ಕಾಶ್ಮೀರಿ ಪಂಡಿತರಿಗೆ ಮಹಾರಾಷ್ಟ್ರದ ಬಾಗಿಲು ಸದಾ ತೆರೆದಿದೆ: ಆದಿತ್ಯ ಠಾಕ್ರೆ
ಮುಂಬೈ ಜೂನ್ 5: "ಕಾಶ್ಮೀರಿ ಪಂಡಿತರಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಅವರಿಗೆ ಮಹಾರಾಷ್ಟ್ರದ ಬಾಗಿಲು ಸದಾ ತೆರೆದಿದೆ,'' ಎಂದು ಮಹಾರಾಷ್ಟ್ರ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಹೇಳಿದರು.
"ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರು ಸೇರಿದಂತೆ ಹಿಂದೂಗಳ ಸರಣಿ ಹತ್ಯೆಗಳು ನಡೆಯುತ್ತಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಸುಸ್ಥಿರವಾಗಿಲ್ಲ. ಅಲ್ಲಿನ ಪರಿಸ್ಥಿತಿ ತುಂಬ ಹದಗೆಟ್ಟಿದೆ,'' ಎಂದರು.
"ಕಣಿವೆ ರಾಜ್ಯದಲ್ಲಿ ಕೆಲವು ದಶಕಗಳ ಹಿಂದೆ ಇದ್ದ ಹೀನಾಯ ಪರಿಸ್ಥತಿ ಪುನಃ ಮರುಕಳುಹಿಸುತ್ತಿದೆ. ಕಾಶ್ಮೀರಿ ಪಂಡಿತರ ಸುರಕ್ಷತೆ ಮತ್ತು ಭದ್ರತೆಯ ನಿಟ್ಟಿನಲ್ಲಿ ಕೇಂದ್ರ ಸರಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು,'' ಎಂದು ಆದಿತ್ಯ ಠಾಕ್ರೆ ಒತ್ತಾಯಿಸಿದರು.
"ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ. ಕಾಶ್ಮೀರಿ ಪಂಡಿತರಿಗೆ ಬೆಂಬಲಕ್ಕೆ ನಾವಿದ್ದೇವೆ. ಅವರಿಗೆ ಮಹಾರಾಷ್ಟ್ರದ ಬಾಗಿಲು ಯಾವಾಗಲು ತೆರೆದೇ ಇರುತ್ತದೆ. ಅವರು ಇಲ್ಲಿ ಬಂದು ನೆಲೆಸಿ, ತಮ್ಮ ಬದುಕು ಕಂಡುಕೊಳ್ಳಬಹುದು,'' ಎಂದು ಆದಿತ್ಯ ಠಾಕ್ರೆ ಹೇಳಿದರು.
ಕಾಶ್ಮೀರದಲ್ಲಿನ ಸರಣಿ ಹತ್ಯೆಗಳಿಗೆ ಪಾಕಿಸ್ತಾನವೇ ಕಾರಣ ಎಂದ ಗುಪ್ತಚರ ಇಲಾಖೆ!
ಭಾನುವಾರ ಬೆಳೆಗ್ಗೆಯಷ್ಟೇ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಸರಣಿ ಕೊಲೆಗಳು ಮತ್ತು ಕಣಿವೆ ರಾಜ್ಯದ ಸದ್ಯದ ಪರಿಸ್ಥಿತಿ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಬಿಜೆಪಿ ಮತ್ತು ಕೇಂದ್ರ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಬಿಜೆಪಿಯಿಂದ ಕೊಳಕು ರಾಜಕೀಯ
"ಕಾಶ್ಮೀರದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಬಿಜೆಪಿಗೆ ಸಾಧ್ಯವಿಲ್ಲ. ಆ ಪಕ್ಷಕ್ಕೆ ಕೇವಲ ಕೊಳಕು ರಾಜಕೀಯ ಮಾಡಲು ಬರುತ್ತದೆ. ದಯವಿಟ್ಟು ಕಾಶ್ಮೀರದ ವಿಷಯದಲ್ಲಿ ರಾಜಕೀಯ ಮಾಡದಿರಿ ಎಂದು ಅಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಹೇಳಿದರು. "ಉದ್ದೇಶಿತ ಹತ್ಯೆಗಳ ಮೂಲಕ ಕಾಶ್ಮೀರಿ ಪಂಡಿತರು ಜಮ್ಮು ಮತ್ತು ಕಾಶ್ಮೀರ ತೊರೆಯುವಂತೆ ಮಾಡಲಾಗುತ್ತಿದೆ. ಇಂಥ ಘಟನೆಗಳನ್ನು ತಡೆಯಲು ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಸೂಕ್ತ ಆಕ್ಷನ್ ಪ್ಲ್ಯಾನ್ ಸಿದ್ಧಪಡಿಸಿ, ಅದರಂತೆ ಕ್ರಮ ಜರುಗಿಸಬೇಕು,'' ಎಂದು ಒತ್ತಾಯಿಸಿದರು.
ಪ್ರತಿಭಟಿಸಲು ಸಹ ಅವಕಾಶ ಇಲ್ಲ
"ಹತ್ಯೆಗಳ ವಿರುದ್ಧ ಪ್ರತಿಭಟಿಸಲು ಸಹ ಬಿಜೆಪಿ ಸರಕಾರ ಕಾಶ್ಮೀರಿ ಪಂಡಿತರಿಗೆ ಅವಕಾಶ ನೀಡುತ್ತಿಲ್ಲ. ಅವರನ್ನು ನಿರ್ಬಂಧಿಸಲಾಗಿದೆ. ಅವರ ಹಕ್ಕುಗಳನ್ನು ಕಸಿಯಲಾಗಿದೆ,'' ಎಂದು ಅರವಿಂದ ಕೇಜ್ರಿವಾಲ್ ಆರೋಪಿಸಿದರು.
"ಕಾಶ್ಮೀರದಲ್ಲಿ ನೆಲೆಸಿರುವ ನಾಗರಿಕರಿಗೆ ಭದ್ರತೆ ಕಲ್ಪಿಸುವ ವಿಷಯದಲ್ಲಿ ಬಿಜೆಪಿ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ. 1990ರಲ್ಲಿ ಕಾಶ್ಮೀರದಲ್ಲಿದ್ದ ಪರಿಸ್ಥಿತಿ ಮರುಕಳಿಸುತ್ತಿದೆ. ಕಾಶ್ಮೀರಿ ಪಂಡಿತರು ತಮ್ಮ ನಿವಾಸಗಳನ್ನು ತೊರೆಯುವಂತೆ ಮಾಡಲಾಗುತ್ತಿದೆ,'' ಎಂದು ದೂರಿದರು.
ಕಾಶ್ಮೀರದಲ್ಲಿ ಪರಿಸ್ಥಿತಿ ನಿಭಾಯಿಸಲು ಬಿಜೆಪಿ ವಿಫಲ: ಅರವಿಂದ ಕೇಜ್ರಿವಾಲ್
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಹತ್ಯೆ
ಇತ್ತೀಚಿಗೆ ಉಗ್ರರು ಹಿಂದೂಗಳು ಮತ್ತು ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿಕೊಂಡು ಸರಣಿ ಹತ್ಯೆಗಳನ್ನು ಮಾಡುತ್ತಿದ್ದಾರೆ. ಇದರಿಂದ ಕಣಿವೆ ರಾಜ್ಯದಲ್ಲಿ ಹಿಂದೂಗಳು ಮತ್ತು ಕಾಶ್ಮೀರಿ ಪಂಡಿತರ ಮತ್ತೊಂದು ಸುತ್ತಿನ ವಲಸೆಗೆ ಕಾರಣವಾಗಿದೆ. ಇನ್ನೊಂದೆಡೆ ಪ್ರಧಾನಿಯವರ ಪರಿಹಾರ ಪ್ಯಾಕೇಜ್ ಅಡಿಯಲ್ಲಿ ಕೆಲಸ ಮಾಡುತ್ತಿರುವ ಅನೇಕ ಸರಕಾರಿ ನೌಕರರು ಕಾಶ್ಮೀರ ತೊರೆಯುತ್ತಿದ್ದಾರೆ.
ಉಗ್ರರಿಂದ ಬ್ಯಾಂಕ್ ಮ್ಯಾನೇಜರ್ ಹತ್ಯೆ
ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಗೋಪಾಲ್ಪೋರಾ ಪ್ರದೇಶದಲ್ಲಿ ಹಿಂದೂ ಮಹಿಳೆಯೊಬ್ಬರನ್ನು ಉಗ್ರರು ಗುಂಡಿಕ್ಕಿ ಕೊಂದಿದ್ದಾರೆ. ಇದಾದ ಎರಡು ದಿನಗಳ ನಂತರ ಕುಲ್ಗಾಮ್ ಜಿಲ್ಲೆಯಲ್ಲಿ ಜೂನ್ 2 ರಂದು ರಾಜಸ್ಥಾನ ಮೂಲದ ಬ್ಯಾಂಕ್ ಮ್ಯಾನೇಜರ್ ವಿಜಯ್ ಕುಮಾರ್ ಅವರನ್ನು ಉಗ್ರರು ಹತ್ಯೆ ಮಾಡಿದ್ದರು.
Recommended Video
ಕಾಶ್ಮೀರಿ ಪಂಡಿತರ ಸರಣಿ ಹತ್ಯೆ
ಇತ್ತೀಚಿಗೆ ರಜನಿ ಬಾಲಾ ಎಂಬ ಶಾಲಾ ಶಿಕ್ಷಕಿಯನ್ನು ಉಗ್ರರು ಹತ್ಯೆ ಮಾಡಿದ್ದರು. ಅವರು ತಮ್ಮ ಪತಿ ಮತ್ತು ಮಗಳೊಂದಿಗೆ ಜಮ್ಮು ವಿಭಾಗದ ಸಾಂಬಾದಲ್ಲಿ ವಾಸಿಸುತ್ತಿದ್ದರು. ಕಾಶ್ಮೀರದಲ್ಲಿ ಉದ್ದೇಶಿತ ಹತ್ಯೆಗಳ ಸರಣಿ ಮುಂದುವರಿದಿದೆ . ಕಳೆದ ವಾರ, ಬುದ್ಗಾಮ್ನ ಚದೂರ ಪ್ರದೇಶದಲ್ಲಿ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ಗುಂಡು ಹಾರಿಸಿದ ನಂತರ ಟಿವಿ ನಿರೂಪಕಿ ಅಮ್ರೀನ್ ಭಟ್ ಸಾವನ್ನಪ್ಪಿದ್ದರು. ಮೇ 12 ರಂದು ಬುದ್ಗಾಮ್ ಜಿಲ್ಲೆಯಲ್ಲಿ ಕಂದಾಯ ಇಲಾಖೆ ನೌಕರ ರಾಹುಲ್ ಭಟ್ ಅವರನ್ನು ಉಗ್ರರು ಹತ್ಯೆ ಮಾಡಿದ್ದರು.