ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಫಡ್ನವೀಸ್ ರಥಯಾತ್ರೆ
ಮುಂಬೈ, ಜೂನ್ 23: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ರಥಯಾತ್ರೆ ಮೂಲಕ ಪ್ರಚಾರ ನಡೆಸಲು ಬಿಜೆಪಿ ನಿರ್ಧರಿಸಿದೆ.
ಅಕ್ಟೋಬರ್ನಲ್ಲಿ ನಡೆಯಬಹುದಾದ ಚುನಾವಣೆಗೆ ಆಗಸ್ಟ್ನಿಂದ ಭರ್ಜರಿ ರಥಯಾತ್ರೆಗೆ ರಾಜ್ಯ ಬಿಜೆಪಿ ನಿರ್ಧಾರ ಮಾಡಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲಿ ರಾಜ್ಯದಲ್ಲಿ 288 ವಿಧಾನಸಭಾ ಕ್ಷೇತ್ರಗಳಿಗೆ ರಥಯಾತ್ರೆ ತೆರಳಲಿದೆ.
ಖುದ್ದು ಮುಖ್ಯಮಂತ್ರಿಯೇ ರಥಯಾತ್ರೆ ಜವಾಬ್ದಾರಿವಹಿಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ತಿಳಿಸಿದ್ದಾರೆ.
ಫಿರ್ ಏಕ್ ಬಾರ್ ಶಿವ್ಶಹಿ(ಕೇಸರಿ)ಸರ್ಕಾರ್ ಎನ್ನುವ ಎರಡು ಘೋಷವಾಕ್ಯಗಳೊಂದಿಗೆ ಬಿಜೆಪಿ ಪ್ರಚಾರ ನಡೆಸಲಿದೆ. ಮಹಾರಾಷ್ಟ್ರ ಸರ್ಕಾರದ ಸಾಧನೆ ಮುಂದಿನ ಐದು ವರ್ಷಗಳ ಭರವಸೆಗಳ ಜೊತೆಗೆ ಮೋದಿ ಸರ್ಕಾರದ ಸಾಧನೆಯನ್ನೂ ಕೂಡ ಈ ರಥಯಾತ್ರೆಯಲ್ಲಿ ಜನರಿಗೆ ತಲುಪಿಸಲು ಬಿಜೆಪಿ ನಿರ್ಧರಿಸಿದೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಈಗಾಗಲೇ ಬಜೆಪಿ ಹಾಗೂ ಶಿವಸೇನೆ ಚುನಾವಣಾ ಪೂರ್ವ ಮೈತ್ರಿಗೆ ನಿರ್ಧರಿಸಲಾಗಿದೆ. ಹೀಗಾಗಿ ಫಡ್ನವೀಸ್ ಅವರು ಬಿಜೆಪಿ ಸ್ಪರ್ಧಿಸುವ ಕ್ಷೇತ್ರಗಳ ಜೊತೆಗೆ ಶಿವಸೇನೆಯ ಅಭ್ಯರ್ಥಿ ಕ್ಷೇತ್ರಗಳಲ್ಲಿಯೂ ಪ್ರಚಾರ ನಡೆಸಲು ನಿರ್ಧರಿಸಿದ್ದಾರೆ.
ಆದರೆ ಬಿಜೆಪಿ ರಥಯಾತ್ರೆಗೆ ಶಿವಸೇನೆ ಹೇಗೆ ಸ್ಪಂದಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. ಏಕೆಂದರೆ ಈ ಬಾರಿ ಶಿವಸೇನೆ ಮುಖ್ಯಮತ್ರಿ ಗಾದಿಯ ಮೇಲೆ ಕಣ್ಣು ಹಾಕಿದೆ.