ಕೊಯ್ನಾ ಜಲಾಶಯದ ಸಮೀಪ ಭೂಕಂಪ: ಕರ್ನಾಟಕಕ್ಕೂ ಆಪತ್ತು
ಸತಾರಾ, ಡಿಸೆಂಬರ್ 23: ಮಹಾರಾಷ್ಟ್ರದ ಸತಾರದ ಬಳಿ ಇರುವ ಕೊಯ್ನಾ ಜಲಾಶಯದ ಸಮೀಪ ಇಂದು ಲಘು ಭೂಕಂಪ ಸಂಭವಿಸಿದೆ. ಇದರಿಂದ ಕೃಷ್ಣಾ ಜಲಾಶಯಕ್ಕೂ ಅಪಾಯವಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇಂದು ಬೆಳಗ್ಗೆ 6:42 ಕ್ಕೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪನದಲ್ಲಿ 2.8 ರಷ್ಟು ಭೂಕಂಪನ ದಾಖಲಾಗಿದೆ. ಕೊಯ್ನಾ ಜಲಾಶಯದ 8 ಕಿ.ಮೀಗಳವರೆಗೆ ಭೂಕಂಪನದ ಅನುಭವವಾಗಿದೆ ಎಂದು ಕೊಯ್ನಾ ಜಲಾಶಯದ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.
ಕೊಯ್ನಾ ಜಲಾಶಯಕ್ಕೆ ಯಾವುದೇ ಧಕ್ಕೆ ಆದರೂ ಅದರ ನೇರ ಎಫೆಕ್ಟ್ ಕರ್ನಾಟಕ ಹಾಗೂ ಮಹಾರಾಷ್ಟ್ರದ ಕೃಷ್ಣಾ ನದಿ ತೀರದ ಮೇಲೆ ಆಗಲಿದೆ. ಹೀಗಾಗಿ ಈ ವರ್ಷದಲ್ಲಿ ಎರಡು ಬಾರಿ ಈ ಪರಿಸರದಲ್ಲಿ ಭೂಕಂಪನ ಸಂಭವಿಸಿರುವ ಕಾರಣ ಮತ್ತೆ ಆತಂಕಕ್ಕೆ ಕಾರಣವಾಗಿದೆ. ಸದ್ಯ ಭೂಕಂಪನ ಸಂಭವಿಸಿದ್ದರೂ ಹೆಚ್ಚಿನ ನೀರನ್ನ ಜಲಾಶಯದಿಂದ ಹೊರ ಬಿಟ್ಟಿಲ್ಲ ಎಂದು ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.
105 ಟಿಎಂಸಿ ನೀರು ಸಂಗ್ರಹಣೆಯ ಕೊಯ್ನಾ ಜಲಾಶಯದಲ್ಲಿ ಈಗ 65 ಟಿಎಂಸಿಕ್ಕೂ ಹೆಚ್ಚು ಸಂಗ್ರಹ ಇದೆ. ಕೊಯ್ನಾ ಜಲಾಶಯದದಿಂದ ಹೆಚ್ಚಿನ ನೀರು ಹರಿದು ಬಂದು ಕೃಷ್ಣಾ ನದಿ ಸೇರಿಕೊಳ್ಳುತ್ತದೆ.
ಕೊಯ್ನಾ ಜಲಾಶಯದಿಂದ ಹೆಚ್ಚಿನ ನೀರು ಹರಿದು ಬಂದಾಗ ಕೃಷ್ಣಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ. ಹೀಗಾಗಿ ಕೊಯ್ನಾ ಜಲಾಶಯದ ಪರಿಸರದಲ್ಲಿ ಭೂಕಂಪನ ಹಿನ್ನೆಲೆಯಲ್ಲಿ ಕೊಯ್ನಾ ಹಾಗೂ ಕೃಷ್ಣಾ ನದಿ ತೀರದಲ್ಲಿ ಆತಂಕ ಎದುರಾಗಿದೆ.
ಕೊಯ್ನಾ ಜಲಾಶಯದಿಂದ ಎಂಟು ಕಿ.ಮೀ ದೂರದಲ್ಲಿ ಭೂಕಂಪದ ಕೇಂದ್ರ ಬಿಂದುವಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.