ಮಹಾರಾಷ್ಟ್ರದ ಕೊಯ್ನಾ ಜಲಾಶಯದ ಬಳಿ ಲಘು ಭೂಕಂಪ
ಸತಾರಾ, ಆಗಸ್ಟ್ 2: ಮಹಾರಾಷ್ಟ್ರದ ಕೊಯ್ನಾ ಡ್ಯಾಂ ಬಳಿಕ ಲಘು ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.9 ತೀವ್ರತೆ ದಾಖಲಾಗಿದೆ.
ಇದು 105 ಟಿಎಂಸಿ ಸಾಮರ್ಥ್ಯವಿರುವ ಜಲಾಶಯವಾಗಿದೆ. ಭೂಕಂಪ ಸಂಭವಿಸಿದ ಹಿನ್ನೆಲೆಯಲ್ಲಿ ಜಲಾಶಯದಿಂದ ಹೆಚ್ಚುವರಿ ನೀರು ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಕೃಷ್ಣಾ ನದಿಗೆ ಹೆಚ್ಚುವರಿ ನೀರು ಬಿಡುಗಡೆ ಮಾಡಲಾಗುತ್ತದೆ ಎನ್ನುವ ಮಾಹಿತಿ ಲಬ್ಯವಾಗಿದೆ. ಜಲಾಶಯಕ್ಕೆ ಧಕ್ಕೆಯಾದರೆ ಕರ್ನಾಟಕಕ್ಕೂ ಅಪಾಯ ಸಂಭವಿಸುವ ಎಲ್ಲಾ ಸಾಧ್ಯತೆ ಇದೆ. ಸತಾರ ಜಿಲ್ಲೆಯ ಪಾಟಣ ತಾಲೂಕಿನ ಕೊಯ್ನಾ ಡ್ಯಾಂ ಬಳಿ ಭೂಕಂಪ ಸಂಭವಿಸಿದೆ.
ಕೊಯ್ನಾ ಜಲಾಶಯದಿಂದ 20 ಕಿ.ಮೀ ದೂರದಲ್ಲಿ ಈ ಭೂಕಂಪ ಸಂಭವಿಸಿದ್ದು, ಜನರು ಆತಂಕಕ್ಕೀಡಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ಕೆಲವೇ ನಿಮಿಷಗಳ ಅಂತರದಲ್ಲಿ 2 ಬಾರಿ ಭೂಕಂಪ
1967ರ ಡಿಸೆಂಬರ್ 11 ಕೊಯ್ನಾ ಜಲಾಶಯದ 5 ಕಿ.ಮೀ ವ್ಯಾಪ್ತಿಯಲ್ಲಿ ಸಂಭವಿಸಿದ್ದ 7.5 ಮ್ಯಾಗ್ನಿಟ್ಯೂಡ್ ಭಾರಿ ಭೂಕಂಪಕ್ಕೆ 200 ಮಂದಿ ಮೃತಪಟ್ಟಿದ್ದರು. ಹಲವು ಮಂದಿಗೆ ಗಾಯಗಳಾಗಿತ್ತು.ಜುಲೈ 25ರಂದು ಕೆಲವೇ ನಿಮಿಷಗಳ ಅಂತರದಲ್ಲಿ ಎರಡು ಭೂಕಂಪಗಳು ಮಹಾರಾಷ್ಟ್ರದಲ್ಲಿ ಸಂಭವಿಸಿದ್ದವು.
ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯಲ್ಲಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಭೂಕಂಪನದ ಅನುಭವವಾಗಿದೆ. ಮೊದಲ ಭೂಕಂಪನವು 1.03 ಗಂಟೆಗೆ ನಡೆದಿದ್ದು, ರಿಕ್ಟರ್ ಮಾಪಕದಲ್ಲಿ 3.8ರಷ್ಟು ತೀವ್ರವಾಗಿತ್ತು.
ಎರಡನೇಯ ಭೂಕಂಪವು 1.15ರ ಸುಮಾರಿಗೆ ನಡೆದಿತ್ತು. ಇದು ಕೂಡಾ ಲಘು ಭೂಕಂಪವೇ ಆಗಿದ್ದು, ಇದರ ತೀವ್ರತೆ 3.6ರಷ್ಟು ರಿಕ್ಟರ್ ಮಾಪಕದಲ್ಲಿ ದಾಖಲಾಗಿತ್ತು.
ಈ ಪ್ರದೇಶದಲ್ಲಿ 2018ರಿಂದ ಪದೇ ಪದೇ ಭೂಕಂಪನದ ಅನುಭವವಾಗುತ್ತಿದೆ. ಭೂಕಂಪನದ ಮೂಲ ದುಧಲ್ವಾಡಿ ಗ್ರಾಮದಲ್ಲಿದೆ ಎಂದು ವರದಿಯಾಗಿದೆ. ರಿಕ್ಟರ್ ಮಾಪಕದಲ್ಲಿ ಮೊದಲು 3.8 ಹಾಗೂ 3.6 ಮ್ಯಾಗ್ನಿಟ್ಯೂಟ್ ದಾಖಲಾಗಿದೆ.