ಎಲ್ಗರ್ ಪರಿಷದ್ ಪ್ರಕರಣ ಆರೋಪಿ ಸ್ಟಾನ್ ಸ್ವಾಮಿಗೆ ಕೊರೊನಾ ದೃಢ
ಮುಂಬೈ, ಮೇ 31: ಎಲ್ಗರ್ ಪರಿಷತ್ ಪ್ರಕರಣದ ಆರೋಪಿ, ಸಾಮಾಜಿಕ ಕಾರ್ಯಕರ್ತ ಸ್ಟಾನ್ ಸ್ವಾಮಿ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
84 ವರ್ಷದ ಸ್ಟಾನ್ ಸ್ವಾಮಿ ಅವರು ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ ಇನ್ನಿತರೆ ಆರೋಗ್ಯ ಸಮಸ್ಯೆಗಳೂ ಇದ್ದವು. ಮೇ 28ರಂದು ತಲೋಜಾ ಜೈಲಿನಿಂದ ಮುಂಬೈನ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲು ಮಾಡಲು ಬಾಂಬೆ ಹೈಕೋರ್ಟ್ ಸೂಚನೆ ನೀಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಎಲ್ಗರ್ ಪರಿಷದ್ ಪ್ರಕರಣ: ಆಸ್ಪತ್ರೆಗೆ ಸ್ಟಾನ್ ಸ್ವಾಮಿ ದಾಖಲಿಸಲು ಬಾಂಬೆ ಹೈಕೋರ್ಟ್ ಅನುಮತಿ
ಭಾನುವಾರ ಅವರಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದ್ದು, ಪಾಸಿಟಿವ್ ಬಂದಿರುವುದಾಗಿ ಸ್ಟಾನ್ ಪರ ವಕೀಲ ಮಿಹಿರ್ ದೇಸಾಯಿ ತಿಳಿಸಿದ್ದಾರೆ. ತಲೋಜಾ ಜೈಲು ಅಧಿಕಾರಿಗಳ ನಿರ್ಲಕ್ಷ್ಯವೇ ಸೋಂಕು ಹರಡಲು ಕಾರಣ ಎಂದು ವಕೀಲರು ಆರೋಪಿಸಿದ್ದಾರೆ. ಜೈಲು ಸಿಬ್ಬಂದಿಗೆ, ಕೈದಿಗಳಿಗೆ ಕೊರೊನಾ ತಗುಲಿದ್ದರೂ ನಿರ್ಲಕ್ಷ್ಯ ಮಾಡಿದ್ದಾರೆ. ಈ ಕಾರಣವಾಗಿ ಸೋಂಕು ತಗುಲಿದೆ ಎಂದು ಹೇಳಿದ್ದಾರೆ.
ಈ ಮುನ್ನ ಜೆಜೆ ಆಸ್ಪತ್ರೆಗೆ ದಾಖಲಿಸಲು ಸೂಚಿಸಲಾಗಿದ್ದು, ಆಸ್ಪತ್ರೆಗೆ ದಾಖಲಾಗಲು ಸ್ಟಾನ್ ಸ್ವಾಮಿ ನಿರಾಕರಿಸಿದ್ದರು. ಕ್ರಮೇಣ ತಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕ್ಷೀಣಿಸುತ್ತಿದ್ದು, ಮಧ್ಯಂತರ ಜಾಮೀನು ನೀಡಬೇಕು ಎಂದು ಕೋರಿಕೊಂಡಿದ್ದರು. ಅವರ ಅನಾರೋಗ್ಯ ಪರಿಗಣಿಸಿ ಅವರಿಗೆ ಮಧ್ಯಂತರ ಜಾಮೀನು ನೀಡಬೇಕು ಎಂದು ಕೋರಿಕೊಂಡಿದ್ದರು.
ಪರಿಸ್ಥಿತಿ ಹೀಗೆಯೇ ಮುಂದುವರಿದರೆ ನಾನು ಇಲ್ಲಿಯೇ ಸಾಯಬಹುದು. ನಾನು ಆಸ್ಪತ್ರೆಗೆ ದಾಖಲಾಗುವ ಬದಲು ಇಲ್ಲೇ ಇರುತ್ತೇನೆ ಎಂದು ಬಾಂಬೆ ಹೈಕೋರ್ಟ್ಗೆ ಹೇಳಿದ್ದರು. ನಾನು ನನ್ನ ಕೊನೆಯ ಸಂದರ್ಭದಲ್ಲಿ ರಾಂಚಿಯಲ್ಲಿರಲು ಬಯಸುತ್ತೇನೆ. ಈಗ ನನ್ನನ್ನು ಆಸ್ಪತ್ರೆಗೆ ದಾಖಲು ಮಾಡುವುದರಿಂದ ಏನೂ ಪ್ರಯೋಜನವಾಗದು ಎಂದು ನನಗನಿಸುತ್ತಿದೆ. ನಿಧಾನವಾಗಿ ನನ್ನ ಸ್ಥಿತಿ ಶೋಚನೀಯವಾಗುತ್ತಿದೆ. ಎಂಟು ತಿಂಗಳ ಹಿಂದೆ ನಾನು ನನ್ನ ಕೆಲವು ಕೆಲಸಗಳನ್ನಾದರೂ ಮಾಡುತ್ತಿದ್ದೆ. ಊಟ ಮಾಡುತ್ತಿದ್ದೆ, ಸ್ವಲ್ಪ ಬರೆಯುತ್ತಿದ್ದೆ, ನಡೆದಾಡುತ್ತಿದ್ದೆ, ಯಾರ ಸಹಾಯ ಪಡೆಯದೆಯೇ ಸ್ನಾನ ಮಾಡುತ್ತಿದ್ದೆ. ಆದರೆ ಈಗ ಪರಿಸ್ಥಿತಿ ಬಿಗಡಾಯಿಸಿದೆ. ನನಗೆ ನಡೆದಾಡಲು ಕೂಡ ಸಾಧ್ಯವಿಲ್ಲದ ಸ್ಥಿತಿಯಲ್ಲಿ ಇದ್ದೇನೆ. ಆಹಾರವನ್ನೂ ಯಾರಾದರು ತಿನ್ನಿಸಬೇಕಾಗಿದೆ. ಹೀಗಿರುವಾಗ ನಾನು ರಾಂಚಿಯಲ್ಲಿರಲು ಬಯಸುತ್ತೇನೆ' ಎಂದು ಹೇಳಿದ್ದರು.
ಮೇ 28ರಂದು ಎಸ್ ಎಸ್ ಶಿಂಧೆ ಹಾಗೂ ಎನ್ ಆರ್ ಬೋರ್ಕಾರ್ ಅವರನ್ನೊಳಗೊಂಡ ಪೀಠವು ಜೈಲು ಅಧಿಕಾರಿಗಳಿಗೆ ತಲೋಜಾ ಜೈಲಿನಿಂದ ಆಸ್ಪತ್ರೆಗೆ ಸ್ಟಾನ್ ಸ್ವಾಮಿ ಅವರನ್ನು ಸ್ಥಳಾಂತರಿಸಲು ಸೂಚಿಸಿತ್ತು.
ಕಳೆದ ಅಕ್ಟೋಬರ್ನಲ್ಲಿ ಅವರನ್ನು ಎಲ್ಗರ್ ಪರಿಷದ್ ಮಾವೋವಾದಿ ನಂಟಿನ ಸಂಬಂಧ ಬಂಧಿಸಿ ತಲೋಜಾ ಜೈಲಿನಲ್ಲಿ ಇರಿಸಲಾಗಿತ್ತು.