ಮುಂಬೈ: ಪುತ್ರರಿಬ್ಬರ ಮೇಲೆ ಗುಂಡು ಹಾರಿಸಿದ ಮಾಜಿ ಪೋಲೀಸ್- ಓರ್ವ ಮೃತ್ಯು
ಮುಂಬೈ, ಜೂ. 15: ಮುಂಬೈನ ನಿವೃತ್ತ ಪೊಲೀಸರೊಬ್ಬರು ಸೋಮವಾರ ಸಂಜೆ ತನ್ನ ಪುತ್ರರಿಬ್ಬರ ಮೇಲೆ ಗುಂಡು ಹಾರಿಸಿದ್ದು, ಓರ್ವ ಪುತ್ರ ಸಾವನ್ನಪ್ಪಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಿವೃತ್ತ ಪೊಲೀಸ್ರನ್ನು ಬಂಧಿಸಿದ್ದಾರೆ. ಕುಟುಂಬದಲ್ಲಿನ ಕೆಲವು ಆರ್ಥಿಕ ವಿವಾದಗಳ ಕಾರಣ ಈ ಕೃತ್ಯ ಎಸಗಿದ್ದಾರೆ ಎಂದು ರಬಲೆ ಪೊಲೀಸರು ಶಂಕಿಸಿದ್ದಾರೆ.
ಐರೋಲಿ ನಿವಾಸಿ, ಮುಂಬೈನ ಮಾಜಿ ಪೊಲೀಸ್ ಎಎಸ್ಐ ಭಗವಾನ್ ಪಾಟೀಲ್ ತನ್ನ ಇಬ್ಬರು ಮಕ್ಕಳಾದ ವಿಜಯ್ ಪಾಟೀಲ್ ಹಾಗೂ ಸುಜಯ್ಗೆ ಗುಂಡು ಹಾರಿಸಿದ್ದಾರೆ. ಈ ಪೈಕಿ ವಿಜಯ್ ಪಾಟೀಲ್ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ; ತೀರ್ಪು ಮುಂದೂಡಿದ ಕೋರ್ಟ್
''ಭಗವಾನ್ ಪಾಟೀಲ್ ತಮ್ಮ ವಾಸೈನಲ್ಲಿ ವಾಸಿಸುತ್ತಿರುವ ತಮ್ಮ ಮಗ ವಿಜಯ್ ಪಾಟೀಲ್ನನ್ನು ತನ್ನ ನಿವಾಸಕ್ಕೆ ಕರೆದಿದ್ದಾರೆ. ಮಗ ಬರುತ್ತಿದ್ದಂತೆ ಇದ್ದಕ್ಕಿಂದತೆ ತನ್ನ ಗನ್ ತೆಗೆದ ಮಾಜಿ ಪೊಲೀಸ್ ಭಗವಾನ್ ಪಾಟೀಲ್, 3 ಬಾರಿ ಪುತ್ರ ವಿಜಯ್ ಪಾಟೀಲ್ನತ್ತ ಗುಂಡು ಹಾರಿಸಿದ್ದಾರೆ. ಈ ಪೈಕಿ ವಿಜಯ್ಗೆ 2 ಗುಂಡುಗಳು ತಗುಲಿದ್ದು ಮೂರನೇ ಗುಂಡು ಇದನ್ನು ತಡೆಯಲು ಮಧ್ಯಪ್ರವೇಶಿಸಿದ ಇನ್ನೋರ್ವ ಪುತ್ರ ಸುಜಯ್ಗೆ ತಗುಲಿದೆ,'' ಎಂದು ಪೊಲೀಸರು ತಿಳಿಸಿದ್ದಾರೆ.
''ವಿಜಯ್ ಹೊಟ್ಟೆ ಮತ್ತು ಭುಜಕ್ಕೆ ಪೆಟ್ಟಾಗಿತ್ತು. ಸುಜಯ್ಗೆ ಸೊಂಟಕ್ಕೆ ಗುಂಡು ಬಿದ್ದು ಸಣ್ಣಪುಟ್ಟ ಗಾಯವಾಗಿದೆ. ವಿಜಯ್ನನ್ನು ಇಂದ್ರಾವತಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆಯ ಸಮಯದಲ್ಲಿ ಮೃತಪಟ್ಟಿದ್ದಾರೆ. ಪಾಟೀಲ್ ತನ್ನ ಹೆಂಡತಿಯ ಮೇಲೆ ಹಲ್ಲೆ ನಡೆಸಿದ್ದಾನೆ,'' ಎಂದು ರಬಲೆ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
''ಪಾಟೀಲ್ ಈ ಹಿಂದೆ ವ್ಯಕ್ತಿಯೊಬ್ಬನಿಗೆ ಗನ್ ತೋರಿಸಿ ಬೆದರಿಸಿದ್ದು ಈ ಕಾರಣ ಗನ್ ಅನ್ನು ವಶಕ್ಕೆ ಪಡೆಯಲಾಗಿತ್ತು. ಇತ್ತೀಚೆಗೆ ಅದನ್ನು ವಾಪಾಸ್ ನೀಡಲಾಗಿತ್ತು,'' ಎಂದು ಕೂಡಾ ಪೊಲೀಸರು ಮಾಹಿತಿ ನೀಡಿದ್ದಾರೆ.
(ಒನ್ಇಂಡಿಯಾ ಸುದ್ದಿ)