'ನಾಯಿ ಕೂಡ ಮೂಸುವುದಿಲ್ಲ...'- ಓವೈಸಿ ವಿರುದ್ಧ ಫಡ್ನವಿಸ್ ವಾಗ್ದಾಳಿ
ಮುಂಬೈ ಮೇ 16: ಮಹಾರಾಷ್ಟ್ರದ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವಿಸ್ ಅವರು ನಿನ್ನೆ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವನ್ನು ಬಾಬರಿ ಮಾದರಿಯ ರಚನೆಗೆ ಹೋಲಿಸಿದ್ದಾರೆ ಮತ್ತು ಅವರು ಅದನ್ನು ಉರುಳಿಸುವವರೆಗೂ ವಿರಮಿಸುವುದಿಲ್ಲ ಎಂದು ಹೇಳಿದ್ದಾರೆ.
ಮುಂಬೈನಲ್ಲಿ ನಡೆದ ಪಕ್ಷದ ಮಹಾಸಂಕಲ್ಪ ಸಭೆಯಲ್ಲಿ ಇತರ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕರ್ತರೊಂದಿಗೆ ಹನುಮಾನ್ ಚಾಲೀಸಾವನ್ನು ಪಠಿಸಿ ಬಳಿಕ ಮಾತನಾಡಿದ ಫಡ್ನವಿಸ್, "ನಿಮ್ಮ ಅಧಿಕಾರದ ಬಾಬ್ರಿಯಂತಹ ರಚನೆಯನ್ನು ನಾನು ಉರುಳಿಸುವವರೆಗೂ ವಿಶ್ರಮಿಸುವುದಿಲ್ಲ" ಎಂದು ಹೇಳಿದ್ದಾರೆ.
ಹನುಮಾನ್ ಚಾಲೀಸಾ ವಿವಾದ; ಎಂಪಿ ನವನೀತ್ ಕೌರ್ ರಾಣಾ ಬಂಧನ
"ನಾವು ಕೇವಲ ಹನುಮಾನ್ ಚಾಲೀಸಾವನ್ನು ಜಪಿಸಿದ್ದೇವೆ. ಬಾಳಾಸಾಹೇಬ್ ಠಾಕ್ರೆ ಅವರು ತಮ್ಮ ಮಗನ ಆಳ್ವಿಕೆಯಲ್ಲಿ ಹನುಮಾನ್ ಚಾಲೀಸಾವನ್ನು ಓದುವುದು ದೇಶದ್ರೋಹ ಮತ್ತು ಔರಂಗಜೇಬನ ಸಮಾಧಿಗೆ ಭೇಟಿ ನೀಡುವುದು ರಾಜ್ಯ ಶಿಷ್ಟಾಚಾರ ಎಂದು ಭಾವಿಸಿದ್ದಾರಾ?" ಎಂದು ಫಡ್ನವಿಸ್ ಪ್ರಶ್ನೆ ಮಾಡಿದ್ದಾರೆ.
"ಅವರು (ಶಿವಸೇನೆ) ನಿನ್ನೆ ರ್ಯಾಲಿ ನಡೆಸಿ ಅದನ್ನು ಅವರು ಮಾಸ್ಟರ್ ಸಭೆ ಎಂದು ಕರೆದರು. ಆದರೆ ನಾವು ಅದನ್ನು ಕೇಳುವಾಗ ನಮಗೆ ತಮಾಷೆಯ ಸಭೆಯಂತಿತ್ತು. ನಿನ್ನೆ ನಡೆದಿದ್ದು ಕೌರವ ಸಭೆ ಮತ್ತು ಇಂದು ಇದು ಪಾಂಡವರ ಸಭೆ" ಎಂದು ಹೇಳಿದರು. ಫಡ್ನವೀಸ್, ಉದ್ಧವ್ ಠಾಕ್ರೆ ಅವರ ರ್ಯಾಲಿಯನ್ನು 'ನಗಪಾಟಲೆಯ ಪ್ರದರ್ಶನ' ಎಂದು ಬಣ್ಣಿಸಿದರು.
ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ಮೌಖಿಕ ದಾಳಿ ನಡೆಸಿದ ಅವರು, "ಅಸಾದುದ್ದೀನ್ ಓವೈಸಿ ಹೋಗಿ ಔರಂಗಜೇಬ್ ಅವರ ಸಮಾಧಿಯ ಮೇಲೆ ಗೌರವ ಸಲ್ಲಿಸುತ್ತಾರೆ ಮತ್ತು ನೀವು ಅದನ್ನು ನೋಡುತ್ತಿರುತ್ತೀರಿ, ನೀವು ಅದರ ಬಗ್ಗೆ ನಾಚಿಕೆಪಡಬೇಕು. ಓವೈಸಿ ನನ್ನ ಮಾತು ಕೇಳು, ಔರಂಗಜೇಬನ ಗುರುತನ್ನು ನಾಯಿ ಕೂಡ ಮೂಸುವುದಿಲ್ಲ. ಹಿಂದೂಸ್ಥಾನದಲ್ಲಿ ಕೇಸರಿ ಮಾತ್ರ ಆಳ್ವಿಕೆ ನಡೆಸಲಿದೆ' ಎಂದು ಟೀಕಿಸಿದ್ದಾರೆ.
ಹನುಮಾನ್ ಚಾಲೀಸಾ ಮತ್ತು ಆಜಾನ್ ವಿವಾದವು ರಾಜ್ಯದಲ್ಲಿ ರಾಜಕೀಯ ವಾತಾವರಣವನ್ನು ಬಿಸಿ ಮಾಡಿದೆ.
ಇತ್ತೀಚೆಗೆ, ನವನೀತ್ ರಾಣಾ ಮತ್ತು ರವಿ ರಾಣಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದರು ಮತ್ತು ಬಾಂದ್ರಾದಲ್ಲಿರುವ ಉದ್ಧವ್ ಠಾಕ್ರೆ ಅವರ ಮನೆಯ ಹೊರಗೆ ಹನುಮಾನ್ ಚಾಲೀಸಾವನ್ನು ಪಠಿಸುವುದಾಗಿ ಘೋಷಿಸಿದ ನಂತರ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124A (ದೇಶದ್ರೋಹ) ಮತ್ತು 153A (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿಯಲ್ಲಿ ಆರೋಪ ಹೊರಿಸಲಾಯಿತು. ಹನುಮಾನ್ ಚಾಲೀಸಾ ಗಲಾಟೆ ನಂತರ ಬಿಜೆಪಿ ರಾಣಾ ಬೆಂಬಲಕ್ಕೆ ನಿಂತಿದೆ.
ಏಪ್ರಿಲ್ 12 ರಂದು ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರು ಮೇ 3 ರೊಳಗೆ ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಗಡುವು ನೀಡಿದಾಗ ಈ ಧ್ವನಿವರ್ಧಕಗಳ ಗದ್ದಲ ಪ್ರಾರಂಭವಾಯಿತ. ಇದು ವಿಫಲವಾದರೆ, ಎಂಎನ್ಎಸ್ ಕಾರ್ಯಕರ್ತರು ಧ್ವನಿವರ್ಧಕಗಳಲ್ಲಿ ಹನುಮಾನ್ ಚಾಲೀಸಾ ನುಡಿಸುತ್ತಾರೆ ಎಂದು ಅವರು ಎಚ್ಚರಿಸಿದ್ದಾರೆ.