ಸೂಪರ್ ಸ್ಟಾರ್ ಹತ್ಯೆಗೆ ಸುಪಾರಿ, ಶಾರ್ಪ್ ಶೂಟರ್ ಬಂಧನ
ಮುಂಬೈ, ಆ. 19: ಹಿಂದಿ ಚಿತ್ರರಂಗಕ್ಕೂ ಭೂಗತ ಜಗತ್ತಿಗೂ ನಡುವೆ ತಿಕ್ಕಾಟ ಮತ್ತೊಮ್ಮೆ ಆರಂಭವಾದಂತಿದೆ. ಜನಪ್ರಿಯ ನಟನೊಬ್ಬನನ್ನು ಹತ್ಯೆ ಮಾಡಲು ಸಂಚು ರೂಪಿಸಿ ಭೂಗತ ಜಗತ್ತಿನ ಗ್ಯಾಂಗೊಂದು ಶಾರ್ಪ್ ಶೂಟರ್ ಒಬ್ಬನನ್ನು ಸ್ಟಾರ್ ನಟನ ಮನೆ ಬಳಿ ಕಳಿಸಿದ ಘಟನೆ ನಡೆದಿದೆ. ಆದರೆ, ಪೊಲೀಸರಿಗೆ ಈ ಸಂಚಿನ ಸುಳಿವು ಸಿಕ್ಕಿ, ಶಾರ್ಪ್ ಶೂಟರ್ ನನ್ನು ವಶಕ್ಕೆ ಪಡೆದಿದ್ದಾರೆ. ನಟ ಸಲ್ಮಾನ್ ಖಾನ್ ಮನೆ ಬಳಿ ಸುಳಿದಾಡುತ್ತಿದ್ದ ಅನುಮಾನಾಸ್ಪದ ವ್ಯಕ್ತಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಈ ಸತ್ಯ ಹೊರ ಬಂದಿದೆ.
Recommended Video
ಮುಂಬೈನ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಮನೆ ಸುತ್ತಾ ಮುತ್ತಾ ಸುಳಿದಾಡಿದ್ದ ಈ ಹಂತಕ, ಮನೆಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದ. ಬೇರೊಂದು ಕೇಸಿನ ತನಿಖೆ ಜಾಡು ಹಿಡಿದಿದ್ದ ಹರ್ಯಾಣ ಪೊಲೀಸರಿಗೆ ಸಲ್ಮಾನ್ ಹತ್ಯ ಸಂಚು ವಿಷಯ ತಿಳಿದು ಬಂದಿದೆ. ಕಳೆದ ಜನವರಿ ತಿಂಗಳಿನಲ್ಲಿ ಸಲ್ಮಾನ್ ಖಾನ್ ಹತ್ಯೆಗಾಗಿ ಸಂಚು ರೂಪಿಸಿ ಶಾರ್ಪ್ ಶೂಟರ್ ನನ್ನು ಲಾರೆನ್ಸ್ ಬಿಷ್ನೋಯಿ ಗ್ಯಾಂಗ್ ಕಳಿಸಿದೆ.
ಕೃಷ್ಣಮೃಗ ಹತ್ಯೆ ಪ್ರಕರಣ: ಸಲ್ಮಾನ್ ಖಾನ್ ಗೆ ಮತ್ತೆ ನೆಮ್ಮದಿ ಸುದ್ದಿ
ಎರಡು ದಿನಗಳ ಕಾಲ ಮನೆಯ ಆಗು ಹೋಗುಗಳನ್ನು ಗಮನಿಸುತ್ತಾ ಕಾಲ ಕಳೆದ ಶಾರ್ಪ್ ಶೂಟರ್ ಮುಂದಿನ ಹಂತದ ಕಾರ್ಯಾಚರಣೆ ಕೈಗೊಳ್ಳುವುದರೊಳಗೆ ಪೊಲೀಸರ ಕಣ್ಣಿಗೆ ಬಿದ್ದಿದ್ದಾನೆ ಎಂದು ಡಿಸಿಪಿ ರಾಜೇಶ್ ದುಗ್ಗಾಲ್ ಹೇಳಿದ್ದಾರೆ.
ಫರಿದಾಬಾದ್ ಕೊಲೆ ಪ್ರಕರಣದ ಆರೋಪಿ
ಫರಿದಾಬಾದ್ ಕೊಲೆ ಪ್ರಕರಣದಲ್ಲಿ ಬಂಧಿತರನ್ನು ವಿಚಾರಣೆಗೊಳಪಡಿಸಿದಾಗ ಈ ಮಾಹಿತಿ ಹೊರ ಬಂದಿದೆ. ಶಾರ್ಪ್ ಶೂಟರ್ ನನ್ನು ರಾಹುಲ್ ಎಂದು ಗುರುತಿಸಲಾಗಿದ್ದು, ಸಲ್ಮಾನ್ ಹತ್ಯೆ ಯೋಜನೆ ವಿಫಲವಾಗಲು ಕೊವಿಡ್ 19 ಲಾಕ್ಡೌನ್ ಕಾರಣವಾಗಿದೆ. ಮುಂಬೈನಿಂದ ರಾಜಸ್ಥಾನಕ್ಕೆ ತೆರಳಿದ್ದ ಈತ ತನ್ನ ಯೋಜನೆ ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ.
ನಾಲ್ಕು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ರಾಹುಲ್, ಲಾರೆನ್ಸ್ ಬಿಷ್ನೋಯಿ ಗ್ಯಾಂಗಿನ ಸದಸ್ಯನಾಗಿದ್ದಾನೆ. ಫರಿದಾಬಾದಿನಲ್ಲಿ ಜೂನ್ 24ರಂದು ಒಬ್ಬ ವ್ಯಕ್ತಿಯನ್ನು ಹತ್ಯೆಗೈದಿದ್ದ. ಈ ಕೇಸಿನ ಸಲುವಾಗಿ ರಾಹುಲ್ ಹುಡುಕಾಟ ನಡೆಸಿದ್ದ ಹರ್ಯಾಣ ಪೊಲೀಸರಿಗೆ ಸಲ್ಮಾನ್ ಖಾನ್ ಹತ್ಯೆ ಸಂಚು ತಿಳಿದು ಬಂದಿದೆ. ಈ ಘಟನೆ ಬಳಿಕ ಮುಂಬೈ ಪೊಲೀಸರು, ಸಲ್ಮಾನ್ ಮನೆಗೆ ಭದ್ರತೆ ಹೆಚ್ಚಿಸಿದ್ದಾರೆ.
ಕೃಷ್ಣಮೃಗ ಬೇಟೆಯಾಡಿದ್ದ ಸಲ್ಮಾನ್
1998ರಲ್ಲಿ 'ಹಮ್ ಸಾಥ್ ಸಾಥ್ ಹೈ' ಚಿತ್ರದ ಶೂಟಿಂಗ್ ವೇಳೆ ಸಲ್ಮಾನ್ ಖಾನ್ ರಿಂದ ರಾಜಸ್ಥಾನದ ಕಂಕನಿ ಹಳ್ಳಿಯ ಬಳಿ ಕೃಷ್ಣಮೃಗ ಬೇಟೆಯಾಡಿದ್ದರು. ಕಂಕನಿ ಗ್ರಾಮಸ್ಥರಿಂದ ಸಲ್ಮಾನ್ ಖಾನ್ ಹಾಗೂ ಇತರ ನಟರ ವಿರುದ್ಧ ಪೊಲಿಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ವನ್ಯಜೀವಿ ಸಂರಕ್ಷಣೆ ಕಾಯ್ದೆ 51 ಹಾಗೂ ದುಷ್ಟ ಕಾರ್ಯ ಮಾಡಲು ಗುಂಪು ಸೇರಿರುವ ಆರೋಪದ ಮೇಲೆ IPC ಸೆಕ್ಷನ್ 149 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಸಲ್ಮಾನ್ ಖಾನ್ ಅವರನ್ನು ವಿಚಾರಣೆಗೊಳಪಡಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಬಿಷ್ನೋಯಿ ಸಮುದಾಯದವರು ಅಂದಿನಿಂದ ಸಲ್ಮಾನ್ ಖಾನ್ ಮೇಲೆ ಕಣ್ಣಿಟ್ಟಿದ್ದು, ಹಲವು ಬಾರಿ ಜೀವ ಬೆದರಿಕೆಯೊಡ್ಡಿದ್ದಾರೆ.
ನಟ ಸಲ್ಮಾನ್ ಹತ್ಯೆಗೆ ಸ್ಕೆಚ್ ಹಾಕಿದ್ದ ಪಾತಕಿ ಬಂಧನ
ಶಿಕ್ಷೆ ತಪ್ಪಿಸಿಕೊಂಡಿದ್ದ ಸಲ್ಮಾನ್
ಈ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರಿಗೆ 5 ವರ್ಷಗಳ ಕಾಲ ಶಿಕ್ಷೆ ಪ್ರಕಟಿಸಲಾಯಿತು. ಜೋಧಪುರ ಜೈಲಿನಲ್ಲಿ ಎರಡು ರಾತ್ರಿ ಕಳೆದ ಸಲ್ಮಾನ್, ಜಾಮೀನು ಪಡೆದು ಹೊರ ಬಂದರು. ಮಿಕ್ಕ ಎಲ್ಲಾ ನಟ, ನಟಿಯರು ಹಾಗೂ ರಾಜಸ್ಥಾನಿ ಗೈಡ್ ದುಷ್ಯಂತ್ ಸಿಂಗ್ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಯಿತು. ಬೆನಿಫಿಟ್ ಆಫ್ ಡೌಟ್ ಎಂದು ಪರಿಗಣಿಸಿ, ಘಟನೆ ನಡೆದ ಸ್ಥಳದಲ್ಲಿದ್ದರೂ ಸೋನಾಲಿ ಬೇಂದ್ರೆ, ನೀಲಂ ಕೊಥಾರಿ, ತಬು, ಸೈಫ್ ಅಲಿ ಖಾನ್ ಹಾಗೂ ದುಷ್ಯಂತ್ ಸಿಂಗ್ ಅವರು ಕ್ರೈಂಗೆ ಕುಮ್ಮಕ್ಕು ನೀಡಿದ್ದರ ಬಗ್ಗೆ ಯಾವುದೇ ಸಾಕ್ಷಿ ಸಿಕ್ಕಿರಲಿಲ್ಲ. ಸಲ್ಮಾನ್ ಖಾನ್ ಗೆ ಜಾಮೀನು ಸಿಕ್ಕ ಕ್ಷಣದಿಂದ ಸಲ್ಮಾನ್ ವಿರುದ್ಧ ರಾಜಸ್ಥಾನದ ಗುಂಪೊಂದು ಪ್ರತಿರೋಧ ವ್ಯಕ್ತಪಡಿಸುತ್ತಾ ಬಂದಿದೆ.
2018ರಲ್ಲೂ ಹತ್ಯೆಗೆ ಸಂಚು ರೂಪಿಸಲಾಗಿತ್ತು
ಲಾರೆನ್ಸ್ ಬಿಷ್ಣೋಯಿ ಗ್ಯಾಂಗಿನ ಸದಸ್ಯನಾಗಿರುವ ಸಂಪತ್ ನೆಹ್ರಾ ಎಂಬ ಶಾರ್ಪ್ ಶೂಟರ್, 2018ರ ಜನವರಿ ತಿಂಗಳಿನಲ್ಲಿ ಸಲ್ಮಾನ್ ಖಾನ್ ಮನೆ, ಸಲ್ಮಾನ್ ಓಡಾಡುವ ದಾರಿಯನ್ನು ಮೊಬೈಲ್ ಮೂಲಕ ಚಿತ್ರೀಕರಿಸಿದ್ದನು. ಕೃಷ್ಣಮೃಗ ಕೇಸಿಗೆ ಸಂಬಂಧಿಸಿದಂತೆ ಸಲ್ಮಾನ್ ಕೊಲ್ಲುವುದಾಗಿ ಬಿಷ್ಣೋಯಿ ಗ್ಯಾಂಗ್ ಬೆದರಿಕೆ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.