ಮುರುಟಿಹೋದ ಖುಷಬೂ, ದುರಂತ ಸಂಭವಿಸಿದ್ದು ಹೇಗೆ?
Recommended Video
ಮುಂಬೈ, ಡಿಸೆಂಬರ್ 29 : ಹೊಸವರ್ಷದ ಸಂಭ್ರಮಾಚರಣೆಯನ್ನು ಸುಟ್ಟು ಭಸ್ಮ ಮಾಡುವಂಥ ಘಟನೆ ಮುಂಬೈನ ಲೋವರ್ ಪಾರೆಲ್ ಪ್ರದೇಶದಲ್ಲಿರುವ ಕಮಲಾ ಮಿಲ್ಸ್ ಕಾಂಪೌಂಡ್ ನಲ್ಲಿರುವ 1 Above ಹೋಟೆಲಿನಲ್ಲಿ ನಡೆದಿದ್ದು, ಈ ಘಟನೆಯಲ್ಲಿ ಸತ್ತವರ ಸಂಖ್ಯೆ 14ಕ್ಕೇರಿದೆ.
ಬೆಚ್ಚಿಬೀಳಿಸುವಂಥ ಈ ಘಟನೆಯ ಹಿಂದೆ ಉದ್ಯಮಿಗಳು ಮತ್ತು ಮುಂಬೈ ಮಹಾನಗರ ಪಾಲಿಕೆಯ ಅಧಿಕಾರಿಗಳ ಅಪವಿತ್ರ ಮೈತ್ರಿಯೇ ಕಾರಣವೆಂದು ಹೇಳಲಾಗುತ್ತಿದೆ. ಲಂಚ ಪಡೆದು ಲೈಸೆನ್ಸ್ ನೀಡಿದ್ದಕ್ಕೆ 14 ಅಮಾಯಕ ಜೀವಗಳನ್ನು ಕಳೆದುಕೊಳ್ಳುವಂತಾಗಿದೆ.
ಮುಂಬೈನಲ್ಲಿ ಭಾರೀ ಅಗ್ನಿ ದುರಂತ, 10ಕ್ಕೂ ಹೆಚ್ಚು ಸಾವು
ಈಗಿರುವ ಹೋಟೆಲ್ ಜಾಗದಲ್ಲಿ ಕೆಲವೇ ತಿಂಗಳ ಹಿಂದೆ ಇದ್ದದ್ದು ಕೇವಲ ಒಂದು ಶೆಡ್ ಮಾತ್ರ. ಅಕ್ರಮವೆಸಗಿ ಅದನ್ನು ನಿರ್ಮಿಸಿದ್ದರಿಂದ ಅದನ್ನು ಅಧಿಕಾರಿಗಳು ಧ್ವಂಸ ಮಾಡಿದ್ದರು. ಆದರೆ, ಅದೇ ಜಾಗದಲ್ಲಿ ಮೂರಂತಸ್ತಿನ ಕಟ್ಟಡವನ್ನು ಉದ್ಯಮಿ ಮತ್ತೆ ಕಟ್ಟಿದ್ದ.
ಹೋಟೆಲಿನ ಮೂರನೇ ಮಹಡಿಯಲ್ಲಿ ಹುಟ್ಟುಹಬ್ಬದ ಪಾರ್ಟಿ ನಡೆಯುತ್ತಿದ್ದ ಸ್ಥಳದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಅಲ್ಲಿ ಬೆಂಕಿ ಬೇಗ ಆವರಿಸಿಕೊಳ್ಳುವಂಥ ಟಾರ್ಪಾಲಿನ್, ಪ್ಲಾಸ್ಟಿಕ್ ವಸ್ತುಗಳೇ ಇದ್ದಿದ್ದರಿಂದ ಅಗ್ನಿಶಾಮಕ ದಳದವರಿಗೂ ಬೇಗನೆ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ.
ಬರ್ತಡೇ ಆಚರಿಸುತ್ತಿದ್ದ ಖುಷಬೂ ಸಾವು
ಸತ್ತವರಲ್ಲಿ 28 ವರ್ಷದ ಹುಟ್ಟುಹಬ್ಬ ಆಚರಿಸುತ್ತಿದ್ದ ಖುಷಬೂ ಎಂಬ ಮಹಿಳೆ ಸೇರಿದಂತೆ ಹೆಚ್ಚಿನವರು ಮಹಿಳೆಯರೇ ಆಗಿದ್ದಾರೆ. ಟಾಯ್ಲೆಟ್ಟಿನಲ್ಲಿ ಸೇರಿಕೊಂಡಿದ್ದ ಮಹಿಳೆಯರು ಉಸಿರುಗಟ್ಟಿ ಸತ್ತುಹೋಗಿದ್ದಾರೆ. ಸರಿಯಾದ ವೆಂಟಿಲೇಶನ್ ಇರಲಿಲ್ಲ ಮತ್ತು ತುರ್ತು ನಿರ್ಗಮನ ದಾರಿಯೂ ಇರಲಿಲ್ಲದಿದ್ದರಿಂದ ಅನಾಹುತ ಜರುಗಿಹೋಗಿದೆ.
ಎಷ್ಟು ವೇಗವಾಗಿ ಆವರಿಸಿಕೊಂಡಿದೆಯೆಂದರೆ
ರಾತ್ರಿ 12.30ರ ನಂತರ ಬೆಂಕಿ ಅನಾಹುತ ಸಂಭವಿಸಿದೆ. 1 ಅಬಾವ್ ಹೋಟೆಲಿನಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ಎಷ್ಟು ವೇಗವಾಗಿ ಆವರಿಸಿಕೊಂಡಿದೆಯೆಂದರೆ, ಎರಡರಲ್ಲಿ ಒಂದು ಕೆಳಹೋಗುವ ಮೆಟ್ಟಿಲು ಕ್ಷಣಾರ್ಧದಲ್ಲಿ ಸುಟ್ಟು ಭಸ್ಮವಾಗಿದೆ. ಹೀಗಾಗಿ ಮಹಿಳೆಯರು ಕೆಳಗೆ ಬರಲಾಗದೆ ಅಲ್ಲಿಯೇ ಸಿಲುಕಿಕೊಂಡಿದ್ದಾರೆ.
ಲಂಚ ನೀಡಿ ಲೈಸೆನ್ಸ್ ಪಡೆದಿದ್ದ
ಹೋಟೆಲಿನ ಮಾಲಿಕನ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದ್ದು, ಹೋಟೆಲು ನಿರ್ಮಿಸುವಾಗ ಕಡ್ಡಾಯವಾಗಿ ಪಾಲಿಸಬೇಕಾಗಿದ್ದ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಮಾಲಿಕ ಪಾಲಿಸಿರಲಿಲ್ಲ ಎಂದು ದೂರಲಾಗಿದೆ. ಬಿಎಂಸಿ ಅಧಿಕಾರಿಗಳಿ ಲಂಚ ನೀಡಿ ಲೈಸೆನ್ಸ್ ಪಡೆದಿದ್ದ ಎಂದೂ ದೂರಲಾಗಿದೆ.
ಮೀಡಿಯಾ ಕಂಪನಿಗಳಿದ್ದ ಕಮಲಾ ಮಿಲ್ಸ್
ಕಮಲಾ ಮಿಲ್ಸ್ ಕಾಂಪೌಂಡ್ ನಲ್ಲಿ ಜೂಮ್ ಟಿವಿ ಸೇರಿದಂತೆ ಹಲವಾರು ಮೀಡಿಯಾ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದವು. ಆದರೆ, ಬೆಂಕಿ ಆ ಕಟ್ಟಡಗಳಿಗೂ ಆವರಿಸುವ ಸಾಧ್ಯತೆ ಇದ್ದುದ್ದರಿಂದ, ಮುಂಜಾಗ್ರತಾ ಕ್ರಮವಾಗಿ ಎಲ್ಲ ಸಂಸ್ಥೆಗಳು ತಕ್ಷಣ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದವು.
ಮೇಯರಿಂದ ತನಿಖೆಗೆ ಆದೇಶ
ಈ ಘಟನೆ ಕುರಿತಂತೆ ತನಿಖೆಗೆ ಆದೇಶಿಸಲಾಗಿದೆ ಎಂದು ಬಿಎಂಸಿ ಮೇಯರ್ ವಿಶ್ವನಾಥ್ ಮಹಾದೇಶ್ವರ್ ಹೇಳಿದ್ದಾರೆ. ಈ ಹತ್ಯೆಗೆ ಬಿಎಂಸಿ ಅಧಿಕಾರಿಗಳೇ ಕಾರಣ, ಎರಡು ವಾರಗಳಲ್ಲಿ ನಡೆದಿರುವ ಎರಡನೇ ದುರಂತವಿದು ಎಂದು ಬಿಜೆಪಿಯ ಮುಂಬೈ ಸಂಸದೆ ಕೀರ್ತಿ ಸೌಮ್ಯ ಅವರು ಆರೋಪಿಸಿದ್ದಾರೆ. ಬಿಜೆಪಿ ಮತ್ತು ಶಿವಸೇನೆ ನಡುವೆ ವಾಗ್ಯುದ್ಧಗಳು ಶುರುವಾಗಿವೆ.
ಶೋಕದಲ್ಲಿ ಪ್ರಧಾನಿ, ರಾಷ್ಟ್ರಪತಿ ಭಾಗಿ
ಈ ದುರಂತದಿಂದ ತೀವ್ರ ನೋವಾಗಿದೆ. ಬಂಧುಗಳನ್ನು ಕಳೆದುಕೊಂಡು ಶೋಕದಲ್ಲಿರುವ ಕುಟುಂಬ ಈ ನೋವನ್ನು ಭರಿಸಲಿ. ಗಾಯಗೊಂಡವರು ಬೇಗನೆ ಗುಣಮುಖರಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ನುಡಿದಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕೂಡ, ತಾವು ಕೂಡ ಶೋಕತಪ್ತ ಕುಟುಂಬಗಳ ಶೋಕದಲ್ಲಿ ಭಾಗಿ ಎಂದು ಹೇಳಿದ್ದಾರೆ.