ರಾಜೀನಾಮೆ ಘಟನೆಗಳ ಕುರಿತು ಪುಸ್ತಕ ಬರೆಯುತ್ತೇನೆ: ಎಚ್ ವಿಶ್ವನಾಥ್
Recommended Video
ಮುಂಬೈ, ಜುಲೈ 27: ಸಮ್ಮಿಶ್ರ ಸರ್ಕಾರ ಬಂದ ಬಳಿಕ ನಡೆದ ಘಟನೆಗಳು ಮತ್ತು ರಾಜೀನಾಮೆ ಪ್ರಹಸನ ಹಾಗೂ ಅದರ ಸುತ್ತಲೂ ನಡೆದ ಘಟನಾವಳಿಗಳ ಕುರಿತು ಪುಸ್ತಕ ಬರೆಯುವುದಾಗಿ ಹುಣಸೂರು ಜೆಡಿಎಸ್ ಶಾಸಕ ಎಚ್. ವಿಶ್ವನಾಥ್ ತಿಳಿಸಿದರು.
ಖಾಸಗಿ ವಾಹಿನಿಗಳೊಂದಿಗೆ ಮಾತನಾಡಿದ ಅವರು, 'ರಾಜೀನಾಮೆ ವಿಚಾರವಾಗಿ ಪುಸ್ತಕ ಬರೆಯುತ್ತೇನೆ. ನಾಯಕನ್ಯಾರು ಖಳನಾಯಕನ್ಯಾರು ಎಂದು ಬರೆಯುತ್ತೇನೆ. ಏನೂ ತಿಳಿವಳಿಕೆ ಇಲ್ಲದವರೂ ಸದನದಲ್ಲಿ ಮಾತನಾಡಿದ್ದಾರೆ. ನಾನು ಎಲ್ಲರ ಬಗ್ಗೆಯೂ ಪುಸ್ತಕದಲ್ಲಿ ಬರೆಯುತ್ತೇನೆ. 30 ದಿನಗಳಲ್ಲಿ ನಡೆದ ಘಟನೆಗಳು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಕಾರಣಗಳು, ಬಳಿಕ ಆದ ಘಟನೆಗಳು ಹೀಗೆ ಎಲ್ಲ ಅಂಶಗಳನ್ನು ಬಗ್ಗೆ ಪುಸ್ತಕದಲ್ಲಿ ದಾಖಲಿಸುತ್ತೇನೆ' ಎಂದು ಹೇಳಿದರು.
ಮುಖಂಡರು ನಮ್ಮನ್ನು ಮನವೊಲಿಸುವುದಲ್ಲ, ಹೆದರಿಸುವುದು ಮತ್ತು ಈ ರೀತಿ ಹೇಳಿಕೆಗಳನ್ನು ನೀಡಿ ಗೊಂದಲ ಸೃಷ್ಟಿಸುವುದನ್ನು ಮಾಡುತ್ತಿದ್ದಾರೆ. ಅದಕ್ಕೆ ಯಾರೂ ಕೇರ್ ಮಾಡೊಲ್ಲ. ಇದೆಲ್ಲ ನಾಟಕಗಳು ಗೊತ್ತು. ಯಾರೂ ಯಾವ ಹೆದರಿಕೆಗೆ, ಬೆದರಿಕೆಗೆ, ಆಮಿಷಕ್ಕಾಗಿ ಜಗ್ಗುವವರು ಇಲ್ಲ ಎಂದು ಹೇಳಿದರು.
ಸಿದ್ದರಾಮಯ್ಯಗೆ ಅತೃಪ್ತ ಶಾಸಕರ ಫೋನ್ ಕರೆ: ಯಡಿಯೂರಪ್ಪಗೆ ಆತಂಕ
ಸಿದ್ದರಾಮಯ್ಯ ಮತ್ತು ಎಂಬಿ ಪಾಟೀಲ್ ಅವರು ಸುಳ್ಳುಗಳನ್ನು ಹೇಳಿ ದಾರಿತಪ್ಪಿಸುತ್ತಿದ್ದಾರೆ. ಆದರೆ ಅವರೇ ದಾರಿ ತಪ್ಪುತ್ತಿದ್ದಾರೆ. ಅವರ ಜತೆ ಇರುವವರು ದಾರಿತಪ್ಪಿದ ಮಕ್ಕಳು ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಸಂಪರ್ಕ ಸುಳ್ಳು
ಅತೃಪ್ತ ಶಾಸಕರು ಕರೆ ಮಾಡಿ ತಮ್ಮನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು ಎಂಬ ಸಿದ್ದರಾಮಯ್ಯ ಹೇಳಿಕೆಯನ್ನು ಎಚ್. ವಿಶ್ವನಾಥ ತಳ್ಳಿಹಾಕಿದರು. 'ಇವೆಲ್ಲ ಸುಳ್ಳು, ಬೊಗಳೆ. ಯಾರನ್ನೋ ನಂಬಿಸಲು, ಯಾರನ್ನೋ ವಂಚಿಸಲು ಈ ರೀತಿ ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇಬ್ಬರು ಅತೃಪ್ತ ಶಾಸಕರು ಸಿದ್ಧರಾಮಯ್ಯ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು. ಅವರಿಗೆ ನಿರಂತರ ಕರೆಗಳನ್ನು ಮಾಡಿದ್ದರು. ಆದರೆ ಅವರು ಕರೆ ಸ್ವೀಕರಿಸಿರಲಿಲ್ಲ ಎಂದು ಎಂಬಿ ಪಾಟೀಲ್ ಹೇಳಿದ್ದರು. ಅದು ಸತ್ಯ ಎಂದು ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದರು.
ಸಿದ್ದರಾಮಯ್ಯ ಸಂಪರ್ಕದಲ್ಲಿ ಇಬ್ಬರು ಅತೃಪ್ತರು: ಎಂಬಿ ಪಾಟೀಲ
ದಾರಿತಪ್ಪಿದ ಮಕ್ಕಳು
ಸಿದ್ದರಾಮಯ್ಯ ಸೇರಿದಂತೆ ಮುಖಂಡರನ್ನು ಸಂಪರ್ಕಿಸಲು ಯಾರೂ ತಯಾರಿಲ್ಲ. ಇಲ್ಲಿ ಎಲ್ಲರೂ ಬುದ್ಧಿವಂತರಿದ್ದಾರೆ. ಎಂಬಿ ಪಾಟೀಲ್ ಎಷ್ಟು ದಡ್ಡ ಎನ್ನುವುದು ಗೃಹ ಸಚಿವರಾಗಿದ್ದಾಗಲೇ ರಾಜ್ಯದ ಜನರಿಗೆ ಗೊತ್ತಾಗಿದೆ. ಅವರು ಗೊಂದಲ ಸೃಷ್ಟಿಸಿ ದಾರಿ ತಪ್ಪಿಸಲು ಈ ರೀತಿ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಆದರೆ ಯಾರೂ ದಾರಿ ತಪ್ಪುವುದಿಲ್ಲ. ಅವರೇ ದಾರಿ ತಪ್ಪಿದ್ದಾರೆ. ಸಿದ್ದರಾಮಯ್ಯ, ಎಂಬಿ ಪಾಟೀಲ್ ಸೇರಿದಂತೆ ಅವರ ಜತೆ ಇರುವವರು ದಾರಿ ತಪ್ಪಿದ ಮಕ್ಕಳು. ರಾಜ್ಯ ರಾಜಕಾರಣದಲ್ಲಿ 30 ದಿನಗಳಿಂದ ಅವರು ದಾರಿ ತಪ್ಪಿದ ಮಕ್ಕಳು ಎಂದು ಟೀಕಿಸಿದರು.
ನಮಗೂ ಕಾನೂನು ಇದೆ
ಮುಂಬೈನಲ್ಲಿರುವ ಶಾಸಕರು ಯಾರು ಯಾರನ್ನೂ ಸಂಪರ್ಕಿಸಲು ಹೋಗಿಲ್ಲ. ಬೇರೆಯವರು ಪ್ರಯತ್ನ ಮಾಡಿದರೂ ನಾವು ಮಾತನಾಡಲು ಸಿದ್ಧರಿಲ್ಲ. ನಾವೆಲ್ಲರೂ ಬಂಡೆ ಇದ್ದ ಹಾಗೆ ಗಟ್ಟಿಯಾಗಿ ಇದ್ದೇವೆ. ನಾವು ದುಡ್ಡಿಗೋಸ್ಕರ ಇಲ್ಲಿಗೆ ಬಂದಿಲ್ಲ. ಸರ್ಕಾರದ ನಡವಳಿಕೆಯಿಂದ ಬೇಸೆತ್ತು ಬಂದಿರುವುದು. ಸಂಪೂರ್ಣ ಒಗ್ಗಟ್ಟಾಗಿದ್ದೇವೆ. ಅದರಿಂದ ತಾನೆ ಸರ್ಕಾರ ಬಿದ್ದಿದ್ದು. ನಮ್ಮನ್ನು ಅನರ್ಹಗೊಳಿಸಿದರೆ ಕಾನೂನು ಹೋರಾಟ ಮಾಡುತ್ತೇವೆ. ಯಾರಿಗೂ ಹೆದರೊಲ್ಲ. ಮುಂದಿನ ನಡೆ ಸುಪ್ರೀಂಕೋರ್ಟ್. ನಮಗೂ ಕಾನೂನು ಇದೆ. ಕಾನೂನು ಎಲ್ಲರಿಗೂ ಇದೆ. ನಾವು ಯಾರಿಗೂ ಜಗ್ಗುವುದಿಲ್ಲ ಎಂದರು.
ಅನರ್ಹತೆಗೆ ಹೆದರುವುದಿಲ್ಲ ಎಂದು ಅತೃಪ್ತ ಶಾಸಕರ ಖಡಕ್ ಸಂದೇಶ
ದಾರಿತಪ್ಪಿಸುವ ಪ್ರಯತ್ನ
ಸಿದ್ದರಾಮಯ್ಯ ಮತ್ತು ಕೆಲವು ಮುಖಂಡರು ಹೀಗೆ ಹೇಳಿಕೆಗಳನ್ನು ನೀಡುವ ಮೂಲಕ ಸುಮ್ಮನೆ ದಾರಿ ತಪ್ಪಿಸುತ್ತಿದ್ದಾರೆ. ವಿಶ್ವಾಸಮತ ಬೆನ್ನಲ್ಲೇ ದಾರಿ ತಪ್ಪಿಸುತ್ತಿದ್ದಾರೆ. ನಾವೆಲ್ಲ ಒಗ್ಗಟ್ಟಾಗಿ ಇದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಮ್ಮನ್ನು ಅನರ್ಹ ಮಾಡಿದರೂ ಹೆದರೊಲ್ಲ. ನಾವು ಕಾನೂನು ಹೋರಾಟ ಮುಂದುವರಿಸುತ್ತೇವೆ. ಯಾರು ಕೂಡ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿಲ್ಲ. ಅನರ್ಹತೆ ಅಸ್ತ್ರಕ್ಕೆ ಹೆದರುವುದಿಲ್ಲ ಎಂದರು.