ಮಹಾ ಬಂಡಾಯ: ಸುಪ್ರೀಂಕೋರ್ಟ್ ಅಂಗಳಕ್ಕೆ 16 ಶಾಸಕರ ಅನರ್ಹತೆ ಚೆಂಡು!
ಮುಂಬೈ, ಜೂನ್ 26: ಮಹಾರಾಷ್ಟ್ರದಲ್ಲಿ ಮಹಾ ವಿಕಾಸ ಅಘಾಡಿ ಸರ್ಕಾರದ ವಿರುದ್ಧ ಶಿವಸೇನೆಯ ಬಂಡಾಯ ಶಾಸಕರು ನಡೆಸುತ್ತಿರುವ ಹೋರಾಟ ಇದೀಗ ಕಾನೂನಾತ್ಮಕ ತಿರುವು ಪಡೆದುಕೊಂಡಿದೆ.
ಬಂಡಾಯ ನಾಯಕ ಏಕನಾಥ್ ಶಿಂಧೆ ಸೇರಿದಂತೆ ಒಟ್ಟು 16 ಬಂಡಾಯ ಶಾಸಕರನ್ನು ಅನರ್ಹಗೊಳಿಸಲು ಮುಂದಾಗಿರುವ ಕ್ರಮವನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸುವುದಕ್ಕೆ ಶಿವಸೇನೆ ಶಾಸಕರು ತೀರ್ಮಾನಿಸಿದ್ದಾರೆ.
'ಮಹಾ' ಡ್ರಾಮಾದ ಅಖಾಡಕ್ಕೆ ಇಳಿದ ಉದ್ಧವ್ ಠಾಕ್ರೆ ಪತ್ನಿ; ಯಾರು ಈ ರಷ್ಮಿ?
ಈ ಅರ್ಜಿಯು ಸೋಮವಾರ ಸರ್ವೋಚ್ಛ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ. ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಹೇಗೆ ಕಾನೂನಾತ್ಮಕ ತಿರುವು ಪಡೆದುಕೊಂಡಿದೆ. ಅಜಯ್ ಚೌಧರಿ ಅನ್ನು ಶಿವಸೇನೆ ಶಾಸಕಾಂಗ ಪಕ್ಷದ ನಾಯಕರನ್ನಾಗಿ ನೇಮಿಸಿರುವ ಉಪಸಭಾಪತಿ ನರಹರಿ ಜಿರ್ವಾಲ್ ನಿರ್ಣಯವನ್ನು ಏಕನಾಥ್ ಶಿಂಧೆ ಬಣವು ಪ್ರಶ್ನಿಸಿದೆ.
ಬಂಡಾಯ ಶಾಸಕರಿಂದ ಸುಪ್ರೀಂ ಕೋರ್ಟ್ಗೆ ಮನವಿ
ಬಂಡಾಯ ಶಾಸಕರನ್ನು ಅನರ್ಹಗೊಳಿಸುವ ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಕ್ರಮವನ್ನು ತೆಗೆದುಕೊಳ್ಳದಂತೆ ಉಪ ಸ್ಪೀಕರ್ಗೆ ಆದೇಶ ನೀಡಲು ಬಂಡಾಯ ಶಾಸಕರು ಸುಪ್ರೀಂಕೋರ್ಟ್ಗೆ ಮನವಿ ಮಾಡಿದ್ದಾರೆ. ಇದರ ಜೊತೆಗೆ ತಮ್ಮ ಕುಟುಂಬಗಳಿಗೆ ಭದ್ರತೆ ಒದಗಿಸಲು ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆಯೂ ನ್ಯಾಯಾಲಯವನ್ನು ಕೋರಿದ್ದಾರೆ. ಈ ವಾರದ ಆರಂಭದಲ್ಲಿ 16 ಬಂಡಾಯ ಶಾಸಕರನ್ನು ಅನರ್ಹಗೊಳಿಸುವಂತೆ ಶಿವಸೇನೆ ಉಪ ಸ್ಪೀಕರ್ಗೆ ಮನವಿ ಸಲ್ಲಿಸಿತ್ತು. ಏಕನಾಥ್ ಶಿಂಧೆ ಪಾಳಯವು ಈ ಕ್ರಮವು ಕಾನೂನುಬಾಹಿರ ಎಂದು ಪ್ರತಿಪಾದಿಸಿದೆ, ಏಕೆಂದರೆ ಅನರ್ಹತೆಯು ವಿಧಾನಸಭೆಯಲ್ಲಿನ ವಿಷಯಗಳಿಗಾಗಿ ಮಾತ್ರ ಸಂಬಂಧಿಸಿದೆಯೇ ವಿನಃ ಪಕ್ಷದ ಸಭೆಗೆ ಗೈರು ಹಾಜರಾಗುವುದಕ್ಕೆ ಅಲ್ಲ ಎಂದು ವಾದಿಸಿದೆ.
ಬಂಡಾಯ ಶಾಸಕರ ಅನರ್ಹತೆ ಬಗ್ಗೆ ವಕೀಲರ ಮಾತು
ರಾಜ್ಯದ ಹೊರಗೆ ನಡೆಸಿದ ಪಕ್ಷ ವಿರೋಧಿ ಚಟುವಟಿಕೆಗಳಿಗೆ ಈ ಹಿಂದೆ ಶಾಸಕರನ್ನು ಅನರ್ಹಗೊಳಿಸಿದ ಅನೇಕ ಉದಾಹರಣೆಗಳಿವೆ ಎಂದು ಸುಪ್ರೀಂ ಕೋರ್ಟ್ ವಕೀಲ ದೇವದತ್ತ್ ಕಾಮತ್ ತಿಳಿಸಿದ್ದಾರೆ. ಅಲ್ಲದೆ, ಬಂಡಾಯ ಶಾಸಕರು ಬೇರೆ ಪಕ್ಷದಲ್ಲಿ ವಿಲೀನಗೊಳ್ಳಬೇಕು ಅಥವಾ ಅವರನ್ನು ಅನರ್ಹಗೊಳಿಸಲಾಗುವುದು ಎಂದು ಕಾನೂನು ಹೇಳುತ್ತದೆ. ಈ ವಿಷಯದಲ್ಲಿ, ಸ್ಪೀಕರ್ ಅನುಪಸ್ಥಿತಿಯಲ್ಲಿ ಡೆಪ್ಯೂಟಿ ಸ್ಪೀಕರ್ "ಎಲ್ಲಾ ರೀತಿಯ ಹಕ್ಕುಗಳನ್ನು" ಹೊಂದಿರುತ್ತಾರೆ ಎಂದು ಹೇಳಿದ್ದರು.
ಸಚಿವ ಸ್ಥಾನಕ್ಕೆ ಬರುತ್ತಾ ಕುತ್ತು?
ಬಂಡಾಯ ಸಚಿವರ ವಿರುದ್ಧ ಶಿವಸೇನೆಯು ಇತರ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಯೋಜನೆ ಹಾಕಿಕೊಳ್ಳುತ್ತಿದೆ. ಈ ಹಂತದಲ್ಲಿ ಏಕನಾಥ್ ಶಿಂಧೆ, ಗುಲಾಬ್ರಾವ್ ಪಾಟೀಲ್ ಮತ್ತು ದಾದಾ ಭೂಸೆ ತಮ್ಮ ಸಚಿವ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಇದರ ಜೊತೆಗೆ ಅಬ್ದುಲ್ ಸತ್ತಾರ್ ಮತ್ತು ಶಂಬುರಾಜೇ ದೇಸಾಯಿ ಕೂಡ ಕಠಿಣ ಕ್ರಮವನ್ನು ಎದುರಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಭಾನುವಾರ ಮಧ್ಯಾಹ್ನ, ಉದಯ್ ಸಾವಂತ್ ಬಂಡಾಯ ಪಾಳಯಕ್ಕೆ ಸೇರಿದ ಮಹಾರಾಷ್ಟ್ರದ ಒಂಬತ್ತನೇ ಸಚಿವರಾಗಿದ್ದಾರೆ. ಇನ್ನೊಂದು ದಿಕ್ಕಿನಲ್ಲಿ ಬಂಡಾಯ ನಾಯಕರು ತಾವು ಮೂರನೇ ಎರಡರಷ್ಟು ಬಹುಮತವನ್ನು ಹೊಂದಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದರಿಂದ ಅನರ್ಹತೆಯ ಕಾನೂನುಗಳನ್ನು ಅನ್ವಯಿಸದೆಯೇ ವಿಧಾನಸಭೆಯಲ್ಲಿ ಪಕ್ಷವನ್ನು ವಿಭಜಿಸಲು ಸಾಧ್ಯವಾಗುತ್ತದೆ.
ಉದ್ಧವ್ ಠಾಕ್ರೆ ಸಂಪರ್ಕದಲ್ಲಿ 20 ಬಂಡಾಯ ಶಾಸಕರು
ಶಿವಸೇನೆಯ ಬಂಡಾಯ ನಾಯಕ ಏಕನಾಥ್ ಶಿಂಧೆ ಬಣದಲ್ಲಿ ಗುರುತಿಸಿಕೊಂಡಿರುವ 20 ಶಾಸಕರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಂಪರ್ಕದಲ್ಲಿದ್ದಾರೆ. ಈ 20 ಶಾಸಕರಿಗೆ ತಾವು ಬಿಜೆಪಿಯ ಜೊತೆಗೆ ಮೈತ್ರಿ ಮಾಡಿಕೊಳ್ಳುವುದು ಇಷ್ಟವಿಲ್ಲ ಎಂದು ಮೂಲಗಳು ತಿಳಿಸಿವೆ. ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಮತ್ತು ಶಿವಸೇನೆ ನೇತೃತ್ವದ ಮಹಾ ವಿಕಾಸ ಅಘಾಡಿ ಸರ್ಕಾರಕ್ಕೆ ಯಾವುದೇ ರೀತಿ ತೊಂದರೆ ಆಗುವುದಿಲ್ಲ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರಕ್ಕೆ ನಮ್ಮ ಬೆಂಬಲ ಯಾವಾಗಲೂ ಇದ್ದೇ ಇರುತ್ತದೆ. ವಿಧಾನಸಭೆಯಲ್ಲಿ ನಮ್ಮ ಮೈತ್ರಿಕೂಟವೇ ವಿಶ್ವಾಸಮತವನ್ನು ಗೆದ್ದುಕೊಳ್ಳಲಿದೆ ಎಂದು ಶರದ್ ಪವಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಶ್ವಾಸ ಗೆಲ್ಲುವ ಲೆಕ್ಕಾಚಾರದಲ್ಲಿ ಮಹಾ ಪಕ್ಷಗಳು
ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಒಟ್ಟು 288 ಸ್ಥಾನಗಳಿದ್ದು, ಒಬ್ಬ ಶಾಸಕರು ವಿಧಿವಶವಾದ ಹಿನ್ನೆಲೆ ಈ ಸಂಖ್ಯೆಯು 287ಕ್ಕೆ ತಗ್ಗಿದೆ. ಹೀಗಾಗಿ ಸರ್ಕಾರದ ಬಹುಮತಕ್ಕೆ ಕನಿಷ್ಠ 144 ಸ್ಥಾನಗಳು ಬೇಕಾಗುತ್ತದೆ. ಬಿಜೆಪಿಯು 106 ಶಾಸಕರನ್ನು ಹೊಂದುವ ಮೂಲಕ ಅತಿದೊಡ್ಡ ಪಕ್ಷವಾಗಿದೆ. ಆದರೆ 55 ಶಾಸಕರನ್ನು ಹೊಂದಿರುವ ಶಿವಸೇನೆ, 53 ಶಾಸಕರನ್ನು ಹೊಂದಿರುವ ಎನ್ ಸಿಪಿ ಮತ್ತು 44 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಜೊತೆ ಮೂವರು ಶಾಸಕರನ್ನು ಹೊಂದಿರುವ ಬಹುಜನ ವಿಕಾಸ ಅಘಾಡಿ ಪಕ್ಷಗಳು ಒಟ್ಟಾಗಿ ಸೇರಿಕೊಂಡು ಮಹಾ ವಿಕಾಸ ಅಘಾಡಿ ಎಂದ ಸಮ್ಮಿಶ್ರ ಸರ್ಕಾರವನ್ನು ರಚಿಸಿವೆ.
ಮಹಾ ವಿಕಾಸ ಅಘಾಡಿ ಒಕ್ಕೂಟವು 169 ಶಾಸಕರ ಬೆಂಬಲವನ್ನು ಹೊಂದಿದೆ. ಇನ್ನೊಂದು ಮಗ್ಗಲಿನಲ್ಲಿ ಬಿಜೆಪಿಯು 106 ಸ್ಥಾನಗಳ ಜೊತೆಗೆ ಮಿತ್ರಪಕ್ಷಗಳು ಹಾಗೂ ಐದು ಇತರೆ ಶಾಸಕರು ಸೇರಿದಂತೆ ಒಟ್ಟು 113 ಶಾಸಕರ ಬೆಂಬಲವನ್ನು ಹೊಂದಿದೆ. ಈಗ ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಶಿವಸೇನೆ ನಾಯಕ ಏಕನಾಥ್ ಶಿಂಧೆ ಜೊತೆಗೆ 50 ಮಂದಿ ಶಾಸಕರು ಬೆಂಬಲಕ್ಕೆ ನಿಂತಿದ್ದಾರೆ.
Recommended Video