ಶಿವಸೇನಾ ಶಾಸಕಾಂಗ ಪಕ್ಷದ ನಾಯಕರಾಗಿ ಏಕ್ ನಾಥ್ ಶಿಂಧೆ ಆಯ್ಕೆ
ಮುಂಬೈ, ಅಕ್ಟೋಬರ್ 31: ಶಿವ ಸೇನಾದ ಹಿರಿಯ ನಾಯಕ ಏಕ್ ನಾಥ್ ಶಿಂಧೆ ಅವರನ್ನು ಪಕ್ಷದ ಶಾಸಕಾಂಗ ನಾಯಕರಾಗಿ ಗುರುವಾರ ಆಯ್ಕೆ ಮಾಡಲಾಗಿದೆ. ಸುನೀಲ್ ಪ್ರಭು ಅವರನ್ನು ಶಿವಸೇನಾದ ಮುಖ್ಯ ಸಚೇತಕರಾಗಿ ಆಯ್ಕೆ ಮಾಡಲಾಗಿದೆ. ಅಂದ ಹಾಗೆ ಏಕ್ ನಾಥ್ ಶಿಂಧೆ ಅವರಿ ಥಾಣೆಯ ಶಾಸಕ. ಜತೆಗೆ ಬಿಜೆಪಿ- ಶಿವಸೇನಾ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ ಅನುಭವ ಇದೆ.
ಶಿಂಧೆ ಅವರನ್ನು ನಾಯಕರಾಗಿ ಮಾಡಲು ಠಾಕ್ರೆ ಕುಟುಂಬದ ಆದಿತ್ಯ ಅವರೇ ಹೆಸರು ಪ್ರಸ್ತಾವ ಮಾಡಿದರು. ಪ್ರತಾಪ್ ಸರ್ ನಾಯಕ್ ಅವರು ಹೆಸರನ್ನು ಅನುಮೋದಿಸಿದರು. ಪಕ್ಷದ ಮೂಲಗಳ ಪ್ರಕಾರ, ಉದ್ಧವ್ ಠಾಕ್ರೆಗೆ ತಮ್ಮ ಮಗ ಆದಿತ್ಯನನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡುವುದು ಇಷ್ಟವಿಲ್ಲ.
ಮಹಾರಾಷ್ಟ್ರಕ್ಕೆ ಫಡ್ನವಿಸ್ ಸಿಎಂ, ಮತ್ತಿಬ್ಬರು ಡಿಸಿಎಂ: ಮೂಲಗಳಿಂದ ಮಾಹಿತಿ
ದಾದರ್ ನಲ್ಲಿ ಇರುವ ಶಿವಸೇನಾ ಮುಖ್ಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಉದ್ಧವ್ ಠಾಕ್ರೆ ಕೂಡ ಹಾಜರಿದ್ದರು. ಇನ್ನು ಶಿವಸೇನಾಗೆ ಬೆಂಬಲ ಸೂಚಿಸಿರುವ ಕೆಲವು ಪಕ್ಷೇತರ ಅಭ್ಯರ್ಥಿಗಳು ಕೂಡ ಸಭೆಯಲ್ಲಿ ಇದ್ದರು. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಈಗ ಬಿಜೆಪಿ- ಶಿವಸೇನಾ ಮೈತ್ರಿಗೆ ಬಹುಮತ ಇದೆ. ಆದರೆ ಸೀಟು ಹಂಚಿಕೆ ಸಮಾನವಾಗಿ ಆಗಬೇಕು ಎಂದು ಶಿವಸೇನೆ ಪಟ್ಟು ಹಿಡಿದಿದೆ.
ಈಚೆಗೆ ಮುಗಿದ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆ ಐವತ್ತಾರು ಸ್ಥಾನ ಹಾಗೂ ಬಿಜೆಪಿ ನೂರಾ ಐದು ಸ್ಥಾನಗಳಲ್ಲಿ ಜಯ ಗಳಿಸಿದೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಗೆ ಏಳು ಮಂದಿ ಪಕ್ಷೇತರ ಅಭ್ಯರ್ಥಿಗಳು ಕೂಡ ಬೆಂಬಲ ನೀಡಿದ್ದಾರೆ.