'ದೀಪ ಹಚ್ಚಿ ಬೀದಿಗೆ ಬನ್ನಿ': ಮಹಾರಾಷ್ಟ್ರ ಮಾಜಿ ಸಿಎಂ ಎಡವಟ್ಟು
ಮುಂಬೈ, ಏಪ್ರಿಲ್ 5: ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಈ ಸಂದರ್ಭದಲ್ಲಿ ದೇಶದ ಜನತೆ ಒಗ್ಗಟ್ಟು ಪ್ರದರ್ಶಿಸಬೇಕು, ಎಲ್ಲರೂ ಒಟ್ಟಾಗಿ ಹೋರಾಡಬೇಕು ಎಂದು ಕರೆ ನೀಡಿದ್ದಾರೆ. ಹೀಗಾಗಿ, ಭಾನುವಾರ (ಏಪ್ರಿಲ್ 5) ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಮನೆಯಲ್ಲಿ ಕರೆಂಟ್ ಆಫ್ ಮಾಡಿ, ದೀಪ, ಮೊಂಬತ್ತಿ, ಮೊಬೈಲ್ ಫ್ಲಾಶ್, ಟಾರ್ಚ್ ಆನ್ ಮಾಡಿ ಎಂದು ವಿನಂತಿಸಿದ್ದಾರೆ.
ಪ್ರಧಾನಿ ಮೋದಿ ಕರೆ ನೀಡಿರುವ ಹಿನ್ನೆಲೆ ದೇಶಾದ್ಯಂತ ಭಾನುವಾರ ರಾತ್ರಿ 9 ಗಂಟೆಗೆ ದೀಪ ಹಚ್ಚಲು ತಯಾರಿ ನಡೆಸಿದ್ದಾರೆ. ಆದರೆ, ಕೊರೊನಾ ವೈರಸ್ ನಿಯಂತ್ರಿಸಲು ಸಾಮಾಜಿಕ ಅಂತರವೇ ಮದ್ದು ಎಂದು ಹೇಳಿರುವ ಮೋದಿ ಯಾರೂ ಮನೆಯಿಂದ ಹೊರಬರಬಾರದು ಎಂದು ಈ ಹಿಂದೆಯೇ ಎಚ್ಚರಿಕೆ ನೀಡಿದ್ದಾರೆ.
#9pm9minute ದೇಶದ ಜನತೆಗೆ ಮೋದಿಯಿಂದ ಅಲರ್ಟ್
ಆದರೆ, ಮಹಾರಾಷ್ಟ್ರ ಮಾಜಿ ಸಿಎಂ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರು, ಮೋದಿ ಕರೆ ನೀಡಿರುವಂತೆ ರಾತ್ರಿ 9 ಗಂಟೆಗೆ ದೀಪ ಹಚ್ಚಿ ರಸ್ತೆಗೆ ಬನ್ನಿ ಎಂದು ಜನರಿಗೆ ಆಹ್ವಾನ ನೀಡುವ ಮೂಲಕ ಎಡವಟ್ಟು ಮಾಡಿದ್ದಾರೆ.
ಈ ಕುರಿತು ದೇವೇಂದ್ರ ಫಡ್ನವಿಸ್ ಶನಿವಾರ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ಪೋಸ್ಟ್ ಮಾಡಿದ್ದರು. ಆ ವಿಡಿಯೋದಲ್ಲಿ ''ಪ್ರತಿಯೊಬ್ಬ ಪ್ರಜೆಯೂ ದೀಪ ಹಚ್ಚುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ತಮ್ಮ ಮನೆಯ ಬಾಗಿಲು, ಮಹಡಿ ಹಾಗೂ ರಸ್ತೆಗೆ ಬಂದು ದೀಪ ಅಥವಾ ಟಾರ್ಚ್ ಆನ್ ಮಾಡಿ'' ಎಂದು ಹೇಳಿದ್ದರು.
ರಸ್ತೆಗೆ ಬನ್ನಿ ಎಂದು ದೇವೇಂದ್ರ ಫಡ್ನವಿಸ್ ಹೇಳಿದ ಮಾತನ್ನು ಕೇಳಿದ ನೆಟ್ಟಿಗರು ಮಾಜಿ ಮುಖ್ಯಮಂತ್ರಿ ವಿರುದ್ಧ ಟೀಕೆ ಮಾಡಿದರು. ದೇಶದ ಪ್ರಧಾನಿ ಮನೆಯಿಂದ ಯಾರೂ ಹೊರಗೆ ಬರಬೇಡಿ ಎನ್ನುತ್ತಿದ್ದರೆ, ನೀವು ಮನೆಯಿಂದ ಹೊರಗೆ ಬನ್ನಿ ಎನ್ನುತ್ತಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
'ಈ ಹಿಂದೆ ವೈದ್ಯರಿಗೆ, ಕೊರೊನಾ ವಿರುದ್ಧ ಹೋರಾಡುತ್ತಿರುವ ಸಿಬ್ಬಂದಿಗೆ ಧನ್ಯವಾದ ಹೇಳುವ ಸಲುವಾಗಿ ಮನೆಯಲ್ಲೇ ಇದ್ದು ಚಪ್ಪಾಳೆ ಹೊಡಿರಿ, ಗಂಟೆ ಬಾರಿಸಿ ಎಂದು ಮೋದಿ ಹೇಳಿದ್ದರು. ಆದರೆ, ಆ ದಿನ ಬಹುತೇಕರು ಬೀದಿಗೆ ಬಂದು ಜಾತ್ರೆ ಮಾಡಿದ್ದರು. ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದರು, ರಸ್ತೆಗೆ ಬಂದು ಮೆರವಣಿಗೆ ಮಾಡಿದ್ದರು. ಈಗ ಮರ್ಕಜ್ 2.0 ರೀತಿ ಇನ್ನೊಂದು ಘಟನೆ ಆಗಲಿ ಎಂದು ನೋವು ಜನರಿಗೆ ಈ ರೀತಿ ಹೇಳುತ್ತಿದ್ದೀರಾ, ಈ ಕೂಡಲೇ ಕ್ಷಮೆ ಕೇಳಿ ಎಂದು ಮಹಾರಾಷ್ಟ್ರ ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ವ್ಯಂಗ್ಯ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆಗೆ ಗುರಿಯಾದ ಬಳಿಕ ದೇವೇಂದ್ರ ಫಡ್ನವಿಸ್ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಿಂದ ತೆಗೆದು ಹಾಕಿದರು. ಬಳಿಕ, ಮತ್ತೊಂದು ಹೊಸ ವಿಡಿಯೋ ಪೋಸ್ಟ್ ಮಾಡಿದರು. ಆದರೆ ಆ ವಿಡಿಯೋದಲ್ಲಿ ರಸ್ತೆಗೆ ಬನ್ನಿ ಎಂದಿದ್ದನ್ನು ತೆಗೆಯಲಾಗಿದೆ.