ಒಂದರ ಹಿಂದೊಂದು ಕೊಚ್ಚಿಹೋದ ಹಸುಗಳು: ಹೃದಯಕಲಕುವ ವಿಡಿಯೋ ವೈರಲ್
ಮುಂಬೈ, ಆಗಸ್ಟ್ 3: ಮಹಾರಾಷ್ಟ್ರದಲ್ಲಿ ಆರ್ಭಟಿಸುತ್ತಿರುವ ಮಳೆ ಸಾಕಷ್ಟು ಅನಾಹುತಗಳನ್ನು ಉಂಟುಮಾಡಿದೆ. ಮುಂಬೈ ನಗರ ಸೇರಿದಂತೆ ರಾಜ್ಯದ ಅನೇಕ ಕಡೆ ಜನಜೀವನ ತೀವ್ರ ಸಂಕಷ್ಟದಲ್ಲಿ ಸಿಲುಕಿದೆ. ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಈ ಮಳೆ ಪಕ್ಕದಲ್ಲಿರುವ ಕರ್ನಾಟಕದ ಮೇಲೂ ಪರಿಣಾಮ ಬೀರಿದೆ.
ಕೃಷ್ಣಾ ನದಿಯ ಅಚ್ಚುಕಟ್ಟು ಪ್ರದೇಶದಲ್ಲಿ ವಿಪರೀತ ಮಳೆ ಸುರಿಯುತ್ತಿರುವುದರಿಂದ ಕೋಯ್ನಾ ಅಣೆಕಟ್ಟಿನ ಒಳಹರಿವು ಹೆಚ್ಚಾಗಿ ನೀರು ಹೊರಬಿಡಲಾಗಿದೆ. ಇದರಿಂದ ಮಹಾರಾಷ್ಟ್ರದ ಗಡಿಭಾಗದಲ್ಲಿರುವ ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಅನೇಕ ಕಡೆ ಅನಾಹುತಗಳು ಉಂಟಾಗಿವೆ. ಮನೆಗಳಿಗೆ ನೀರು ನುಗ್ಗಿದ್ದು ಜನರು ಪರದಾಡುವಂತಾಗಿದೆ.
ಮಹಾರಾಷ್ಟ್ರದಲ್ಲಿ ಭಾರಿ ಮಳೆ: ರಾಜ್ಯದಲ್ಲಿ ಪ್ರವಾಹ ಭೀತಿ
ಈ ನಡುವೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವರೋಟಿ ಎಂಬಲ್ಲಿ ನಡೆದ ಘಟನೆಯ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ನೀರಿನಲ್ಲಿ ಬಹುತೇಕ ಮುಳುಗಿದ್ದ ಸೇತುವೆ ಮೇಲೆ ಸಾಗುತ್ತಿದ್ದ ಹಸುಗಳು ಒಂದರ ಹಿಂದೊಂದು ಆಯತಪ್ಪಿ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋದ ಹೃದಯ ವಿದ್ರಾವಕ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
#Cattle walking on the old bridge over Surya river being washed away by the overflowing river at Varoti village, Kasa taluka of #Palghar district. #maharashtrafloods#Mumbairains#monsoon2019pic.twitter.com/E7XWfMxEG2
— Mumbai Matters™✳️ (@mumbaimatterz) August 3, 2019
ಸೂರ್ಯನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ನಾಸಿಕ್ಗೆ ಸಂಪರ್ಕಿಸುವ ಹಳೆಯ ಸೇತುವೆಯಲ್ಲಿ ಈ ಘಟನೆ ನಡೆದಿದೆ. ಕಾಸಾ ತಾಲ್ಲೂಕಿನ ವರೋಟಿ ಗ್ರಾಮದಲ್ಲಿ ಐದು ಹಸುಗಳು ಸೇತುವೆ ದಾಟುತ್ತಿದ್ದವು. ಸೇತುವೆಯ ಸ್ವಲ್ಪ ಭಾಗದ ಮೇಲೆ ನೀರು ಹರಿಯುತ್ತಿದ್ದರೆ, ಉಳಿದ ಭಾಗದಲ್ಲಿ ಸೇತುವೆ ಕಾಣದಷ್ಟು ನೀರು ಪ್ರವಹಿಸುತ್ತಿತ್ತು. ಸೇತುವೆಯ ದಾರಿಯನ್ನು ನಿಖರವಾಗಿ ಅಂದಾಜಿಸಲು ಸಾದ್ಯವಾಗದ ಹಸುಗಳು ಅದರ ತುದಿಗೆ ಸಾಗಿವೆ.
ಈ ಐದೂ ಹಸುಗಳು ಸಾಲುಗಟ್ಟಿ ಹೋಗುತ್ತಿದ್ದವು. ಒಂದೊಂದೇ ಹಸು ಕಾಲು ಜಾರಿ ಬಿದ್ದು ವೇಗವಾಗಿ ಹರಿಯುವ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿವೆ. ಕೊನೆಯಲ್ಲಿ ಒಂದು ಹಸು ಮಾತ್ರ ಉಳಿದುಕೊಂಡಿದೆ. ತನ್ನ ಮುಂದಿದ್ದ ಒಂದು ಹಸು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರಿಂದ ಅದು ಗಾಬರಿಗೊಂಡು ಹಿಂದಕ್ಕೆ ತಿರುಗಿತ್ತು. ಆಗ ತನ್ನೊಟ್ಟಿಗೆ ಇದ್ದ ಇತರೆ ಮೂರು ಹಸುಗಳು ಕೂಡ ಕಾಣದೆ ಹೋಗಿದ್ದರಿಂದ ಇನ್ನಷ್ಟು ಕಂಗಾಲಾಯಿತು. ಕೂಡಲೇ ಅದು ನದಿ ದಾಟುವ ಸಾಹಸವನ್ನು ಬಿಟ್ಟು ಸೇತುವೆ ಮೇಲೆ ನೀರು ಹರಿಯದೆ ಇರುವ ಸುರಕ್ಷಿತ ಜಾಗದತ್ತ ತೆರಳಿತು.
ನಿನ್ನೆ ರಾತ್ರಿಯಿಂದ ಮೂಡಿಗೆರೆಯಲ್ಲಿ ಧಾರಾಕಾರ ಮಳೆ; ಅಲೇಖಾನ್ ಬಳಿ ಗುಡ್ಡ ಕುಸಿತ
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಕೃತಿಯ ವಿಕೋಪಕ್ಕೆ ಮುಗ್ಧ ಪ್ರಾಣಿಗಳು ಹೀಗೆ ನೀರಿನಲ್ಲಿ ಕೊಚ್ಚಿಕೊಂಡು ಹೋದ ಘಟನೆ ಮನಕಲಕುವಂತಿದೆ.