ಜಾತಿ ನಿಂದನೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ವೈದ್ಯೆ
ಮುಂಬೈ, ಮೇ 27: ಜಾತಿ ನಿಂದನೆ ಮಾಡಿದ್ದರಿಂದ ಮನನೊಂದು ಯುವ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಬೈನಲ್ಲಿ ನಡೆದಿದೆ.
23 ವರ್ಷದ ಪಾಯಲ್ ಸಲ್ಮಾನ್ ತಾಡ್ವಿ ಅವರು ತಮ್ಮ ಹಿರಿಯ ವೈದ್ಯೆಯರು ತಮ್ಮ ವಿರುದ್ಧ ಸತತವಾಗಿ ಮಾಡುತ್ತಿದ್ದ ಜಾತಿ ನಿಂದನೆಯಿಂದ ನೊಂದು ಆತ್ಮಹತ್ಯೆ ಮಾಡಿದ್ದಾರೆ. ಹೀಗೆಂದು ಪಾಯಲ್ ಅವರ ತಾಯಿ ಮುಂಬೈ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿದ್ದಾರೆ.
ಪಾಟೀದಾರ್ ವಿರೋಧ, ಪೊಲೀಸ್ ಭದ್ರತೆಯಲ್ಲಿ ದಲಿತನ ಮದುವೆ
ಪಾಯಲ್ ಅವರು ಬಿವೈಎಲ್ ನಾಯರ್ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಮತ್ತೆ ಅದೇ ಆಸ್ಪತ್ರೆಯ ವಸತಿನಿಲಯದಲ್ಲಿ ಮೂವರು ಹಿರಿಯ ವೈದ್ಯೆಯರು ragging ಮಾಡುತ್ತಾರೆ, ಜಾತಿ ನಿಂದನೆ ಮಾಡುತ್ತಾರೆ ಎಂದು ಪಾಯಲ್ ತಮ್ಮ ತಾಯಿಯ ಹೇಳಿದ್ದಾಗಿ ದೂರಿನಲ್ಲಿ ಪಾಯಲ್ ತಾಯಿ ಉಲ್ಲೇಖಿಸಿದ್ದಾರೆ.
ಹೇಮಾ ಅಹೂಜಾ, ಭಕ್ತಿ ಮೆಹರ್, ಅಂಕಿತಾ ಕಂಡಿಲ್ವಾಲಾ ಮೂವರು ವೈದ್ಯೆಯರ ಮೇಲೆ ಜಾತಿ ನಿಂದನೆಯ ಆರೋಪ ಮಾಡಲಾಗಿದ್ದು, ಅವರ ಮೇಲೆ ಪ್ರಕರಣ ದಾಖಲಾಗಿದೆ. ಮಹಾರಾಷ್ಟ್ರ ವೈದ್ಯರ ಸಂಘವು ಈ ಮೂವರ ವೈದ್ಯ ಪರವಾನಗಿಯನ್ನು ರದ್ದು ಮಾಡಿದೆ.
ತಮ್ಮ ಮಗಳ ಮೇಲೆ ಜಾತಿ ನಿಂದನೆ ಆಗುತ್ತಿರುವ ಬಗ್ಗೆ ಆಸ್ಪತ್ರೆ ಆಡಳಿತಕ್ಕೆ ಈಗಾಗಲೇ ದೂರು ನೀಡಿದ್ದರೂ ಅವರು ಸೂಕ್ತವಾಗಿ ಸ್ಪಂದಿಸಿಲ್ಲ ಎಂದು ಪಾಯಲ್ ಅವರ ತಾಯಿ ಆರೋಪಿಸಿದ್ದಾರೆ.
ಆದರೆ ಇದನ್ನು ನಿರಾಕರಿಸಿರುವ ಆಸ್ಪತ್ರೆಯ ಆಡಳಿತ ಮಂಡಳಿ, ಈವರೆಗೆ ನಮಗೆ ಯಾವುದೇ ದೂರು ಬಂದಿಲ್ಲ. ದೂರು ಬಂದಿದ್ದಾದಲ್ಲಿ ಆಸ್ಪತ್ರೆಯಲ್ಲಿ ರ್ಯಾಗಿಂಗ್ ತಡೆ ಸ್ಕ್ವಾಡ್ ಇದ್ದು, ಅದರ ಮೂಲಕ ನಾವು ಕ್ರಮ ಕೈಗೊಳ್ಳುತ್ತಿದ್ದೆವು ಎಂದಿದೆ.
ಮೂವರು ಆರೋಪಿ ವೈದ್ಯರು ತಮ್ಮ ಮೇಲಿನ ಆರೋಪಗಳನ್ನು ತಳ್ಳಿ ಹಾಕಿದ್ದು, ಮುಂಬೈ ವೈದ್ಯರ ಅಸೋಸಿಯೇಶನ್ ಗೆ ಪತ್ರ ಬರೆದು 'ನ್ಯಾಯಯುತ ತನಿಖೆ'ಗೆ ಒತ್ತಾಯಿಸಿದ್ದಾರೆ. ಹಿರಿಯ ವೈದ್ಯರು ನೀಡುವ ಕೆಲಸವನ್ನು ragging ಎಂದು ಪರಿಗಣಿಸಲು ಹೇಗೆ ಸಾಧ್ಯ. ವೈದ್ಯರಿಗೆ ಹೆಚ್ಚಿನ ಒತ್ತಡ ಇರುವುದು ಗೊತ್ತಿರುವ ವಿಷಯ ನಾವೂ ಸಹ ಆಕೆಗೆ ಎಲ್ಲರಂತೆ ಕೆಲಸಗಳನ್ನು ಹಂಚಿದ್ದೆವು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.