ಅನಿಲ್ ಅಂಬಾನಿಗೆ ಸಮನ್ಸ್ ಜಾರಿ ಮಾಡಿದ ಇಡಿ ಇಲಾಖೆ
ಮುಂಬೈ, ಮಾರ್ಚ್ 16: ರಿಲಾಯೆನ್ಸ್ ಗ್ರೂಫ್ ಮುಖ್ಯಸ್ಥ ಅನಿಲ್ ಅಂಬಾನಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ. ಯೆಸ್ ಬ್ಯಾಂಕ್ ಆರ್ಥಿಕ ಸಂಕಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದೆ.
ಯೆಸ್ ಬ್ಯಾಂಕ್ ಆರ್ಥಿಕ ಸಂಕಷ್ಟ ಪ್ರಕರಣದಲ್ಲಿ ಈಗಾಗಲೇ ಯಸ್ ಬ್ಯಾಂಕ್ ಮುಖ್ಯಸ್ಥ ರಾಣಾ ಕಪೂರ್ ಮತ್ತು ಕುಟುಂಬ ಸದಸ್ಯರನ್ನು ಇಡಿ ಇಲಾಖೆ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದೆ. ರಾಣಾ ಕಪೂರ್ ಮತ್ತು ಯೆಸ್ ಬ್ಯಾಂಕ್ ಜೊತೆ ವ್ಯವಹಾರ ಮಾಡಿರುವ ಕಾರಣದಿಂದ ಅನಿಲ್ ಅಂಬಾನಿಗೂ ಈಗ ಸಂಕಷ್ಟ ಎದುರಾಗಿದೆ.
Yes Bank ಸ್ಥಾಪಕ ರಾಣಾ ಕಪೂರ್ ವಶಕ್ಕೆ ಪಡೆದ ಇಡಿ
ಯೆಸ್ ಬ್ಯಾಂಕ್ನಿಂದ ಸಾಲ ಪಡೆದಿರುವ ದೊಡ್ಡ ದೊಡ್ಡ ಕಂಪನಿಗಳ ಪೈಕಿ ಅಂಬಾನಿ ಗ್ರೂಪ್ ಕೂಡ ಇದೆ. ಹಾಗಾಗಿ, ಜಾರಿ ನಿರ್ದೇಶನಾಲಯ ಅಂಬಾನಿಗೆ ಸೋಮವಾರ ಕಚೇರಿಗೆ ಬರುವಂತೆ ಸಮನ್ಸ್ ಜಾರಿ ಮಾಡಿತ್ತು.
ಆದರೆ, ಅಂಬಾನಿ ಅನಾರೋಗ್ಯ ಕಾರಣ ನೀಡಿರುವುದರಿಂದ ಸೋಮವಾರ ಜಾರಿ ನಿರ್ದೇಶನಾಲಯ ಮುಂದೆ ಹಾಜರಾಗಲು ಸಾಧ್ಯವಾಗಲ್ಲ ಎಂದು ವಿನಂತಿಸಿಕೊಂಡಿದ್ದು, ಸದ್ಯ ಅಂಬಾನಿಗೆ ಮತ್ತೊಂದು ಹೊಸ ದಿನಾಂಕವನ್ನು ನೀಡಲಾಗಿದೆ ಎಂದು ತಿಳಿದಿದೆ.
ಅಂಬಾನಿಯ ಸಮೂಹ ಕಂಪನಿಗಳು ಎನ್ಪಿಎ ಆಗಿ ಮಾರ್ಪಟ್ಟ ಬ್ಯಾಂಕಿನಿಂದ ಸುಮಾರು 12,800 ಕೋಟಿ ರೂ.ಗಳವರೆಗೂ ಸಾಲವನ್ನು ಪಡೆದಿದೆ ಎಂದು ಹೇಳಲಾಗಿದೆ.
ಮಾರ್ಚ್ 6 ರಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಯೆಸ್ ಬ್ಯಾಂಕ್ ಆರ್ಥಿಕ ನಷ್ಟಕ್ಕೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿ ನಡೆಸಿದ್ದರು. ಈ ವೇಳೆ ಅನಿಲ್ ಅಂಬಾನಿ ಗ್ರೂಪ್, ಎಸ್ಸೆಲ್, ಐಎಲ್ಎಫ್ಎಸ್, ಡಿಹೆಚ್ಎಫ್ಎಲ್ ಮತ್ತು ವೊಡಾಫೋನ್ ಒತ್ತಡಕ್ಕೊಳಗಾದ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಯೆಸ್ ಬ್ಯಾಂಕ್ ವ್ಯವಹಾರ ನಡೆಸಿದೆ ಎಂದು ತಿಳಿಸಿದ್ದರು.