"ಅಮಿತಾಬ್, ಅಕ್ಷಯ್ ಸಿನಿಮಾಗಳಿಗೆ ಮಹಾರಾಷ್ಟ್ರದಲ್ಲಿ ಅವಕಾಶ ನೀಡಲ್ಲ"
ಮುಂಬೈ, ಫೆಬ್ರವರಿ 18: "ದೇಶದಲ್ಲಿ ಇಂಧನ ಬೆಲೆ ಈ ಮಟ್ಟಕ್ಕೆ ಏರಿಕೆಯಾಗುತ್ತಿದ್ದರೂ ಸೆಲೆಬ್ರಿಟಿಗಳ್ಯಾರೂ ಟೀಕೆ ಮಾಡುತ್ತಿಲ್ಲ, ಅದರ ಬಗ್ಗೆ ಪ್ರಸ್ತಾಪವನ್ನೂ ಮಾಡುತ್ತಿಲ್ಲವೇಕೆ" ಎಂದು ಮಹಾರಾಷ್ಟ್ರ ಕಾಂಗ್ರೆಸ್ ಮುಖಂಡ ನಾನಾ ಪಟೋಲೆ ಬಾಲಿವುಡ್ ನಟರಾದ ಅಮಿತಾಬ್ ಬಚ್ಚನ್ ಹಾಗೂ ಅಕ್ಷಯ್ ಕುಮಾರ್ ವಿರುದ್ಧ ಕಿಡಿಕಾರಿದ್ದಾರೆ. ಜೊತೆಗೆ ಈ ನಟರ ಚಿತ್ರಗಳ ಚಿತ್ರೀಕರಣಕ್ಕೆ ಮಹಾರಾಷ್ಟ್ರದಲ್ಲಿ ಅವಕಾಶವನ್ನೂ ನೀಡುವುದಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ಆಡಳಿತವಿದ್ದಾಗ, ಮನಮೋಹನ್ ಸಿಂಗ್ ಅಧಿಕಾರಾವಧಿಯಲ್ಲಿ ಇಂಧನ ಬೆಲೆ ಏರಿಕೆ ಮಾಡಿದಾಗ ಈ ನಟರು ಕೇಂದ್ರದ ವಿರುದ್ಧ ಟೀಕೆ ಮಾಡಿದ್ದರು. ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದರು. ಆದರೆ ಈಗ ಇಂಧನ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದ್ದರೂ ಯಾರೂ ತುಟಿ ಬಿಚ್ಚುತ್ತಿಲ್ಲ ಎಂದು ಆರೋಪಿಸಿದ್ದಾರೆ.
ದುಬಾರಿ ಪೆಟ್ರೋಲ್; ಹಣ ಉಳಿಸಲು ಪಂಜಾಬ್ನತ್ತ ರಾಜಸ್ತಾನ ಜನ...
"ಸಾಮಾನ್ಯ ಜನರ ಮೇಲೆ ಇಂಧನ ಬೆಲೆ ಕೆಟ್ಟ ಪರಿಣಾಮ ಬೀರಿದೆ. ಮನಮೋಹನ್ ಸಿಂಗ್ ಸರ್ಕಾರ ಇಂಧನ ಬೆಲೆ ಏರಿಕೆ ಮಾಡಿದಾಗ ಇವರೆಲ್ಲಾ ಟ್ವೀಟ್ ಮಾಡಿ ವಿರೋಧ ವ್ಯಕ್ತಪಡಿಸಿದ್ದರು. ಈಗ ಸರ್ವಾಧಿಕಾರಿ ಮೋದಿ ವಿರುದ್ಧ ಮಾತನಾಡಲು ಇವರಿಗೆ ಧೈರ್ಯ ಬರುತ್ತಿಲ್ಲವೇ" ಎಂದು ಪ್ರಶ್ನಿಸಿದ್ದಾರೆ.
"ಮಹಾರಾಷ್ಟ್ರದಲ್ಲಿ ಅಮಿತಾಬ್ ಬಚ್ಚನ್ ಹಾಗೂ ಅಕ್ಷಯ್ ಕುಮಾರ್ ಸಿನಿಮಾಗಳ ಚಿತ್ರೀಕರಣಕ್ಕೆ ಅವಕಾಶ ಕೊಡುವುದಿಲ್ಲ. ನೀವು ಈ ಸರ್ಕಾರದ ರಾಷ್ಟ್ರವಿರೋಧಿ ನೀತಿಗಳ ಕುರಿತು ಮಾತನಾಡಿ ಇಲ್ಲವೇ ನಿಮ್ಮ ಸಿನಿಮಾಗಳಿಗೆ ಇಲ್ಲಿ ಅವಕಾಶವಿಲ್ಲ" ಎಂದು ಹೇಳಿದ್ದಾರೆ.