ರೇಪ್ ಕೇಸಿನಲ್ಲಿ ಅಂದರ್ ಆಗಿದ್ದ ನಟನಿಗೆ ಕೊನೆಗೂ ಜಾಮೀನು
ಮುಂಬೈ, ಜೂನ್ 07: ಅತ್ಯಾಚಾರ, ಬೆದರಿಕೆ ಪ್ರಕರಣದಲ್ಲಿ 14 ದಿನಗಳ ಕಾಲ ಜೈಲುವಾಸ ಅನುಭವಿಸಿದ ಬಳಿಕ ಕಿರುತೆರೆಯ ಜನಪ್ರಿಯ ನಟ ಕರಣ್ ಒಬೆರಾಯ್ ಗೆ ಬಾಂಬೆ ಹೈಕೋರ್ಟಿನಿಂದ ಶುಕ್ರವಾರದಂದು ಜಾಮೀನು ಸಿಕ್ಕಿದೆ.
ಆರೋಪಿ ಹಾಗೂ ಮಹಿಳೆ ನಡುವೆ ಸಹಮತವಾಗಿ ಶಾರೀರಿಕ ಸಂಬಂಧ ಏರ್ಪಟ್ಟಿದ್ದು ಪ್ರಾಥಮಿಕ ಹಂತದಲ್ಲಿ ಸಾಬೀತಾಗಿದ್ದು, ಇಬ್ಬರು ಲಿವ್ ಇನ್ ಸಂಬಂಧದಲ್ಲಿ ಇದ್ದಿದ್ದಕ್ಕೆ ಸಾಕ್ಷಿ ಸಿಕ್ಕಿದ್ದರಿಂದ ಕರಣ್ ಗೆ ಜಸ್ಟೀಸ್ ರೇವತಿ ಮೊಹಿತೆ ದೇರೆ ಅವರು 50 000 ರು ಶ್ಯೂರಿಟಿ ಜೊತೆಗೆ ಜಾಮೀನು ನೀಡಿದ್ದಾರೆ.
ಮೇ 06ರಂದು ನಡೆದ ವಿಚಾರಣೆ ಸಂದರ್ಭದಲ್ಲಿ ಕಟಕಟೆಯಲ್ಲಿ ನಿಂತು ಕಣ್ಣೀರಿಟ್ಟ ನಟ ಕರಣ್, ತಮ್ಮ ಮೇಲಿನ ಆರೋಪಗಳೆಲ್ಲ ಸುಳ್ಳು ಎಂದಿದ್ದರು. ಕರಣ್ ವಿರುದ್ಧ ಐಪಿಸಿ ಸೆಕ್ಷನ್ 376 ಹಾಗೂ 384 ಅನ್ವಯ ಅತ್ಯಾಚಾರ, ಬೆದರಿಕೆ ಪ್ರಕರಣ ದಾಖಲಿಸಿಕೊಂಡಿರುವ ಓಶಿವಾರ ಪೊಲೀಸರು, ಎಫ್ಐಆರ್ ಹಾಕಿದ್ದರು.
ತಮ್ಮ ಮೇಲೆ ಹೊರೆಸಿರುವ ಅತ್ಯಾಚಾರ, ಬೆದರಿಕೆ ಆರೋಪವನ್ನು ಕಿರುತೆರೆಯ ಜನಪ್ರಿಯ ನಟ ಕರಣ್ ಒಬೆರಾಯ್ ಅಲ್ಲಗೆಳೆದಿದ್ದರು.
ಸ್ವಾಭಿಮಾನ್, ಸಾಯಾ, ಜಸ್ಸಿ ಜೈಸ ಕೋಯಿ ನಹಿ, ಅಮೆಜಾನ್ ಪ್ರೈಮ್ ನಲ್ಲಿ ಇನ್ ಸೈಡ್ ಎಜ್ ಮುಂತಾದ ಟಿವಿ ಸರಣಿಯಲ್ಲಿ ನಟಿಸಿ ಜನಪ್ರಿಯತೆ ಗಳಿಸಿರುವ ಕರಣ್ ವಿರುದ್ಧ 2018ರಲ್ಲಿ ದೂರು ದಾಖಲಾಗಿತ್ತು.
ಅಕ್ಟೋಬರ್ 2016 ರಲ್ಲಿ ಡೇಟಿಂಗ್ ಸೈಟ್ ಮೂಲಕ ನಮ್ಮಿಬ್ಬರ ಪರಿಚಯವಾಗಿತ್ತು. ಸ್ನೇಹ, ಪ್ರೀತಿ ಬೆಳೆದು ಕರಣ್ ಮನೆಗೆ ಆಗಾಗ ಹೋಗಿ ಬರುತ್ತಿದ್ದೆ. ಒಂದು ದಿನ ಎಳನೀರಿನಲ್ಲಿ ಮತ್ತು ಬರುವಂಥ ಪದಾರ್ಥವನ್ನು ಹಾಕಿ ನಾನು ಪ್ರಜ್ಞೆ ತಪ್ಪುವಂತೆ ಮಾಡಿ, ನನ್ನ ಮೇಲೆ ಬಲಾತ್ಕಾರ ಮಾಡಿದ್ದಾನೆ. ನಂತರ ಮದುವೆಯಾಗುವೆ ಚಿಂತಿಸಬೇಡ ಎಂದು ಭರವಸೆ ನೀಡುತ್ತಾ ಕಾಲದೂಡುತ್ತಿದ್ದ. ಆದರೆ, ಭರವಸೆ ಹುಸಿಯಾಯಿತು ಎಂದು 34 ವರ್ಷ ವಯಸ್ಸಿನ ಮಹಿಳೆ ದೂರು ನೀಡಿದ್ದರು.