳಷ್ಟು ಮುಂದೆ ಹೋಗಿತ್ತು..
ಸರ್ಕಾರಿ ಶಾಲೆ, ಕಾಲೇಜುಗಳಿಗೆ ರಜೆ
ಮುಂಬೈನಲ್ಲಿ ಭಾರಿ ಮಳೆಯ ಅಬ್ಬರದಿಂದಾಗಿ, ಮಕ್ಕಳಿಗೆ ಶಾಲೆಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ, ಮಕ್ಕಳ ಹಿತದೃಷ್ಟಿಯಿಂದ, ಥಾಣೆಯಲ್ಲಿ ಶಾಲಾ-ಕಾಲೇಜುಗಳಿಗೆ ಇಂದು ರಜೆ ನೀಡಲಾಗಿದೆ. ಮುಂಬೈನಲ್ಲಿ ತಮ್ಮ ಏರಿಯಾದ ಪರಿಸ್ಥಿತಿ ನೋಡಿಕೊಂಡು ರಜೆ ಘೋಷಣೆ ಮಾಡುವಂತೆ ಶಾಲಾ ಮುಖ್ಯಸ್ಥರಿಗೆ ಶಿಕ್ಷಣ ಸಚಿವರು ಸೂಚನೆ ನೀಡಿದ್ದಾರೆ. ಈ ಕುರಿತು ಶಿಕ್ಷಣ ಸಚಿವ ವಿನೋದ್ ತಾವ್ಡೆ ಟ್ವೀಟ್ ಮಾಡಿದ್ದಾರೆ.
ಭಾನುವಾರದ ಬಳಿಕ 200 ಮಿ.ಮೀ ಮಳೆ ಯಾಗಿದೆ
ಕುಂಭದ್ರೋಣ ಮಳೆಗೆ ಮುಂಬೈ ತತ್ತರಿಸಿದೆ, ಭಾನುವಾರದಿಂದೀಚೆಗೆ 200 ಮಿ.ಮೀನಷ್ಟು ಮಳೆಯಾಗಿದೆ. ಶೀಘ್ರದಲ್ಲಿ ನಗರಕ್ಕೆ ಚಂಡಮಾರುತ ಅಪ್ಪಳಿಸಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಂತಹ ವದಂತಿಗಳನ್ನು ನಂಬಬೇಡಿ ಎಂದು ಮಹಾನಗರ ಪಾಲಿಕೆ ಮನವಿ ಮಾಡಿದೆ.