Breaking: ಬುಡಕಟ್ಟು ಹಕ್ಕುಗಳ ಹೋರಾಟಗಾರ ಸ್ಟಾನ್ ಸ್ವಾಮಿ ನಿಧನ
ಮುಂಬೈ, ಜು.05: ಭೀಮಾ ಕೋರೆಗಾಂವ್ ಪ್ರಕರಣ ಹಾಗೂ ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಬಂಧಿಸಲ್ಪಟ್ಟ 84 ವರ್ಷದ ಪಾದ್ರಿ, ಬುಡಕಟ್ಟು ಹಕ್ಕುಗಳ ಹೋರಾಟಗಾರ ಸ್ಟಾನ್ ದೀರ್ಘಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಸ್ಟಾನ್ ಸ್ವಾಮಿಯನ್ನು ಬಾಂಬೆ ಹೈಕೋರ್ಟ್ನ ನಿರ್ದೇಶನದ ಮೇರೆಗೆ ಮೇ 30 ರಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ, ಸ್ಟಾನ್ ಸ್ವಾಮಿ ಪರ ವಕೀಲ ಮಿಹಿರ್ ದೇಸಾಯಿ ಸ್ಟಾನ್ ಸ್ವಾಮಿಯ ಜಾಮೀನು ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ಗೆ, ''ಸ್ಟಾನ್ ಸ್ವಾಮಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇದ್ದಾರೆ,'' ಎಂದು ಹೇಳಿದ್ದರು.
ಎಲ್ಗಾರ್ ಪರಿಷತ್ ಪ್ರಕರಣ: ಸ್ಟಾನ್ ಸ್ವಾಮಿ ವೆಂಟಿಲೇಟರ್ ನೆರವಿನಿಂದ ಉಸಿರಾಟ
ಆ ಬಳಿಕ ಸ್ವಾಮಿ ಆರೋಗ್ಯ ಸ್ಥಿತಿಯು ಭಾನುವಾರ ಮುಂಜಾನೆ ಮತ್ತಷ್ಟು ಹದಗೆಟ್ಟಿದ್ದು ಈ ಹಿನ್ನೆಲೆ "ಮಧ್ಯರಾತ್ರಿಯ ನಂತರ ಸ್ಟಾನ್ ಸ್ವಾಮಿಯ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಪ್ರಸ್ತುತ ವೆಂಟಿಲೇಟರ್ನಲ್ಲಿ ಇರಿಸಲಾಗಿದೆ. ಆಮ್ಲಜನಕದ ಮಟ್ಟವು ಏರಿಳಿತಗೊಂಡಿರುವುದರಿಂದ ಅವರಿಗೆ ಉಸಿರಾಡಲು ತೊಂದರೆಯಾಗಿದೆ. ಇದು ಕೋವಿಡ್ ನಂತರದ ದೀರ್ಘಕಾಲದ ಸಮಸ್ಯೆಯಾಗಿರಬಹುದು," ಎಂದು ಮಿಹಿರ್ ದೇಸಾಯಿ ತಿಳಿಸಿದ್ದರು. ಇದೀಗ ಸ್ಟಾನ್ ಸ್ವಾಮಿ ನಿಧನರಾಗಿದ್ದಾರೆ ಎಂದು ವರದಿ ತಿಳಿಸಿದೆ.
ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಎನ್ ಜೆ ಜಮಾದರ್ನ ವಿಭಾಗೀಯ ನ್ಯಾಯಪೀಠವು ವೈದ್ಯಕೀಯ ಆಧಾರದ ಮೇಲೆ ಹಾಗೂ ಸಮಯದ ಕೊರತೆಯಿಂದಾಗಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ವಿಶೇಷ ನ್ಯಾಯಾಲಯದ ಆದೇಶದ ವಿರುದ್ಧ ಸ್ವಾಮಿಯ ಮೇಲ್ಮನವಿಯ ವಿಚಾರಣೆಯನ್ನು ಜುಲೈ 6 ಕ್ಕೆ ವಿಚಾರಣೆ ನಡೆಸಲಿತ್ತು. ಹೈಕೋರ್ಟ್ ಹೋಲಿ ಪ್ಯಾಮಿಲಿ ಆಸ್ಪತ್ರೆಗೆ ಸ್ಟಾನ್ ಸ್ವಾಮಿಯನ್ನು ದಾಖಲಿಸಲು ನಿರ್ದೇಶನ ನೀಡಿತ್ತು.
ಹೀಗೆ ಮುಂದುವರಿದರೆ ನಾನು ಜೈಲಿನಲ್ಲಿಯೇ ಸಾಯಬಹುದು: ಸ್ಟಾನ್ ಸ್ವಾಮಿ
ಹಿಂದಿನ ವಿಚಾರಣೆಗಳಲ್ಲಿ, ಸ್ವಾಮಿಯ ಬಗ್ಗೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರ ವರದಿಗಳನ್ನು ಪರಿಶೀಲಿಸಿದ ನಂತರ "ಗಂಭೀರ ವೈದ್ಯಕೀಯ ಸಮಸ್ಯೆಗಳಿವೆ," ಎಂದು ನ್ಯಾಯಾಲಯವು ಗಮನಿಸಿತ್ತು. ಹೋಲಿ ಫ್ಯಾಮಿಲಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಇಯಾನ್ ಡಿಸೋಜ, ಸ್ವಾಮಿಯ ಆರೋಗ್ಯದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದರು.
ಈಗ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವೈದ್ಯಕೀಯ ನಿರ್ದೇಶಕ ಡಾ. ಇಯಾನ್ ಡಿಸೋಜ, ''ಪಾದ್ರಿ ಸ್ಟಾನ್ ಸ್ವಾಮಿ ನಿಧನರಾದರು ಎಂದು ನಾನು ನಿಮಗೆ ತಿಳಿಸಲು ದುಃಖ ಪಡುತ್ತೇನೆ,'' ಎಂದು ಹೇಳಿದ್ದಾರೆ.
ತಮಿಳುನಾಡಿನ ತಿರುಚಿರಾಪಳ್ಳಿ ಮೂಲದವರಾದ ಸ್ಟಾನ್ ಸ್ವಾಮಿ 1937 ರಲ್ಲಿ ಜನಿಸಿದ್ದಾರೆ. ಬುಡಕಟ್ಟು ಜನರ ಹಕ್ಕುಗಳ ಹೋರಾಟ ಮಾಡಿದ ಸ್ಟಾನ್ ಸ್ವಾಮಿ, ವಿಶೇಷವಾಗಿ ಜಾರ್ಖಂಡ್ನಲ್ಲಿ ಹೆಸರುವಾಸಿಯಾಗಿದ್ದರು. 1975 ರಿಂದ 1986 ರವರೆಗೆ ಬೆಂಗಳೂರಿನ ಭಾರತೀಯ ಸಾಮಾಜಿಕ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಸ್ಟಾನ್ ಸ್ವಾಮಿ ಜಾರ್ಖಂಡ್ಗೆ ಹಿಂದಿರುಗಿದ್ದು, ಮುಖ್ಯವಾಗಿ ಬುಡಕಟ್ಟು ಜನರೊಂದಿಗೆ ಕೆಲಸ ಮಾಡಿದರು. ಈ ಜನಾಂಗದ ಸ್ಥಳಾಂತರದ ವಿರುದ್ದ ಹೋರಾಡಿದರು.
ಎಲ್ಗರ್ ಪರಿಷತ್ ಪ್ರಕರಣದಲ್ಲಿ, ಸ್ವಾಮಿ ಮತ್ತು ಆತನ ಸಹ-ಆರೋಪಿಗಳು ನಿಷೇಧಿತ ಸಿಪಿಐ (ಮಾವೋವಾದಿಗಳು) ಪರವಾಗಿ ಕೆಲಸ ಮಾಡುವ ಮುಂಭಾಗದ ಸಂಸ್ಥೆಗಳ ಸದಸ್ಯರು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಆರೋಪಿಸಿತ್ತು. ಸ್ವಾಮಿಯನ್ನು ಕಳೆದ ವರ್ಷ ಅಕ್ಟೋಬರ್ 8 ರಂದು ರಾಂಚಿಯಿಂದ ಬಂಧಿಸಲಾಗಿತ್ತು. ಮರುದಿನ ಮುಂಬೈಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕರೆತಂದಿತು.
ಪಾರ್ಕಿನ್ಸನ್ ಕಾಯಿಲೆ ಸೇರಿದಂತೆ ಅವರ ವಿವಿಧ ಆರೋಗ್ಯ ಸಮಸ್ಯೆಗಳನ್ನು ಉಲ್ಲೇಖಿಸಿ ಸಾಂಕ್ರಾಮಿಕ ರೋಗದ ಕಾರಣದಿಂದ ಸ್ವಾಮಿ ಮಧ್ಯಂತರ ಜಾಮೀನು ಕೋರಿದ್ದರು. ಈ ಅರ್ಜಿ ವಿಚಾರಣೆ ನಡೆಸುವ ಸಂದರ್ಭ ನ್ಯಾಯಮೂರ್ತಿಗಳಾದ ಎಸ್ ಜೆ ಕತವಲ್ಲ ಹಾಗೂ ಎಸ್ ಪಿ ತವಡೆ ಪೀಠದ ಮುಂದೆ ಸ್ಟಾನ್ ಸ್ವಾಮಿ ತಲೋಜ ಜೈಲಿನಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದಾರೆ.
ಈ ವೇಳೆ ನ್ಯಾಯಾಲಯವು ನಿಮ್ಮನ್ನು ಆಸ್ಪತ್ರೆಗೆ ದಾಖಲಿಸಬೇಕೇ ಎಂದು ಸ್ಟಾನ್ ಸ್ವಾಮಿ ಬಳಿ ಕೇಳಿದಾಗ ಸ್ಟಾನ್ ಸ್ವಾಮಿ, ಆಸ್ಪತ್ರೆಗೆ ದಾಖಲಾಗುವುದಕ್ಕೆ ನಿರಾಕರಿಸಿದ್ದು, "ಪರಿಸ್ಥಿತಿ ಹೀಗೆಯೇ ಮುಂದುವರಿದರೆ ನಾನು ಇಲ್ಲಿಯೇ ಸಾಯಬಹುದು. ಜೆಜೆ ಆಸ್ಪತ್ರೆಗೆ ದಾಖಲಾಗುವ ಬದಲು ನಾನು ಇಲ್ಲಿಯೇ ಇರುತ್ತೇನೆ," ಎಂದು ಹೇಳಿದ್ದಾರೆ. ಹಾಗೆಯೇ ಮಧ್ಯಂತರ ಜಾಮೀನು ನೀಡುವಂತೆ ಬಾಂಬೆ ಹೈಕೋರ್ಟ್ಗೆ ಮನವಿ ಮಾಡಿದ್ದರು.
''ನಾನು ನನ್ನ ಕೊನೆಯ ಸಂದರ್ಭದಲ್ಲಿ ರಾಂಚಿಯಲ್ಲಿರಲು ಬಯಸುತ್ತೇನೆ. ಈಗ ನನ್ನನ್ನು ಆಸ್ಪತ್ರೆಗೆ ದಾಖಲು ಮಾಡುವುದರಿಂದ ಏನೂ ಪ್ರಯೋಜನವಾಗದು ಎಂದು ನನಗನಿಸುತ್ತಿದೆ. ನಿಧಾನವಾಗಿ ನನ್ನ ಸ್ಥಿತಿ ಶೋಚನೀಯವಾಗುತ್ತಿದೆ. ಎಂಟು ತಿಂಗಳ ಹಿಂದೆ ನಾನು ನನ್ನ ಕೆಲವು ಕೆಲಸಗಳನ್ನಾದರೂ ಮಾಡುತ್ತಿದೆ. ಊಟ ಮಾಡುತ್ತಿದ್ದೆ, ಸ್ವಲ್ಪ ಬರೆಯುತ್ತಿದ್ದೆ, ನಡೆದಾಡುತ್ತಿದ್ದೆ, ಯಾರ ಸಹಾಯ ಪಡೆಯದೆಯೇ ಸ್ನಾನ ಮಾಡುತ್ತಿದ್ದೆ, ಆದರೆ ಈಗ ಪರಿಸ್ಥಿತಿ ಬಿಗಾಡಯಿಸಿದೆ. ನನಗೆ ಬರೆಯಲು ನಡೆದಾಡಲು ಕೂಡ ಸಾಧ್ಯವಿಲ್ಲದ ಸ್ಥಿತಿಯಲ್ಲಿ ನಾನು ಇದ್ದೇನೆ. ಆಹಾರವನ್ನೂ ಯಾರಾದರು ತಿನ್ನಿಸಬೇಕಾಗಿದೆ. ಹೀಗಿರುವಾಗ ನಾನು ರಾಂಚಿಯಲ್ಲಿರಲು ಬಯಸುತ್ತೇನೆ. ನನಗೆ ಜಾಮೀನು ನೀಡಿ,'' ಎಂದು ಮನವಿ ಮಾಡಿದ್ದರು.
(ಒನ್ಇಂಡಿಯಾ ಸುದ್ದಿ)