ಶಿಂಧೆ V/s ಠಾಕ್ರೆ: ಶಿವಸೇನೆಯ ಆ 'ಬಿಲ್ಲು-ಬಾಣ'ಕ್ಕೆ ಯಾರು ಒಡೆಯ!?
ಮುಂಬೈ, ಜುಲೈ 23: ಮಹಾರಾಷ್ಟ್ರದಲ್ಲಿ ಮಳೆ ಹನಿ ನಿಂತರೂ ಮರದ ಹನಿ ನಿಂತಿಲ್ಲ ಎನ್ನುವಂತ ರಾಜಕೀಯ ಚಟುವಟಿಕೆ ನಡೆಯುತ್ತಿದೆ. ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಹಾಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ನಡುವೆ ಶಿವಸೇನೆ ಚಿಹ್ನೆಗಾಗಿ ಕಾದಾಟ ಮುಂದುವರಿದಿದೆ.
ಶಿವಸೇನೆಯಲ್ಲಿ ಆಯಾ ಬಣವು ಮಾತ್ರ ಬಹುಮತದ ಬೆಂಬಲವನ್ನು ಪಡೆದುಕೊಳ್ಳುತ್ತಿದೆ ಎಂಬುದನ್ನು ಸಾಬೀತುಪಡಿಸುವಂತ ಸಾಕ್ಷ್ಯಚಿತ್ರದ ದಾಖಲೆಗಳನ್ನು ಸಲ್ಲಿಸುವಂತೆ ಭಾರತೀಯ ಚುನಾವಣಾ ಆಯೋಗವು ಕೇಳಿದೆ.
Breaking: ಸುಪ್ರೀಂಕೋರ್ಟ್ ವಿಸ್ತೃತ ಪೀಠಕ್ಕೆ ಠಾಕ್ರೆ ಟೀಮ್ ಅರ್ಜಿ ಶಿಫಾರಸ್ಸು
ಶಿವಸೇನೆಯ ಎರಡೂ ಬಣಗಳು ಮುಂದಿನ ಆಗಸ್ಟ್ 8ರ ಮಧ್ಯಾಹ್ನ 1 ಗಂಟೆಯೊಳಗೆ ತಮ್ಮ ಉತ್ತರಗಳನ್ನು ಸಲ್ಲಿಸುವಂತೆ ಚುನಾವಣಾ ಸಮಿತಿ ತಿಳಿಸಿದೆ. ಈ ವಾರದ ಆರಂಭದಲ್ಲಿ ಶಿಂಧೆ ಬಣವು ಲೋಕಸಭೆ ಮತ್ತು ಮಹಾರಾಷ್ಟ್ರ ವಿಧಾನಸಭೆಯಲ್ಲಿ ತಮಗೆ ನೀಡಿದ ಮಾನ್ಯತೆಯನ್ನು ಉಲ್ಲೇಖಿಸಿ, ಪಕ್ಷದ 'ಬಿಲ್ಲು ಮತ್ತು ಬಾಣ'ದ ಚುನಾವಣಾ ಚಿಹ್ನೆಯನ್ನು ತಮಗೆ ನೀಡುವಂತೆ ಆಯೋಗಕ್ಕೆ ಪತ್ರ ಬರೆದಿತ್ತು. ಸದ್ಯ ಸಮಿತಿಯು ನೀಡಿರುವ ಸಂದೇಶದಲ್ಲಿ ಏನಿದೆ? ಮಹಾರಾಷ್ಟ್ರದಲ್ಲಿ ಚಿಹ್ನೆ ಕಾದಾಟ ಹೇಗಿದೆ?, ಮಹಾ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಕಿತ್ತಾಟದ ಕುರಿತು ಒಂದು ವಿಶೇಷ ವರದಿ ಇಲ್ಲಿದೆ.
ಚಿಹ್ನೆ ಕಾದಾಟ ತಾರಕಕ್ಕೆ ಏರಲು ಮುಖ್ಯ ಕಾರಣವೇನು?
ಮಹಾರಾಷ್ಟ್ರದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವಂತೆ ಅಧಿಸೂಚನೆ ಹೊರಡಿಸಲು ರಾಜ್ಯ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಇತ್ತೀಚೆಗಷ್ಟೇ ನಿರ್ದೇಶನ ನೀಡಿತ್ತು. ಇದರ ಬೆನ್ನಲ್ಲೇ ಶಿವಸೇನೆಯ ಚಿಹ್ನೆಯನ್ನು ಇಟ್ಟುಕೊಂಡು ಚುನಾವಣಾ ಅಖಾಡಕ್ಕೆ ಇಳಿಯಲು ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣವು ಹವಣಿಸುತ್ತಿದೆ. ಇನ್ನೊಂದು ಕಡೆಯಲ್ಲಿ ತಮ್ಮ ಪಕ್ಷದ ಚಿಹ್ನೆಯನ್ನು ಉಳಿಸಿಕೊಳ್ಳುವುದಕ್ಕೆ ಮಾಜಿ ಸಿಎಂ ಉದ್ಧವ್ ಠಾಕ್ರೆ ಬಣವು ಕಚ್ಚೆ ಕಟ್ಟಿಕೊಂಡು ನಿಂತಿದೆ. ಹೀಗಾಗಿ ಶಿವಸೇನೆಗೆ ಬಿಲ್ಲು ಬಾಣದ ಚಿಹ್ನೆಗೆ ಎಲ್ಲಿಲ್ಲದ ಮಹತ್ವದ ಬಂದಿದೆ.
ಶಿಂಧೆ V/s ಠಾಕ್ರೆ ಬಣದಲ್ಲಿ ಜನರ ಬೆಂಬಲ ಯಾರಿಗೆ?
ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಸೇರಿದಂತೆ ಮಹಾರಾಷ್ಟ್ರದ ಹಲವಾರು ನಾಗರಿಕ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಗಳು ಮಾಜಿ ಸಿಎಂ ಉದ್ಧವ್ ಠಾಕ್ರೆ ಮತ್ತು ಸಿಎಂ ಏಕನಾಥ್ ಶಿಂಧೆ ಬಣದಲ್ಲಿ ಜನರು ಯಾರ ಕಡೆಗೆ ತಿರುಗುತ್ತಾರೆ ಎಂಬುದನ್ನು ಸೂಚಿಸುತ್ತವೆ. ಸ್ಥಳೀಯ ಚುನಾವಣಾ ಫಲಿತಾಂಶವೇ ಮುಂದಿನ ಶಿವಸೇನೆಯ ಭವಿಷ್ಯವನ್ನು ನಿರ್ಧರಿಸುತ್ತದೆ ಎಂಬುದು ರಾಜಕೀಯ ತಜ್ಞರ ವಿಶ್ಲೇಷಣೆ ಆಗಿದೆ.
ಮಹಾರಾಷ್ಟ್ರ ಬಿಕ್ಕಟ್ಟಿನ ಮೇಲೆ ದೇಶದ ಕಣ್ಣು
ಮಹಾರಾಷ್ಟ್ರದಲ್ಲಿ ಸೃಷ್ಟಿಯಾದ ರಾಜಕೀಯ ಬಿಕ್ಕಟ್ಟಿನ ಮೇಲೆ ಇಡೀ ರಾಷ್ಟ್ರವೇ ದೃಷ್ಟಿ ನೆಟ್ಟಿತು. ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಬಣಗಳ ಹೋರಾಟ ರಾಜಕೀಯ ತಿಕ್ಕಾಟಕ್ಕೆ ಕಾರಣವಾಯಿತು. ಇಡೀ ದೇಶವೇ ಮಹಾ ರಾಜಕಾರಣದ ಮೇಲೆ ಕಣ್ಣಿಟ್ಟಿದ್ದ ಸಂದರ್ಭದಲ್ಲೇ ಸರ್ಕಾರವೇ ಉರುಳಿ ಬಿದ್ದಿತು. ನೋಡು ನೋಡುತ್ತಿದ್ದಂತೆ ಹೊಸ ಸರ್ಕಾರ ರಚನೆ ಆಯಿತು. ಏಕನಾಥ್ ಶಿಂಧೆಯೊಬ್ಬ ತಳಮಟ್ಟದ ಮರಾಠ ನಾಯಕರಾಗಿದ್ದು, ಹಿಂದುತ್ವ ಮತ್ತು ಜನಾಂಗೀಯ ರಾಷ್ಟ್ರೀಯತೆಯ ತಳಹದಿಯಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ಉದ್ಧವ್ ಠಾಕ್ರೆ ನಕಲಿ ಶಿವ ಸೈನಿಕೆ ಎನ್ನುವಂತೆ ಬಿಂಬಿಸಲಾಯಿತು.
ಮಹಾರಾಷ್ಟ್ರದಲ್ಲಿ ಕುಸಿದು ಬಿದ್ದ ಮಹಾ ವಿಕಾಸ್ ಅಘಾಡಿ ಸರ್ಕಾರ
ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ, ಕಾಂಗ್ರೆಸ್ ಮತ್ತು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮೈತ್ರಿಯಿಂದ ರಚಿಸಲಾದ ಮಹಾ ವಿಕಾಸ್ ಅಘಾಡಿ (MVA) ಸರ್ಕಾರದ ವಿರುದ್ಧ ಏಕನಾಥ್ ಶಿಂಧೆ ಬಂಡಾಯದ ಬಾವುಟ ಹಾರಿಸಿದರು. ಒಂದೆರೆಡು ವಾರದಲ್ಲಿ ರಾಜಕೀಯ ಚಿತ್ರಣಗಳು ಸಂಪೂರ್ಣ ಬದಲಾಯಿತು. ಶಿವಸೇನೆ ಶಾಸಕರ ಬೆಂಬಲವನ್ನು ಪಡೆದುಕೊಂಡ ಮಹಾ ವಿಕಾಸ್ ಅಘಾದಿ ಸರ್ಕಾರವನ್ನು ಉರುಳಿಸುವಲ್ಲಿ ಶಿಂಧೆ ಯಶಸ್ವಿಯಾದರು. ಇದರ ಬೆನ್ನಲ್ಲೇ ಬಿಜೆಪಿ ಬೆಂಬಲವನ್ನು ಪಡೆದುಕೊಂಡು ಜೂನ್ 30ರಂದು ರಾಜ್ಯದ ಮುಖ್ಯಮಂತ್ರಿ ಆಗಿ ಏಕನಾಥ್ ಶಿಂಧೆ ಪ್ರಮಾಣವಚನ ಸ್ವೀಕರಿಸಿದರೆ, ಬಿಜೆಪಿಯ ದೇವೇಂದ್ರ ಫಡ್ನವಿಸ್ ಉಪ ರಾಷ್ಟ್ರಪತಿ ಆಗಿ ಪ್ರಮಾಣವಚನ ಸ್ವೀಕರಿಸಿದರು.
ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ಬಣಕ್ಕೆ ಫುಲ್ ಮಾರ್ಕ್ಸ್
ರಾಜ್ಯದ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿರುವ ಏಕನಾಥ್ ಶಿಂಧೆ ಸರ್ಕಾರವು ವಿಶ್ವಾಸಮತಯಾಚನೆಯಲ್ಲೂ ಪಾಸ್ ಆಯಿತು. ಜೂನ್ 4ರ ಸೋಮವಾರ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ವಿಶ್ವಾಸಮತಯಾಚನೆ ಪ್ರಕ್ರಿಯೆ ಆರಂಭಿಸಲಾಯಿತು. ತಲೆ ಎಣಿಕೆ ಮೂಲಕ ವಿಶ್ವಾಸಮತಯಾಚನೆ ಪ್ರಕ್ರಿಯೆ ನಡೆಸಲಾಯಿತು. 23 ನಿಮಿಷಗಳಲ್ಲಿ ಶಿವಸೇನೆ ಮತ್ತು ಬಿಜೆಪಿ ನೇತೃತ್ವದ ಸರ್ಕಾರವು 164 ಮತಗಳ ಬೆಂಬಲದೊಂದಿಗೆ ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿ ಆಯಿತು.
ರಾಜ್ಯದಲ್ಲಿ 288 ಸದಸ್ಯ ಬಲದ ವಿಧಾನಸಭೆಯಲ್ಲಿ ಒಬ್ಬ ಶಾಸಕರು ಮೃತಪಟ್ಟ ಹಿನ್ನೆಲೆ ಸದಸ್ಯರ ಬಲವನ್ನು 287ಕ್ಕೆ ಇಳಿಸಲಾಗಿತ್ತು. ಈ ಪೈಕಿ ಬಹುಮತಕ್ಕೆ 144 ಮತಗಳ ಅಗತ್ಯವಿದ್ದು, 164 ಶಾಸಕರು ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ಮಂಡಿಸಿದ ವಿಶ್ವಾಸಮತ ಯಾಚನೆಗೆ ಪರವಾಗಿ ಮತ ಚಲಾಯಿಸಿದರು. 99 ಶಾಸಕರು ವಿಶ್ವಾಸ ಮತಯಾಚನೆಗೆ ವಿರುದ್ಧವಾಗಿ ಮತ ಚಲಾಯಿಸಿದ್ದು, ಆ ಮೂಲಕ ಒಟ್ಟು 263 ಶಾಸಕರು ಮತ ಚಲಾಯಿಸಿದರು. ಮೂವರು ಶಾಸಕರು ಗೈರಾಗಿದ್ದು, ಬಹುತೇಕ ಕಾಂಗ್ರೆಸ್ ಮತ್ತು ಎನ್ಸಿಪಿಯ 20 ಶಾಸಕರು ಮತದಾನದ ವೇಳೆ ಗೈರು ಹಾಜರಾಗಿದ್ದರು.