ಮುಂಗಾರು ಮಳೆಯಲ್ಲಿ ಮುಳುಗುತ್ತಿದೆ ಮುಂಬೈ ಮಹಾನಗರಿ
ಮುಂಬೈ, ಜೂನ್ 7: ಮಹಾಮಳೆಯಿಂದ ಕಳೆದ ವರ್ಷ ತತ್ತರಿಸಿದ್ದ ಮುಂಬೈ ನಗರಿ ಮತ್ತೊಮ್ಮೆ ಪ್ರವಾಹದಲ್ಲಿ ಮುಳುಗುವ ಭೀತಿ ಎದುರಾಗಿದೆ.
ಮಹಾನಗರಿಯಲ್ಲಿ ವರುಣನ ಆರ್ಭಟ ಜೋರಾಗಿದ್ದು, ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಲಂಡನ್ನಿಂದ ಬಂದ ಜೆಟ್ ಏರ್ವೇಸ್ ವಿಮಾನವನ್ನು ಮಾರ್ಗ ಬದಲಿಸಿ ಅಹಮದಾಬಾದ್ ವಿಮಾನನಿಲ್ದಾಣದಲ್ಲಿ ಇಳಿಸಲಾಗಿದೆ.
ರಾಜ್ಯದ ಕರಾವಳಿ, ಕೊಂಕಣ-ಗೋವಾ, ಮಹಾರಾಷ್ಟ್ರದಲ್ಲಿ ಭಾರಿ ಮಳೆ ಸಂಭವ
ದಾದರ್, ಪರೇಲ್, ಕಫ್ ಪರೇಡ್, ಬಾಂದ್ರಾ, ಬೊರಿವೇಲಿ ಮತ್ತು ಅಂಧೇರಿಗಳಲ್ಲಿನ ರಸ್ತೆಗಳು ಕಲಾವೃತವಾಗಿವೆ. ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ಎಚ್ಚರಿಕೆ ನೀಡಿದೆ.
Mumbai rains. BKC right now. pic.twitter.com/rREEH8igww
— Gaurav (@taklooman) 7 June 2018
ವಿದ್ಯುತ್ ಪೂರೈಕೆ ಕೈಕೊಟ್ಟಿದ್ದರಿಂದ ಅನೇಕ ರೈಲುಗಳ ಓಡಾಟಕ್ಕೆ ತೊಂದರೆಯಾಯಿತು. ಮುಂಬ್ರಾ-ಥಾಣೆ ಮಾರ್ಗದಲ್ಲಿನ ರೈಲುಗಳ ಸಂಚಾರ 15-20 ನಿಮಿಷಗಳಷ್ಟು ವಿಳಂಬವಾಗಿದೆ.
ಮಳೆಯಿಂದ ಹಾನಿಯಾಗದಂತೆ ಅನೇಕ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪಾಲಿಕೆ ಉಪ ಆಯುಕ್ತರು ಮತ್ತು ಸಹಾಯಕ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳ ರಜೆಗಳನ್ನು ರದ್ದುಗೊಳಿಸಲಾಗಿದೆ ಎಂದು ಬೃಹತ್ ಮುಂಬೈ ಮಹಾನಗರ ಪಾಲಿಕೆ ಹೇಳಿಕೆ ತಿಳಿಸಿದೆ.
ಗುರುವಾರವಷ್ಟೇ ಮುಂಗಾರು ಮುಂಬೈ ನಗರಿಯನ್ನು ಪ್ರವೇಶಿಸಿದ್ದು, ಇದುವರೆಗೂ ಮುಂಗಾರು ಪೂರ್ವ ಮಳೆಯೂ ಹೆಚ್ಚಾಗಿ ಬಿದ್ದಿದೆ. ಮುಂದಿನ ಎರಡು ಮೂರು ದಿನಗಳಲ್ಲಿ ಮಳೆ ತೀವ್ರತೆ ಇನ್ನಷ್ಟು ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೊಲಬಾ, ವರ್ಲಿ, ಘಟ್ಕೋಪರ್, ಟ್ರೊಂಬೆ, ಮಲಾಡ್ ಸೇರಿದಂತೆ ಪ್ರವಾಹ ಸಾಧ್ಯತೆಯ ಪ್ರದೇಶಗಳಲ್ಲಿ ನೌಕಾಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
BMC preparations for Mumbai Rains. pic.twitter.com/cchpFl80ef
— Hardik Rajgor (@Hardism) 6 June 2018
ಹವಾಮಾನ ಇಲಾಖೆಯು ಭಾರಿ ಮಳೆಯ ಎಚ್ಚರಿಕೆ ನೀಡಿದ್ದರೂ ಮುಂಬೈ ಮಹಾನಗರ ಪಾಲಿಕೆ ಅದನ್ನು ಎದುರಿಸಲು ಸೂಕ್ತ ಕ್ರಮ ತೆಗೆದುಕೊಂಡಿಲ್ಲ ಎಂದು ಜನಸಾಮಾನ್ಯರು ದೂರಿದ್ದಾರೆ.
ರಸ್ತೆಗಳು ನೀರಿನಿಂದ ತುಂಬಿಕೊಂಡಿದ್ದು, ಜನರು ಪರದಾಡುವಂತಾಗಿದೆ. ಆದರೆ, ಅದನ್ನು ನಿಭಾಯಿಸಲು ಪಾಲಿಕೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಆರೋಪಿಸಿದ್ದಾರೆ.