Breaking News: ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ಶಿಂಧೆಗೆ ಕೊಕ್
ಮುಂಬೈ, ಜೂನ್ 21: ಮಹಾರಾಷ್ಟ್ರದಲ್ಲಿ ರಾಜಕೀಯ ಸಂಚಲನ ಮೂಡಿಸಿದ ಶಿವಸೇನಾ ಮುಖಂಡ ಏಕನಾಥ್ ಶಿಂಧೆಗೆ ಹಿನ್ನಡೆಯಾಗಿದೆ. ಸುಮಾರು 13 ಶಾಸಕರನ್ನು ಕರೆದುಕೊಂಡು ಗುಜರಾತಿನ ಸೂರತ್ ಪಟ್ಟಣದ ಹೋಟೆಲ್ ವೊಂದರಲ್ಲಿ ಬೀಡುಬಿಟ್ಟಿರುವ ಶಿಂಧೆಗೆ ಪಕ್ಷದಿಂದ ಭಾರಿ ಹೊಡೆತ ನೀಡಲಾಗಿದೆ. ಶಾಸಕಾಂಗ ಪಕ್ಷ ನಾಯಕ ಸ್ಥಾನದಿಂದ ಏಕನಾಥ್ ಶಿಂಧೆಗೆ ಕೊಕ್ ನೀಡಲಾಗಿದೆ.
ಮಹಾರಾಷ್ಟ್ರದಲ್ಲಿ ಸದ್ಯ ಸಮ್ಮಿಶ್ರ ಸರ್ಕಾರ ಆಡಳಿತದಲ್ಲಿದೆ. ಉದ್ದವ್ ಠಾಕ್ರೆ ನೇತೃತ್ವದ ಶಿವಸೇನಾ ಸರ್ಕಾರಕ್ಕೆ ಎನ್ ಸಿಪಿ ಹಾಗೂ ಕಾಂಗ್ರೆಸ್ ಬೆಂಬಲ ನೀಡಿವೆ. ಮಹಾರಾಷ್ಟ್ರ ಅಘಾಡಿಯ ಬುಡವನ್ನು ಅಲ್ಲಾಡಿಸುವಂಥ ಕೃತ್ಯಕ್ಕೆ ಏಕನಾಥ್ ಕೈ ಹಾಕಿದ್ದಾರೆ ಎಂಬ ಮಾಹಿತಿಯಿದೆ.
ಇದರ ಬೆನ್ನಲ್ಲೇ ಏಕನಾಥ್ ಶಿಂಧೆರನ್ನು ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ವಜಾಗೊಳಿಸಲಾಗಿದೆ. ಹಾಗೂ ತಕ್ಷಣದಿಂದ ಜಾರಿಗೆ ಬರುವಂತೆ ಸೆವ್ರಿ ಶಾಸಕ ಅಜಯ್ ಚೌಧರಿರನ್ನು ವಿಧಾನಸಭೆಯ ಶಾಸಕಾಂಗ ಪಕ್ಷದ ನಾಯಕರನ್ನಾಗಿ ನೇಮಿಸಿ ಶಿವಸೇನಾ ಆದೇಶ ನೀಡಿದೆ ಎಂಬ ಸುದ್ದಿ ಬಂದಿದೆ.
ಏಕನಾಥ್ ಶಿಂಧೆ ಅವರ ಪುತ್ರ ಶ್ರೀಕಾಂತ್ ಶಿಂಧೆ, ಕಲ್ಯಾಣ್ ಕ್ಷೇತ್ರದ ಸಂಸದರಾಗಿದ್ದಾರೆ. ಏಕನಾಥ್ ಶಿಂಧೆ 2004, 2009, 2014 ಹಾಗೂ 2019ರಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.
2014ರಲ್ಲಿ ಬಿಜೆಪಿ ಹಾಗೂ ಶಿವಸೇನಾ ಸಖ್ಯ ಮುರಿದ ಬಳಿಕ ಶಿವಸೇನಾದಿಂದ ಶಾಸಕಾಂಗ ಪಕ್ಷದ ನಾಯಕರಾಗಿ ಏಕನಾಥ್ ಶಿಂಧೆ ಕಾರ್ಯನಿರ್ವಹಿಸಿದ್ದರು.
ಮಹಾ ವಿಕಾಸ್ ಅಘಾಡಿ ಆರಂಭಿಸಿ, ಹೊಸ ಸರ್ಕಾರ ಉದಯವಾದ ಬಳಿಕ ಶಿಂಧೆಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ದೊರಕಿದೆ. ನಗರಾಭಿವೃದ್ಧಿ ಹಾಗೂ ಮೂಲ ಸೌಕರ್ಯ ಇಲಾಖೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಮಹಾರಾಷ್ಟ್ರದ ಅಘಾಡಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಶಿವಸೇನಾ ಶಾಸಕರು ತಿರುಗಿಬಿದ್ದಿದ್ದಾರೆ. ಮಧ್ಯಪ್ರದೇಶದಂತೆ ಮಹಾರಾಷ್ಟ್ರದಲ್ಲಿ ಸರ್ಕಾರ ಬೀಳಿಸುವ ಕನಸು ನನಸಾಗಲ್ಲ ಎಂದು ಸೇನಾ ಶಾಸಕರು ಗುಡುಗಿದ್ದಾರೆ.
Recommended Video
ಇಷ್ಟಕ್ಕೂ ಏಕನಾಥ್ ಶಿಂಧೆ ಅಸಮಾಧಾನಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಪಕ್ಷದಲ್ಲಿ ಸೂಕ್ತ ಪ್ರಾತಿನಿಧ್ಯ, ಮಾನ್ಯತೆ ಸಿಗುತ್ತಿಲ್ಲ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂಬ ಸುದ್ದಿಯಿದೆ.