ಸಂಪೂರ್ಣ ಲಸಿಕೆ ಪಡೆದ ಪ್ರಯಾಣಿಕರು ಪರೀಕ್ಷೆ, ಕ್ವಾರಂಟೈನ್ಗೆ ಒಳಗಾಗಬೇಕಿಲ್ಲ: ತಜ್ಞರು
ಪುಣೆ, ಜು.08: ಕೋವಿಡ್ -19 ಲಸಿಕೆ ನಿರ್ವಹಣೆಯ ರಾಷ್ಟ್ರೀಯ ತಜ್ಞರ ಗುಂಪು ಮತ್ತು ಭಾರತದಲ್ಲಿ ರೋಗನಿರೋಧಕ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (ಎನ್ಟಿಎಜಿಐ), ಆರೋಗ್ಯ ಸಚಿವಾಲಯದ ಇತ್ತೀಚಿನ ಸಭೆಯಲ್ಲಿ ಸಂಪೂರ್ಣವಾಗಿ ಕೋವಿಡ್ ಲಸಿಕೆ ಪಡೆದಿರುವವರು ಅಂತರ-ರಾಜ್ಯ ಪ್ರಯಾಣದ ಸಮಯದಲ್ಲಿ ಕ್ವಾರಂಟೈನ್ ಹಾಗೂ ಕೋವಿಡ್ ಪರೀಕ್ಷೆಯನ್ನು ತಪ್ಪಿಸಬಹುದು ಎಂದು ಶಿಫಾರಸು ಮಾಡಿದೆ.
ಆ ಸಭೆಯ ಭಾಗವಾಗಿದ್ದ ಕೋವಿಡ್ -19 ಕಾರ್ಯ ಸಮೂಹದ ಅಧ್ಯಕ್ಷ ಡಾ.ಎನ್.ಕೆ.ಅರೋರಾ ಬುಧವಾರ ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. "ಈ ಶಿಫಾರಸು ದೇಶದಿಂದ ಹೊರಹೋಗುವವರಿಗೂ ಮಾಡಬಹುದು," ಎಂದು ಹೇಳಿದ್ದಾರೆ.
ಡೆಲ್ಟಾದಿಂದಾಗಿ ಶೇ.60 ರಷ್ಟು ಕೋವಿಡ್ ಪ್ರತಿಕಾಯ ನಾಶ: ದೆಹಲಿ ಅಧ್ಯಯನ ವರದಿ
"ಸಂಪೂರ್ಣವಾಗಿ ಲಸಿಕೆ ಹಾಕಿದ ವ್ಯಕ್ತಿಯು ಅಂತರರಾಜ್ಯ ಅಥವಾ ರಾಜ್ಯಗಳಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲಿ ಪ್ರಯಾಣದ ಮೊದಲು ಅಥವಾ ನಂತರ ಪರೀಕ್ಷೆಗೆ ಒಳಗಾಗುವ ಹಾಗೂ ಕ್ವಾರಂಟೈನ್ಗೆ ಒಳಗಾಗುವ ಅವಶ್ಯಕತೆ ಇಲ್ಲ. ಸಂಪೂರ್ಣವಾಗಿ ಲಸಿಕೆ ಹಾಕಿದ ವ್ಯಕ್ತಿಗಳು ತಾವು ವಿದೇಶ ಪ್ರವಾಸ ಮಾಡುವ ಸಂದರ್ಭ ಆ ದೇಶದಲ್ಲಿ ಕೊರೊನಾ ಪರೀಕ್ಷೆ ಅಗತ್ಯವಿಲ್ಲ ಎಂದಾದರೆ ಪರೀಕ್ಷೆ ಮಾಡಬೇಕಾಗಿಲ್ಲ. ಹಾಗೆಯೇ ಭಾರತಕ್ಕೆ ಮರಳಿದ ನಂತರ ಕ್ವಾರಂಟೈನ್ಗೂ ಒಳಗಾಗಬೇಕಾಗಿಲ್ಲ," ಎಂದು ತಿಳಿಸಿದ್ದಾರೆ.
ಮೇ ಅಂತ್ಯದಲ್ಲಿ ನಡೆದ ಎನ್ಟಿಎಜಿಐ ಮತ್ತು ಎನ್ಇಜಿವಿಎಸಿ 16 ನೇ ಸಭೆಯಲ್ಲಿ ಈ ಶಿಫಾರಸುಗಳನ್ನು ಮಾಡಲಾಗಿದೆ ಎಂದು ಡಾ. ಆರೋರ ಹೇಳಿದ್ದಾರೆ. "ಈ ಹಿಂದೆ ಕೊರೊನಾ ಲಸಿಕೆ ಪಡೆದಿದ್ದು ಕೋವಿಡ್ ಸೋಂಕಿಗೆ ಒಳಗಾಗಿ ಗುಣಮುಖರಾದ ಹಾಗೂ ರೋಗ ಲಕ್ಷಣ ರಹಿತರಾದವರು ದೇಶದ ಒಳಗೆಯೇ ಪ್ರಯಾಣ ಮಾಡುವಾಗ ಕ್ವಾರಂಟೈನ್ ಹಾಗೂ ಕೊರೊನಾ ಪರೀಕ್ಷೆಯನ್ನು ಮಾಡದಿರಬಹುದು ಎಂದು ನಾವು ಶಿಫಾರಸು ಮಾಡಿದ್ದೇವೆ," ಎಂದಿದ್ದಾರೆ.
"ಸಂಪೂರ್ಣ ಲಸಿಕೆ" ಎನ್ನುವುದು ಎರಡನೇ ಡೋಸ್ ಪಡೆದು ಕನಿಷ್ಠ ಎರಡು ವಾರಗಳವರೆಗೆ ಕಳೆದಿರಬೇಕು ಎಂದು ಕೂಡಾ ಅಧಿಕಾರಿ ಮಾಹಿತಿ ನೀಡಿದ್ದಾರೆ. "ಈ ಶಿಫಾರಸುಗಳನ್ನು ಇತ್ತೀಚೆಗೆ ಸಾರ್ವಜನಿಕ ವಲಯಕ್ಕೆ ಬಿಡುಗಡೆ ಮಾಡಲಾಯಿತು. ಆದರೆ ಹಲವಾರು ರಾಜ್ಯಗಳು ಸಂಪೂರ್ಣ ಲಸಿಕೆ ಹಾಕಿದ ಪ್ರಯಾಣಿಕರು ಆರ್ಟಿ-ಪಿಸಿಆರ್ ವರದಿ ತೋರಿಸುವುದು ಕಡ್ಡಾಯಗೊಳಿಸಿದ್ದಾರೆ. ಈ ಅವಶ್ಯಕತೆಯು ಜನರು ಮತ್ತು ಪ್ರಯಾಣ ಕಂಪನಿಗಳ ಮೇಲೆ ಸಾಕಷ್ಟು ಒತ್ತಡವನ್ನುಂಟು ಮಾಡಿದೆ," ಎಂದು ವಿವರಿಸಿದ್ದಾರೆ.
"ಹೆಚ್ಚಿನ ರಾಜ್ಯಗಳು ಈ ಶಿಫಾರಸುಗಳ ಬಗ್ಗೆ ತಿಳಿದಿಲ್ಲ ಮತ್ತು ನಿರ್ಬಂಧಗಳನ್ನು ಹೇರುತ್ತಲೇ ಇರುತ್ತವೆ. ಪ್ರಯಾಣಿಕರ ತೊಂದರೆಗಳನ್ನು ನಿವಾರಿಸಲು ಅವುಗಳನ್ನು ರಾಜ್ಯ ಮಟ್ಟದಲ್ಲಿ, ಶೀಘ್ರದಲ್ಲಿಯೇ ಜಾರಿಗೆ ತರಲು ಕೇಂದ್ರವು ಆದೇಶ ಹೊರಡಿಸಬೇಕು," ಎಂದು ಟ್ರಾವೆಲ್ ಏಜೆಂಟ್ಸ್ ಅಸೋಸಿಯೇಶನ್ ಆಫ್ ಇಂಡಿಯಾ (ಟಿಎಎಐ) ಅಧ್ಯಕ್ಷ ಜ್ಯೋತಿ ಮಾಯಲ್ ಹೇಳಿದರು.
(ಒನ್ಇಂಡಿಯಾ ಸುದ್ದಿ)