ನಿರ್ಮಾಣ ಹಂತದಲ್ಲಿದ್ದ ಐಎನ್ಎಸ್ ಯುದ್ಧ ನೌಕೆಯಲ್ಲಿ ಬೆಂಕಿ, ಒಂದು ಸಾವು
ಮುಂಬೈ, ಜೂನ್ 21: ಮಹಾರಾಷ್ಟ್ರದ ದಕ್ಷಿಣ ಮುಂಬೈನಲ್ಲಿ ನಿರ್ಮಾಣ ಹಂತದಲ್ಲಿರುವ ಐಎನ್ಎಸ್ ವಿಶಾಖಪಟ್ಟಣಂ ಯುದ್ಧ ನೌಕೆಯ ಎರಡು ಮತ್ತು ಮೂರನೇ ಡೆಕ್ನಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು, ಘಟನೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಇನ್ನೊಬ್ಬ ವ್ಯಕ್ತಿಗೆ ಗಾಯಗಳಾಗಿವೆ,
ಕೂಡಲೇ ಎಂಟು ಅಗ್ನಿಶಾಮಕ ದಳದ ವಾಹನಗಳು, ತ್ವರಿತ ಪ್ರತಿಕ್ರಿಯಾ ವಾಹನಗಳು ಮತ್ತು ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.
ಆದರೆ, ಹಡಗಿನ ಒಳಭಾಗದಲ್ಲಿ ಸಿಲುಕಿಕೊಂಡಿದ್ದ ಗುತ್ತಿಗೆ ಕೆಲಸಗಾರರೊಬ್ಬರು ಬೆಂಕಿಯ ಜ್ವಾಲೆಗೆ ಆಹುತಿಯಾಗಿದ್ದಾರೆ. ಸುಟ್ಟಗಾಯಗಳಿಂದ ಮತ್ತು ಉಸಿರಾಟದ ತೊಂದರೆಯಿಂದ ಅವರು ಮೃತಪಟ್ಟಿದ್ದಾರೆ. ಮೃತರನ್ನು ಬ್ರಜೇಶ್ ಕುಮಾರ್ (23) ಎಂದು ಗುರುತಿಸಲಾಗಿದೆ.
ಶಾಲೆಯಲ್ಲಿ ಅಗ್ನಿ ಅವಘಡ: 2 ವಿದ್ಯಾರ್ಥಿಗಳು ಸೇರಿ ಮೂವರ ಸಾವು
ಶುಕ್ರವಾರ ಸಂಜೆ 5.44ರ ಸಮಯಕ್ಕೆ ಮಜಗಾವ್ ಡಾಕ್ನ ಮುಖ್ಯ ದ್ವಾರದ ಬಳಿ ಬೆಂಕಿ ಕಾಣಿಸಿಕೊಂಡಿತು. ಬೆಂಕಿ ಹೊತ್ತಿಕೊಳ್ಳಲು ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆಗೆ ಸೂಚಿಸಲಾಗಿದೆ.
'ನಿರ್ಮಾಣಹಂತದಲ್ಲಿದ್ದ ಯುದ್ಧ ನೌಕೆ 'ವಿಶಾಖಪಟ್ಟಣಂ'ನಲ್ಲಿ ಸಂಜೆ 5.44ರ ವೇಳೆಗೆ ಬೆಂಕಿ ಕಾಣಿಸಿಕೊಂಡಿದೆ. ಜ್ವಾಲೆಗಳು ಹಡಗಿನ ಎರಡನೆಯ ಡೆಕ್ನಲ್ಲಿ ಕಾಣಿಸಿಕೊಂಡಿತು. ಬಳಿಕ ಅದು ಮೂರನೇ ಡೆಕ್ಗೂ ವ್ಯಾಪಿಸಿತು. ಅಗ್ನಿಶಾಮಕ ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದೆ. ಹಡಗಿನ ತುಂಬಾ ಹೊಗೆ ಆವರಿಸಿದೆ. ಒಬ್ಬ ವ್ಯಕ್ತಿ ಒಳಗೆ ಸಿಲುಕಿರಬಹುದು ಎಂಬ ಶಂಕೆ ಇದೆ' ಎಂದು ಅಗ್ನಿಶಾಮಕ ದಳದ ಮುಖ್ಯಸ್ಥ ಪಿಎಸ್ ರಹಂಗದಾಳೆ ತಿಳಿಸಿದ್ದಾರೆ.