ಕಂಗನಾ ವಿರುದ್ಧ ಕಿಡಿಕಾರಿದ್ದ ಶಾಸಕನ ಮನೆ ಮೇಲೆ ಇ.ಡಿ ದಾಳಿ
ಮುಂಬೈ, ನವೆಂಬರ್ 24: ಶಿವಸೇನಾ ಮುಖಂಡ ಪ್ರತಾಪ್ ಸರ್ನಾಯಕ್ ಅವರ ಕಚೇರಿ ಮತ್ತು ನಿವಾಸ ಆವರಣಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿದೆ.
ಶಿವಸೇನಾ ಶಾಸಕ ಪ್ರತಾಪ್ ಸರ್ನಾಯಕ್ ಅವರ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಗೆ ಸಂಬಂಧಿಸಿದ ಅನೇಕ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಪಾಸಣೆ ಮತ್ತು ಪರಿಶೀಲನೆ ನಡೆಸಿದ್ದಾರೆ. ಆದರೆ ಇದು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ ದಾಳಿಯೇ ಎಂಬುದನ್ನು ಇ.ಡಿ. ಇನ್ನೂ ಖಾತರಿಪಡಿಸಿಲ್ಲ.
ಆಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಹಗರಣ: ಕಮಲ್ ನಾಥ್ ಮಕ್ಕಳು, ಸೋದರಳಿಯ ಕೂಡ ಭಾಗಿ
'ಜಾರಿ ನಿರ್ದೇಶಾನಲಯವು ಭದ್ರತಾ ಪೂರೈಕೆದಾರ ಟಾಪ್ಸ್ ಗ್ರೂಪ್ ಪ್ರವರ್ತಕರಿಗೆ ಮತ್ತು ಕೆಲವು ರಾಜಕಾರಣಿಗಳು ಸೇರಿದಂತೆ ಅದಕ್ಕೆ ಸಂಬಂಧಿಸಿದ ಸದಸ್ಯರಿಗೆ ಸೇರಿದ ಜಾಗಗಳಲ್ಲಿ ತಪಾಸಣೆ ನಡೆಸಿದೆ. ಮುಂಬೈ ಮತ್ತು ಥಾಣೆಗಳಲ್ಲಿ ಹತ್ತು ಸ್ಥಳಗಳಲ್ಲಿ ಪರಿಶೀಲನೆ ನಡೆದಿದೆ' ಎಂದು ಸುದ್ದಿಸಂಸ್ಥೆ ಎಎನ್ಐ ವರದಿ ಮಾಡಿದೆ.
ಥಾಣೆಯ ಒವಾಲ-ಮಜಿವಾಡ ಕ್ಷೇತ್ರದ ಶಿವಸೇನಾ ಶಾಸಕರಾಗಿರುವ ಪ್ರತಾಪ್ ಸರ್ನಾಯಕ್, ಮುಂಬೈ ಅನ್ನು ಪಾಕಿಸ್ತಾನ ಆಕ್ರಮಿಕ ಕಾಶ್ಮೀರಕ್ಕೆ ಹೋಲಿಸಿದ್ದ ನಟಿ ಕಂಗನಾ ರಣಾವತ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸುವಂತೆ ಆಗ್ರಹಿಸುವ ಮೂಲಕ ಇತ್ತೀಚೆಗೆ ಸುದ್ದಿಯಾಗಿದ್ದರು.
ಡ್ರಗ್ಸ್ ಕೇಸ್: ಸಿಪಿಐಎಂ ಕಾರ್ಯದರ್ಶಿ ಪುತ್ರ ಬಿನೀಶ್ ಬಂಧನ
'ಸಂಸದ ಸಂಜಯ್ ರಾವತ್ ಅವರು ಬಹಳ ಮೃದುವಾದ ರೀತಿ ಕಂಗನಾ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಆಕೆ ಇಲ್ಲಿಗೆ ಬಂದರೆ ನಮ್ಮ ಧೈರ್ಯಶಾಲಿ ಮಹಿಳೆಯರು ಆಕೆಗೆ ಬಾರಿಸದೆ ಇರುವುದಿಲ್ಲ. ಉದ್ಯಮಿಗಳು ಮತ್ತು ಸಿನಿಮಾ ತಾರೆಯರನ್ನು ಸೃಷ್ಟಿಸುವ ನಗರವಾದ ಮುಂಬೈ ಅನ್ನು ಆಕೆ ಪಿಒಕೆಗೆ ಹೋಲಿಸಿದ್ದಕ್ಕೆ ದೇಶದ್ರೋಹದ ಪ್ರಕರಣ ದಾಖಲಿಸಬೇಕು' ಎಂದು ಅವರು ಹೇಳಿದ್ದರು.