ತಂದೆ ಕಣ್ಣೆದುರಲ್ಲೇ ಕೊರೊನಾಗೆ ಬಲಿ, ತಾಯಿ ಕ್ವಾರಂಟೈನ್ ನಲ್ಲಿ: 11 ವರ್ಷದ ಬಾಲಕನ ಕರುಣಾಜನಕ ಕಥೆ
ಮುಂಬೈ, ಮೇ 17: ಮಾರಣಾಂತಿಕ ಕೊರೊನಾ ವೈರಸ್ ವಿಶ್ವದೆಲ್ಲಡೆ ಮಾಡಿರುವ ಜೀವ ಹಾನಿ, ಮೂರು ಲಕ್ಷವನ್ನು ದಾಟಿಯಾಗಿದೆ. ಭಾರತದಲ್ಲಿ ಇದುವರೆಗೆ 2,872 ಜನ ಸಾವನ್ನಪ್ಪಿದ್ದಾರೆ.
ವೈರಸ್ ಹಾನಿಯಿಂದ ಹೆಚ್ಚು ಪರಿಣಾಮ ಬೀರಿದ ರಾಜ್ಯವೆಂದರೆ ಅದು ಮಹಾರಾಷ್ಟ್ರ. ಅಲ್ಲಿ 1,135 ಸಾವನ್ನಪ್ಪಿದ್ದು, ಸೋಂಕಿತರ ಸಂಖ್ಯೆ 30,706ಕ್ಕೆ ಏರಿದೆ. ಒಂದೊಂದು ಮನೆಯಲ್ಲಿ ಒಂದೊಂದು ಕರಳು ಹಿಂಡುವ ಕಥೆ.
ವಾಣಿಜ್ಯ ನಗರಿ ಮುಂಬೈನಲ್ಲಿ ಕೊರೊನಾ ಮರಣ ಮೃದಂಗ: ಠಾಕ್ರೆ ಸರಕಾರ ಎಡವಿದ್ದು ಇಲ್ಲೇ!
ಇದೇ ರೀತಿಯ ಮನಕಲಕುವ ಕಥೆ ನಗರದ ಗೋರೆಗಾಂವ್ ಪೂರ್ವದ ಹನ್ನೊಂದು ವರ್ಷದ ಹರ್ಷಿಲ್ ಸಿಂಗ್ ಎನ್ನುವ ಬಾಲಕನದ್ದು. ಈ ಹುಡುಗನ ತಂದೆ ಸುರೇಂದ್ರ, ಏಪ್ರಿಲ್ 13ರಂದು ಕೊರೊನಾ ದಿಂದ ಮೃತರಾದರು.
ಲಾಕ್ ಡೌನ್ ಮುಗಿದ ನಂತರ 'ಸಾರ್ವಜನಿಕರ ಆಯ್ಕೆ' ಯಾವುದು: ಸಮೀಕ್ಷೆ
ಪತಿಗೆ ಕೊರೊನಾ ಸೋಂಕು ತಗಲಿದೆ ಎಂದು ತಿಳಿದಾಗಲೇ ಮನನೊಂದಿದ್ದ ಪತ್ನಿ, ಪತಿಯ ಸಾವಿನ ನಂತರ ಇನ್ನಷ್ಟು ಜರ್ಝರಿತರಾದರು. ಅಲ್ಲಿಗೆ ಮುಗಿಯಲಿಲ್ಲ, ಮನೆಯಲ್ಲಿ ಒಬ್ಬರಿಗೆ ವೈರಸ್ ತಗುಲಿದರೆ, ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗುವುದರಿಂದ, ಬಾಲಕ ಹರ್ಷಿತ್ ಮತ್ತು ಆತನ ತಾಯಿಯನ್ನು ಪರೀಕ್ಷೆಗೆ ಒಳಪಡಿಸಲಾಯಿತು.
ಕೋವಿಡ್ ಪರೀಕ್ಷೆಯಲ್ಲಿ ತಾಯಿಯದ್ದು ಪಾಸಿಟೀವ್
ದುರಾದೃಷ್ಟದ ಪರಮಾವಧಿ ಎನ್ನುವಂತೆ ಕೋವಿಡ್ ಪರೀಕ್ಷೆಯಲ್ಲಿ ತಾಯಿಯದ್ದು ಪಾಸಿಟೀವ್ ಬಂದು, ಮಗ ಹರ್ಷಿತ್ ನದ್ದು ನೆಗೆಟೀವ್ ಬಂತು. ಬೇರೆ ದಾರಿಯಿಲ್ಲದೇ, ತಾಯಿಯನ್ನು ಕ್ವಾರಂಟೈನ್ ಗೆ ಹಾಕಲಾಯಿತು. ಮಗನನ್ನು ವಾಪಸ್ ಅಪಾರ್ಟ್ಮೆಂಟ್ ಗೆ ಕಳುಹಿಸಲಾಯಿತು. ಅಪ್ಪನ ಸಾವು, ತಾಯಿ ಕ್ವಾರಂಟೈನ್ ನಲ್ಲಿ, ಹನ್ನೊಂದು ವರ್ಷದ ಬಾಲಕ, ಕೊನೆಯ ಪಕ್ಷ ಊಟಕ್ಕಾದರೂ ಏನು ಮಾಡಿಯಾನು?
ಪಂಡಾರಂ ಎನ್ನುವ ಕುಟುಂಬ
ಅಪಾರ್ಟ್ಮೆಂಟ್ ನ ಸುರೇಂದ್ರ ಕೊರೊನಾದಿಂದ ಮೃತರಾದ ಮೇಲೆ, ಅವರ ಕುಟುಂಬವನ್ನು ಎಲ್ಲರೂ ಸೋಂಕಿನ ಭಯದಿಂದ ದೂರಮಾಡಿದರು. ಆಗ, ಮಾನವೀಯತೆ ಸತ್ತಿಲ್ಲ ಎನ್ನುವ ಹಾಗೇ, ಅದೇ ಅಪಾರ್ಟ್ಮೆಂಟಿನ ಪಂಡಾರಂ ಎನ್ನುವ ಕುಟುಂಬ, ಬಾಲಕನ ಊಟ ತಿಂಡಿಯ ಜವಾಬ್ದಾರಿಯನ್ನು ವಹಿಸಿಕೊಂಡಿತು. ಸಮಯಕ್ಕೆ ಸರಿಯಾಗಿ ಊಟವನ್ನು ಕೊಡುವುದೇ ಅಲ್ಲದೇ, ಎರಡು ಗಂಟೆಗೊಮ್ಮೆ ಪಂಡಾರಂ ಕುಟುಂಬದವರು ಬಂದು ಬಾಲಕನ್ನು ವಿಚಾರಿಸಿಕೊಂಡು ಹೋಗುತ್ತಿದ್ದರು.
ತಂದೆಯ ಸಾವು ಕಣ್ಣೆರೆದುರಿಗೆ ಬರುತ್ತದೆ
ದಿನದ ಹೊತ್ತಿನಲ್ಲಿ ಹೇಗೂ ಸಮಯ ಕಳೆಯುತ್ತದೆ. ರಾತ್ರಿ ಆದ ಕೂಡಲೇ ಭಯವಾಗುತ್ತದೆ. ತಂದೆಯ ಸಾವು ಕಣ್ಣೆರೆದುರಿಗೆ ಬರುತ್ತದೆ. ತಾಯಿ ಕೂಡಾ ಜೊತೆಗಿಲ್ಲ. ಅಪ್ಪ ಕಡೆಯ ದಿನಗಳಲ್ಲಿ ಅನುಭವಿಸಿದ ಕಷ್ಟಯಾತನೆಯ ಬಗ್ಗೆ ಬಾಲಕ ವಿವರಿಸುವಾಗ ಎಲ್ಲರ ಕಣ್ಣಂಚು ತೇವಗೊಳ್ಳುತ್ತದೆ.
ಕೊರೊನಾ ಅಟ್ಟಹಾಸದ ಮನಕಲಕುವ ಕಥೆ
ಹುಡುಗನಿರುವ ಧೈರ್ಯದ ಬಗ್ಗೆ ಪಂಡಾರಂ ಕುಟುಂಬ ಸಾಮಾಜಿಕ ತಾಣದಲ್ಲಿ ಈ ಕೊರೊನಾ ಅಟ್ಟಹಾಸದ ಮನಕಲಕುವ ಕಥೆಯನ್ನು ಹಾಕಿದ್ದರು. ದೇವರು ದೊಡ್ದವನು ಎನ್ನುವ ಹಾಗೇ, ಮೇ ನಾಲ್ಕಕ್ಕೆ ಹುಡುಗನ ತಾಯಿ ಕ್ವಾರಂಟೈನ್ ಮುಗಿಸಿ, ವಾಪಸ್ ಮನೆಗೆ ಬಂದಿದ್ದಾರೆ. ಆದರೆ, ಕುಟುಂಬವನ್ನು ಮುನ್ನಡೆಸಬೇಕಾದ ತಂದೆ ಇಲ್ಲದಿರುವುದರಿಂದ ಮನೆಯಲ್ಲಿ ನೀರವ ಮೌನ.