ಹಿಂದುತ್ವದ ಪ್ರಮಾಣಪತ್ರ ನೀಡಬೇಕಿಲ್ಲ: ಉದ್ಧವ್ ಠಾಕ್ರೆ Vs ರಾಜ್ಯಪಾಲ ಕೋಶ್ಯಾರಿ ಯುದ್ಧ!
ಮುಂಬೈ, ಅಕ್ಟೋಬರ್ 13: ಮಹಾರಾಷ್ಟ್ರದಲ್ಲಿ ಈಗ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ನಡುವೆ 'ಜಾತ್ಯತೀತ' ಸಮರ ಶುರುವಾಗಿದೆ.
ಕೊರೊನಾ ವೈರಸ್ ಸೋಂಕಿನ ಭೀತಿ ನಡುವೆ ಧಾರ್ಮಿಕ ಕೇಂದ್ರಗಳನ್ನು ಪುನಃ ತೆರೆಯುವ ಸಂಬಂಧ ರಾಜ್ಯಪಾಲ ಕೋಶ್ಯಾರಿ ಬರೆದ ಪತ್ರಕ್ಕೆ ಉದ್ಧವ್ ಠಾಕ್ರೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ ರಾಜ್ಯಪಾಲ ಹಾಗೂ ಮಹಾರಾಷ್ಟ್ರ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದ ನಡುವಿನ ತಿಕ್ಕಾಟ ತೀವ್ರಗೊಳ್ಳುವ ಲಕ್ಷಣಗಳು ಕಂಡುಬಂದಿವೆ.
ಕಂಗನಾ ರಣಾವತ್ ಹೇಳಿದ ವಿಶ್ವದ ಅತ್ಯಂತ 'ಅಸಮರ್ಥ' ಮುಖ್ಯಮಂತ್ರಿ
ನೀವು 'ಜಾತ್ಯತೀತ'ರಾಗಿ ಬದಲಾಗಿದ್ದೀರಾ? ಎಂದು ಕೋಶ್ಯಾರಿ ಬರೆದ ವ್ಯಂಗ್ಯದ ಪತ್ರಕ್ಕೆ, 'ನಿಮ್ಮಿಂದ ನನಗೆ ಹಿಂದುತ್ವದ ಪ್ರಮಾಣಪತ್ರ ಬೇಕಾಗಿಲ್ಲ' ಎಂದು ಉದ್ಧವ್ ಠಾಕ್ರೆ ತಿರುಗೇಟು ನೀಡಿದ್ದಾರೆ. ಮುಂಬೈ ಅನ್ನು 'ಪಾಕಿಸ್ತಾನ ಆಕ್ರಮಿತ ಕಾಶ್ಮೀರ' ಎಂದು ಕರೆದ ವ್ಯಕ್ತಿಯನ್ನು ಸ್ವಾಗತಿಸಲು ಹಿಂದುತ್ವ ಅವರಿಗೆ ಅನುಮತಿ ನೀಡಿಲ್ಲ ಎಂದು ರಾಜ್ಯಪಾಲರಿಗೆ ಮರಳಿ ಬರೆದಿರುವ ಪತ್ರದಲ್ಲಿ ಉದ್ಧವ್ ಹೇಳಿದ್ದಾರೆ. ಹಿಂದೂ ಧಾರ್ಮಿಕ ಕೇಂದ್ರಗಳನ್ನು ತೆರೆಯುವ ಕುರಿತು ರಾಜ್ಯಪಾಲರು ಬರೆದ ಪತ್ರ ವ್ಯಾಪಕ ಟೀಕೆಗೆ ಒಳಗಾಗಿದೆ. ಮುಂದೆ ಓದಿ.
ನೀವು ಹಿಂದುತ್ವದ ಭಕ್ತರಲ್ಲವೇ?
ಉದ್ಧವ್ ಠಾಕ್ರೆಗೆ ಸೋಮವಾರ ಪತ್ರ ಬರೆದಿದ್ದ ಕೋಶ್ಯಾರಿ, ಧಾರ್ಮಿಕ ಸ್ಥಳಗಳನ್ನು ಇನ್ನೂ ತೆರೆಯದೆ ಇರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದರು. 'ನೀವು ಹಿಂದುತ್ವದ ದೊಡ್ಡ ಭಕ್ತರಾಗಿದ್ದೀರಿ. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಅಯೋಧ್ಯಾಕ್ಕೆ ಭೇಟಿ ನೀಡುವ ಮೂಲಕ ಶ್ರೀರಾಮನ ಕುರಿತಾದ ನಿಮ್ಮ ಭಕ್ತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಿದ್ದಿರಿ. ನೀವು ಪಂಡರಪುರದಲ್ಲಿ ವಿಠ್ಠಲ ರುಕ್ಮಿಣಿ ಮಂದಿರಕ್ಕೆ ಭೇಟಿ ನೀಡಿ ಆಷಾಢ ಏಕಾದಶಿಯಂದು ಪೂಜೆ ಮಾಡಿದ್ದಿರಿ' ಎಂದು ಬರೆದಿದ್ದರು.
ದೇವರು ಲಾಕ್ಡೌನ್ ಒಪ್ಪುತ್ತಿಲ್ಲ
ಬಾರ್ಗಳು ಮತ್ತು ರೆಸ್ಟೋರೆಂಟ್ಗಳನ್ನು ತೆರೆಯಲು ಅನುಮತಿ ನೀಡಿ ದೇವಸ್ಥಾನಗಳನ್ನು ಮುಚ್ಚಿರುವುದು ವ್ಯಂಗ್ಯವಾಗಿದೆ ಎಂದಿರುವ ಕೋಶ್ಯಾರಿ, 'ನಮ್ಮ ದೇವರು ಮತ್ತು ದೇವತೆಗಳು ಲಾಕ್ಡೌನ್ನಲ್ಲಿ ಇರುವುದನ್ನು ಖಂಡಿಸುತ್ತಿದ್ದಾರೆ. ಆರಾಧಾನಾ ಸ್ಥಳಗಳ ಸಮಯವನ್ನು ಮತ್ತೆ ತೆರೆಯುವುದನ್ನು ಮುಂದೂಡುತ್ತಲೇ ಇರುವಂತೆ ನಿಮಗೆ ಪೂರ್ವ ಸೂಚನೆಗಳು ಸಿಗುತ್ತಿದೆಯೇ ಎಂದು ಅಚ್ಚರಿಯಾಗುತ್ತಿದೆ ಅಥವಾ ನೀವು ತುಂಬಾ ದ್ವೇಷಿಸುವ ಪದವಾದ ಜಾತ್ಯತೀತರಾಗಿ ಬಿಟ್ಟಿದ್ದೀರಾ?' ಎಂದು ವ್ಯಂಗ್ಯಭರಿತ ಪತ್ರವನ್ನು ಬರೆದಿದ್ದರು.
'ನಾನು ಡೊನಾಲ್ಡ್ ಟ್ರಂಪ್ ಅಲ್ಲ' ಎಂದು ತಿರುಗೇಟು ನೀಡಿದ ಮಹಾರಾಷ್ಟ್ರ ಸಿಎಂ
ಎಲ್ಲಾ ಕಡೆ ತೆರೆಯಲಾಗಿದೆ
ದೇಶದ ಇತರೆ ಭಾಗಗಳಲ್ಲಿ ಧಾರ್ಮಿಕ ಕೇಂದ್ರಗಳು ಈಗಾಗಲೇ ತೆರೆದಿವೆ. ದೆಹಲಿಯಲ್ಲಿ ಜೂನ್ 8ರಂದು ಧಾರ್ಮಿಕ ಸ್ಥಳಗಳು ತೆರೆದಿದ್ದರೆ, ದೇಶದ ಎಲ್ಲೆಡೆ ಜೂನ್ ಅಂತ್ಯದ ವೇಳೆಗೆ ಪ್ರಾರಂಭವಾಗಿವೆ. ಈ ಯಾವ ಸ್ಥಳಗಳಲ್ಲಿಯೂ ಕೋವಿಡ್ 19 ಪ್ರಕರಣಗಳು ಹೆಚ್ಚಳವಾದ ವರದಿ ಬಂದಿಲ್ಲ. ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಧಾರ್ಮಿಕ ಕ್ಷೇತ್ರಗಳನ್ನು ತೆರೆಯಲು ಅವಕಾಶ ನೀಡಿ' ಎಂದು ಕೋಶ್ಯಾರಿ ಹೇಳಿದ್ದರು.
ಜಾತ್ಯತೀತತೆ ನಂಬುವುದಿಲ್ಲವೇ?
ಕೋಶ್ಯಾರಿ ಪತ್ರಕ್ಕೆ ಅಷ್ಟೇ ಖಾರವಾಗಿ ಉದ್ಧವ್ ಪ್ರತಿಕ್ರಿಯೆ ನೀಡಿದ್ದಾರೆ. 'ಧಾರ್ಮಿಕ ಕೇಂದ್ರಗಳನ್ನು ತೆರೆಯುವುದೇ ಹಿಂದುತ್ವ ಮತ್ತು ಅವುಗಳನ್ನು ತೆರೆಯದೆ ಇರುವುದು ಜಾತ್ಯತೀತತೆ ಎಂದು ನೀವು ಹೇಳುತ್ತೀರಾ? ನೀವು ರಾಜ್ಯಪಾಲರಾಗಿ ಸ್ವೀಕರಿಸಿದ ಪ್ರಮಾಣವಚನದ ಮಹತ್ವದ ಮೂಲವೇ ಜಾತ್ಯತೀತತೆ. ನೀವು ಅದನ್ನು ನಂಬುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಮುಂಬೈ ಖಾಲಿ ಮಾಡಿದ ಕಂಗನಾ: ಶಿವಸೇನೆ, ಮಹಾ ಸರಕಾರದ ಮುಂದೆ ಮಂಡಿ ಊರಿದರೇ?
ಹಿಂದುತ್ವ ಕಲಿಯಬೇಕಿಲ್ಲ
'ಸರ್ ನೀವು ನಿಮ್ಮ ಪತ್ರದಲ್ಲಿ ಹಿಂದುತ್ವದ ಬಗ್ಗೆ ಪ್ರಸ್ತಾಪ ಮಾಡಿದ್ದೀರಿ. ಆದರೆ ನನಗೆ ನಿಮ್ಮಿಂದ ಯಾವುದೇ ಪ್ರಮಾಣಪತ್ರ ಅಥವಾ ಹಿಂದುತ್ವದ ಬಗ್ಗೆ ಯಾವುದೇ ಬೋಧನೆಯ ಅಗತ್ಯವಿಲ್ಲ' ಎಂದು ಠಾಕ್ರೆ ಹೇಳಿದ್ದಾರೆ.
Recommended Video
ಕಂಗನಾ ರಣಾವತ್ ಭೇಟಿಯ ಟೀಕೆ
ಕಳೆದ ತಿಂಗಳು ನಟಿ ಕಂಗನಾ ರಣಾವತ್ ಅವರನ್ನು ಕೋಶ್ಯಾರಿ ಭೇಟಿ ಮಾಡಿದ್ದ ಘಟನೆಯನ್ನು ಟೀಕಿಸಿದ ಠಾಕ್ರೆ, 'ನನ್ನ ಮಹಾರಾಷ್ಟ್ರ ಅಥವಾ ಮುಂಬೈ ಅನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಎಂದು ಕರೆದ ವ್ಯಕ್ತಿಯನ್ನು ಸ್ವಾಗತಿಸುವುದನ್ನು ನನ್ನ ಹಿಂದುತ್ವ ನನಗೆ ಅನುಮತಿ ನೀಡುವುದಿಲ್ಲ' ಎಂದಿದ್ದಾರೆ.
ಧಾರ್ಮಿಕ ಸ್ಥಳಗಳನ್ನು ತೆರೆಯುವ ಬೇಡಿಕೆಯನ್ನು ಪರಿಗಣಿಸಲಾಗುತ್ತಿದೆ. ಆದರೆ ಜನರ ಸುರಕ್ಷತೆ ತಮ್ಮ ಆದ್ಯತೆಯಾಗಿದೆ. ದೇಶದಲ್ಲಿ ಅತಿ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳು ಮಹಾರಾಷ್ಟ್ರ ರಾಜ್ಯದಲ್ಲಿ ದಾಖಲಾಗಿವೆ ಎಂದು ಠಾಕ್ರೆ ಹೇಳಿದ್ದಾರೆ.