ಅಕ್ರಮ ಹಣ ವರ್ಗಾವಣೆ ವಿರುದ್ಧ ಇ.ಡಿ ಕೇಸ್: ಶರದ್ ಪವಾರ್ಗೆ ಸಂಕಷ್ಟ
ನವದೆಹಲಿ, ಸೆಪ್ಟೆಂಬರ್ 24: ಕಾಂಗ್ರೆಸ್ ಮುಖಂಡರಾದ ಪಿ. ಚಿದಂಬರಂ ಮತ್ತು ಡಿಕೆ ಶಿವಕುಮಾರ್ ಅವರ ವಿರುದ್ಧ ಅಕ್ರಮ ಹಣವರ್ಗಾವಣೆಯ ಪ್ರಕರಣಗಳು ದಾಖಲಾದ ಬೆನ್ನಲ್ಲೇ, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ವಿರುದ್ಧವೂ ಅಕ್ರಮ ಹಣ ವರ್ಗಾವಣೆಯ ಪ್ರಕರಣ ದಾಖಲಾಗಿದೆ.
ಜಾರಿ ನಿರ್ದೇಶನಾಲಯವು (ಇ.ಡಿ) ಶರದ್ ಪವಾರ್, ಅವರ ಸೊದರಳಿಯ ಮತ್ತು ಮಾಜಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಹಾಗೂ ಇತರರ ವಿರುದ್ಧ ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ಗೆ (ಎಂಎಸ್ಸಿಬಿ) ಸಂಬಂಧಿಸಿದ 25,000 ಕೋಟಿ ರೂ. ಮೊತ್ತದ ಹಗರಣದ ಆರೋಪದಲ್ಲಿ ಅಪರಾಧ ಪ್ರಕರಣ ದಾಖಲಿಸಿದೆ.
ಪಾಕಿಸ್ತಾನದ ವಿರುದ್ಧ ಕೇಂದ್ರ ಸರಕಾರದಿಂದ ಸುಳ್ಳು ಅಪಪ್ರಚಾರ: ಶರದ್ ಪವಾರ್
ಪೊಲೀಸರ ಎಫ್ಐಆರ್ಗೆ ಸರಿಸಮವಾದ ಜಾರಿ ಪ್ರಕರಣ ಮಾಹಿತಿ ವರದಿಯನ್ನು (ಇಸಿಐಆರ್) ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿ ಶರದ್ ಪವಾರ್ ಮತ್ತು ಇತರೆ ಎಲ್ಲ ಆರೋಪಿಗಳ ವಿರುದ್ಧ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಬ್ಯಾಂಕ್ನ ನಿರ್ದೇಶಕರು, ಮಾಜಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಸಹಕಾರ ಬ್ಯಾಂಕ್ನ 70 ಮಾಜಿ ಪದಾಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಮುಂಬೈ ಪೊಲೀಸರ ಎಫ್ಐಆರ್ ಆಧರಿಸಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಸಿಐಆರ್ ದಾಖಲಿಸಿದ್ದಾರೆ.
ಆರೋಪಿಗಳ ಹೇಳಿಕೆಗಳನ್ನು ದಾಖಲಿಸುವ ಉದ್ದೇಶದಿಂದ ಇ.ಡಿ ಶೀಘ್ರದಲ್ಲಿಯೇ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಲಿದೆ.
ನಟರಾಜ್ ವಾದ: ಡಿಕೆಶಿ ವಿಚಾರಣೆ ಕುರಿತ ಕೆಲವು ಇಂಟರೆಸ್ಟಿಂಗ್ ಸಂಗತಿಗಳು
ಬಾಂಬೆ ಹೈಕೋರ್ಟ್ನ ಸೂಚನೆಯಂತೆ ಮುಂಬೈ ಪೊಲೀಸರು ಕಳೆದ ತಿಂಗಳು ಅಜಿತ್ ಪವಾರ್ ಮತ್ತು ಇತರರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. 2007-2011ರ ಅವಧಿಯಲ್ಲಿ ಆರೋಪಿಗಳು ಬ್ಯಾಂಕ್ಗೆ ಸುಮಾರು 1,000 ಕೋಟಿ ನಷ್ಟ ಉಂಟಾಗುವಂತೆ ಅವ್ಯವಹಾರ ನಡೆಸಿದ್ದರು ಎಂದು ಆರೋಪಿಸಲಾಗಿದೆ.
ಆರ್ಥಿಕವಾಗಿ ದುಸ್ಥಿತಿಯಲ್ಲಿದ್ದರೂ ಯಾವುದೇ ಸಾಲ ತೀರುವಳಿ ಸಾಮರ್ಥ್ಯ ಹೊಂದಿಲ್ಲದ ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಸಾಲ ನೀಡುವುದರಲ್ಲಿ ಅಕ್ರಮಗಳು ನಡೆದಿವೆ. ಈ ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಕೆಲವು ರಾಜಕಾರಣಿಗಳ ಸಂಬಂಧಿಕರಿಗೆ ಮಾರಾಟ ಮಾಡಲಾಗಿತ್ತು ಎಂದು ಆರೋಪ ಮಾಡಲಾಗಿದೆ.