ಲೋಕಸಭೆ ಚುನಾವಣೆಗಾಗಿ ಘೋಷಣೆ: 'ಮಂದಿರ ಮೊದಲು, ಸರ್ಕಾರ ನಂತರ'
ಮುಂಬೈ, ನವೆಂಬರ್ 19: ಮುಂಬರುವ ಲೋಕಸಭೆ ಚುನಾವಣೆ 2019ಗಾಗಿ ಶಿವಸೇನಾ ಮುಖ್ಯಸ್ಥ ಉದ್ಧವ್ಠಾಕ್ರೆ ಅವರು ಲೋಕಸಭೆ ಚುನಾವಣೆ 2019ಗಾಗಿ ತಮ್ಮ ಪಕ್ಷದ ಘೋಷ ವಾಕ್ಯವನ್ನು ಪ್ರಕಟಿಸಿದ್ದಾರೆ. ರಾಮಮಂದಿರ ನಿರ್ಮಾಣ ಮೊದಲು, ಸರ್ಕಾರ ರಚನೆ ಏನಿದ್ದರೂ ಆಮೇಲೆ ಎಂದು ಘೋಷಿಸಿದ್ದಾರೆ.
"ಮೊದಲು ಮಂದಿರ, ನಂತರ ಸರ್ಕಾರ. ಇದು ಎಲ್ಲ ಹಿಂದುಗಳ ಬೇಡಿಕೆ. ಹಾಗಾಗಿ ಆದಷ್ಟು ಬೇಗ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭಿಸಬೇಕು" ಎಂದರು.
ನವೆಂಬರ್ 24, 25ರಂದು ಉದ್ಧವ್ ಠಾಕ್ರೆ ಅವರು ಅಯೊಧ್ಯೆಗೆ ಭೇಟಿ ನೀಡಲಿದ್ದು, ಈ ಕುರಿತು ಚರ್ಚೆ ನಡೆಸಲು ಪಕ್ಷದ ಹಿರಿಯ ಮುಖಂಡರನ್ನು ಭೇಟಿಯಾಗಲಿದ್ದಾರೆ. ಮಹಾರಾಷ್ಟ್ರದಿಂದ ಹೊರಗಿರುವ ಶಿವಸೇನಾ ನಾಯಕರೂ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಶಿವಸೇನಾ ಕಾರ್ಯಕರ್ತರು ನವೆಂಬರ್ 24ರಂದು ದೇಶಾದ್ಯಂತ ಮಹಾ ಆರತಿ ಪೂಜೆ ಕೈಗೊಳ್ಳಲಿದ್ದಾರೆ. ಅಯೋಧ್ಯೆಯಲ್ಲಿ ಸರಯೂ ಪೂಜೆ ನಡೆಯಲಿದೆ.
ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಾಗಿದ್ದರೂ ರಾಮಮಂದಿರ ನಿರ್ಮಾಣ ಮಾಡದಿರುವುದು ಕೇಸರಿ ಪಕ್ಷದ ವೈಫಲ್ಯವಾಗಿದೆ. ಪ್ರತಿಯೊಬ್ಬ ಹಿಂದುವಿನ ಕೂಗು ಇದಾಗಿದ್ದು, ಮೊದಲು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ನಂತರ ಸರ್ಕಾರ ರಚನೆಯಾಗಬೇಕು ಎಂದರು.