ಮಕ್ಕಳನ್ನು ಕಾಮತೃಷೆಗೆ ಬಳಸುವವರ ಬಂಧನವೇಕಿಲ್ಲ?
ಮುಂಬೈ, ಡಿಸೆಂಬರ್ 06 : ಹೆಣ್ಣನ್ನು ತಾಯಿ, ಸಹೋದರಿ, ಸ್ನೇಹಿತೆಯಾಗಿ ಗೌರವದಿಂದ ಕಾಣುವ ಸಮಾಜ ನಮ್ಮದು. ಆದರೆ, ಕೆಲ ದುರುಳರು ಮಹಿಳೆಯನ್ನು ಕಾಮತೃಷೆಗಾಗಿ ಬಳಸುವ ವಸ್ತುವನ್ನಾಗಿ ಮಾಡಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ.
ಹೆಣ್ಣುಮಕ್ಕಳನ್ನು ರಕ್ಷಿಸಬೇಕಾದ ಸಮಾಜವೇ ಇಂದು ಅವರು ಲೈಂಗಿಕವಾಗಿ ಹುರಿದು ಮುಕ್ಕುತ್ತಿದೆ. ಕಂಡಕಂಡಲ್ಲಿ ಲಂಗುಲಗಾಮಿಲ್ಲದಂತೆ ದೌರ್ಜನ್ಯಗಳು ನಡೆಯುತ್ತಿವೆ. ಸಿಕ್ಕಿಬಿದ್ದವರಿಗೆ ಶಿಕ್ಷೆಯೂ ಆಗುತ್ತಿದೆ. ತಮಗೆ ಶಿಕ್ಷೆಯಾಗುತ್ತದೆಂಬ ಹೆದರಿಕೆಯೂ ಕಾಮಪಶುಗಳಿಗೆ ಇಲ್ಲ.
ಬೆಂಗಳೂರು: ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ದಂಧೆ, ಐವರ ಬಂಧನ
ಅದರಲ್ಲಿಯೂ ಅಪ್ರಾಪ್ತ ವಯಸ್ಕ ಹೆಣ್ಣುಮಕ್ಕಳನ್ನು ಕೇವಲ 100 ರುಪಾಯಿ ಇಕ್ಕಿ ಮುಕ್ಕಲಾಗುತ್ತಿದೆ ಎಂಬುದು ನಾಚಿಕೆಗೇಡಿನ ಸಂಗತಿ. ಇದಕ್ಕೆ ಆಯಾ ರಾಜ್ಯಗಳ ಸರಕಾರಗಳು ಕೈಗೊಂಡಿರುವ ಕಠಿಣ ಕ್ರಮವಾದರೂ ಯಾವುದು? ಕಾಮಪಶುಗಳಿಗೆ ನಿಜವಾಗಿಯೂ ಶಿಕ್ಷೆಯಾಗುತ್ತಿದೆಯಾ?
ಅಪ್ರಾಪ್ತ ವಯಸ್ಕ ಹೆಣ್ಣುಮಕ್ಕಳನ್ನು ಕಾಮದ ವಸ್ತುವನ್ನಾಗಿ ಮಾಡಿ, ಕಾನೂನಿನ ಭಯವಿಲ್ಲದೆ ಓಡಾಡುತ್ತಿರುವ ಕಾಮಪಿಶಾಚಿಗಳನ್ನು ಹೆಡೆಮುರಿ ಕಟ್ಟಲು ಪೊಲೀಸರಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಕಟ್ಟುನಿಟ್ಟಿನ ಆಜ್ಞೆ ನೀಡಬೇಕೆಂದು ಚೇಂಜ್ ಡಾಟ್ ಆರ್ಗ್ ನಲ್ಲಿ ಅರ್ಜಿ ಹಾಕಲಾಗಿದೆ.
ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ : ಭೋಪಾಲ್ ಅತ್ಯಾಚಾರ ಸಂತ್ರಸ್ತೆ
ಆ ಅರ್ಜಿಯಲ್ಲಿರುವ ಘಟನಾವಳಿಗಳನ್ನು ಓದಿದರೆ ಎಂಥವರಿಗೂ ರಕ್ತ ಕುದಿಯದೆ ಇರದು, ಕಾಮತೃಷೆಯ ವಸ್ತುವಾಗಿರುವ ಏನೂ ಅರಿಯದ ಹೆಣ್ಣುಮಕ್ಕಳ ಬಗ್ಗೆ ಮಮ್ಮಲ ಮರುಗದೆ ಇರಲಾಗದು. ಆ ಆನ್ ಲೈನ್ ಅರ್ಜಿಯ ವಿವರಗಳು ಕೆಳಗಿನಂತಿವೆ.
ರತಿಗೆ ಹಾರ್ಮೋನ್ ಇಂಜೆಕ್ಷನ್ ನೀಡಲಾಗಿತ್ತು
ರತಿ (ಹೆಸರು ಬದಲಿಸಲಾಗಿದೆ) ಎಂಬ 14 ವರ್ಷದ ಬಾಲಕಿ ತನ್ನ ವಯಸ್ಸಿಗಿಂತ ದೊಡ್ಡವಳಾಗಿ ಕಾಣಲೆಂದು ಹಾರ್ಮೋನ್ ಇಂಜೆಕ್ಷನ್ ನೀಡಲಾಗಿತ್ತು. ಹಾಗೆ ಕಾಣಲೂ ಆರಂಭಿಸದಳು. ಆದರೆ, ಆಕೆಯನ್ನು ತಳ್ಳಲಾಗಿದ್ದಾದರೂ ಎಲ್ಲಿಗೆ? ವೇಶ್ಯಾವಾಟಿಕೆ ಮನೆಗೆ! ದಿನದಿಂದ ದಿನಕ್ಕೆ ಆಕೆಯ ಕಣ್ಣೀರು ಕಪಾಳಕ್ಕಿಳಿಯಲೂ ನಿರಾಕರಿಸುತ್ತಿತ್ತು.
30 ಕಾಮಪಿಪಾಸುಗಳಿಗೆ ಆಹಾರವಾಗುತ್ತಿದ್ದಳು
ಆಕೆ ಪ್ರತಿದಿನ ಕನಿಷ್ಠ 30 ಕಾಮಪಿಪಾಸುಗಳ ದಾಹಕ್ಕೆ ಆಹಾರವಾಗುತ್ತಿದ್ದಳು. ವೇಶ್ಯಾವಾಟಿಗೆ ಮನೆಗೆ ರಿಕ್ಷಾವಾಲಾಗಳಿಂದ ಹಿಡಿದು, ಮ್ಯಾನೇಜರ್ ಗಳವರೆಗೆ, ಕೂಲಿಕಾರರಿಂದ ಹಿಡಿದು ಸಮಾಜದ ದೊಡ್ಡ ಮುಖಗಳು ಸಹ ವೇಶ್ಯಾವಾಟಿಕೆ ಮನೆಗೆ ಹಾಜರಾಗುತ್ತಿದ್ದರು. ಈ ಎಲ್ಲರಿಗೂ ರತಿ ಆಟದ ಗೊಂಬೆಯಾಗಿದ್ದಳು. ಏನೂ ಮಾಡುವಂತಿರಲಿಲ್ಲ.
ರಸ ಕಳೆದುಕೊಂಡು ಹಿಪ್ಪೆಯಂತಾಗಿದ್ದ ರತಿ
ವೇಶ್ಯಾವಾಟಿಕೆ ಮನೆಗೆ ಪೊಲೀಸರು ದಾಳಿ ಮಾಡಿದಾಗ ಸಿಕ್ಕಿಬಿದ್ದಿದ್ದು ಕಬ್ಬಿನಂತೆ ರಸ ಕಳೆದುಕೊಂಡು ಹಿಂಡಿ ಹಿಪ್ಪೆಯಾಗಿದ್ದ ರತಿ ಮತ್ತು ಹಣ ಕೀಳುವ ಮ್ಯಾನೇಜರುಗಳು. ಸಿಕ್ಕಿಬಿದ್ದ ವಿಟಪುರುಷರನ್ನು ಕೇವಲ ಎಚ್ಚರಿಕೆ ನೀಡಿ ಸಾಗಹಾಕಲಾಗಿತ್ತು. ನಾಚಿಕೆಯಿಲ್ಲದ ವಿಟಪುರುಷರು ಮರುದಿನ ಮತ್ತೆ ಜೊಲ್ಲುಸುರಿಸಿಕೊಂಡು ಹಾಜರಾಗುತ್ತಿದ್ದರು.
ವಿಟಪುರುಷರ ಬಂಧನಕ್ಕಾಗಿ ಆನ್ ಲೈನ್ ಅರ್ಜಿ
ಮಹಾರಾಷ್ಟ್ರ ಸರಕಾರ ಮಾನವ ಕಳ್ಳ ಸಾಗಾಣಿಕೆ ವಿರೋಧಿ ಘಟಕಗಳನ್ನು ಸ್ಥಾಪಿಸಿದ್ದು, ರತಿಯಂಥ ಮಹಿಳೆಯರನ್ನು ರಕ್ಷಿಸಿ, ಪುನರ್ವಸತಿ ಕಲ್ಪಿಸುವ ಕಾಯಕಕ್ಕೆ ಮುಂದಾಗಿದೆಯಾದರೂ ಅಪ್ರಾಪ್ತ ವಯಸ್ಕ ಮಕ್ಕಳನ್ನು ಮುಕ್ಕುತ್ತಿರುವ ವಿಟಪುರುಷರನ್ನು ಬಂಧಿಸಿ, ಅವರನ್ನು ಶಿಕ್ಷಿಸುವ ಕೆಲಸಕ್ಕೆ ಮುಂದಾಗಿಲ್ಲ.
ನಾಚಿಕೆ, ಭಯವಿಲ್ಲದೆ ಅಡ್ಡಾಡುತ್ತಿದ್ದಾರೆ
ವಿಟಪುರುಷರಲ್ಲಿ ಕೆಲವರನ್ನು ವೇಶ್ಯಾವಾಟಿಕೆ ಪ್ರಕರಣದ ಸಾಕ್ಷಿಗಳನ್ನಾಗಿ ಮಾಡುತ್ತಿರುವುದರಿಂದ ಅವರು ಯಾವುದೇ ನಾಚಿಕೆ, ಭಯವಿಲ್ಲದೆ ಆರಾಮವಾಗಿ ಅಡ್ಡಾಡುತ್ತಿದ್ದಾರೆ. ಆದ್ದರಿಂದ ಇಂಥ ಕಾಮಪಿಪಾಸುಗಳನ್ನು ಬಂಧಿಸಿ, ಅವರಿಗೆ ಶಿಕ್ಷೆ ವಿಧಿಸುವಂತಾಗಬೇಕು ಎಂಬ ಕಾರಣದಿಂದ ಈ ಅರ್ಜಿ ಹಾಕುತ್ತಿದ್ದೇನೆ ಎಂದು ಶೈನಾ ಎನ್ಸಿ ಎಂಬುವವರು ಹೇಳಿದ್ದಾರೆ.
ಕೆಂಪು ದೀಪದ ಪ್ರದೇಶಗಳಲ್ಲಿ ಮಾತ್ರವಲ್ಲ
ಇಂಥ ಕೃತ್ಯಗಳು ಬರೀ ಕೆಂಪು ದೀಪದ ಪ್ರದೇಶಗಳಲ್ಲಿ ಮಾತ್ರ ನಡೆಯುತ್ತಿಲ್ಲ. ಅಪಾರ್ಟ್ಮೆಂಟುಗಳಲ್ಲಿ, ಖಾಸಗಿ ಅತಿಥಿ ಗೃಹಗಳಲ್ಲಿ, ಜನನಿಬಿಡ ಪ್ರದೇಶಗಳಲ್ಲಿರುವ ಮನೆಗಳಲ್ಲಿಯೇ ಅವ್ಯಾಹತವಾಗಿ ನಡೆಯುತ್ತಿವೆ. ಇದಕ್ಕೆ ಪುಟ್ಟ ಬಾಲಕಿಯರು ಬಲಿಯಾಗುತ್ತಿದ್ದಾರೆ. ಗ್ರಾಹಕರಿಗೆ ಬೇಡಿಕೆ ಇರುವುದರಿಂದ ಲೈಂಗಿಕ ದೌರ್ಜನ್ಯಗಳು ಎಗ್ಗುಸಿಗ್ಗಿಲ್ಲದೆ ನಡೆಯುತ್ತಲೇ ಇವೆ.
ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಲೇ ಇವೆ
ಅಕ್ರಮ ವೇಶ್ಯಾವಾಟಿಕೆಗಳನ್ನು ಹದ್ದುಬಸ್ತಿನಲ್ಲಿಡಲು ಮಹಾರಾಷ್ಟ್ರ ಸರಕಾರ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ. 2011ರಲ್ಲಿ ಎಲ್ಲೆಲ್ಲಿ ಮಕ್ಕಳನ್ನು ಶೋಷಣೆಗೊಳಪಡಿಸಲಾಗುತ್ತಿತ್ತೋ ಅಂಥ 78ಕ್ಕೂ ಹೆಚ್ಚು ಅಕ್ರಮ ವೇಶ್ಯಾವಾಟಿಕೆ ಗೃಹಗಳನ್ನು ಮುಚ್ಚಲಾಗಿತ್ತು. ಆದರೂ ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಲೇ ಇವೆ.
ಪರಿಹಾರ ಮಾತ್ರ ಸಿಗುತ್ತಿಲ್ಲ
ಬರೀ ವೇಶ್ಯಾವಾಟಿಕೆ ನಡೆಸುತ್ತಿರುವವರನ್ನು ಮತ್ತು ಭಾಗಿಯಾಗಿರುವ ಹೆಣ್ಣುಮಕ್ಕಳನ್ನು ಬಂಧಿಸುವುದರಿಂದ ಈ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಬದಲಾಗಿ ಪುಟ್ಟ ಹೆಣ್ಣುಮಕ್ಕಳನ್ನು ಕಾಮತೃಷೆಗೆ ಬಳಸುತ್ತಿರುವ ವಿಟಪುರುಷರನ್ನು ಬಂಧಿಸಬೇಕೆಂಬುದು ಆನ್ ಲೈನ್ ಅರ್ಜಿಯ ಆಗ್ರಹವಾಗಿದೆ. ಇದಕ್ಕೆ ಈಗಾಗಲೆ 25 ಸಾವಿರಕ್ಕೂ ಹೆಚ್ಚು ಜನರು ಸಹಿ ಹಾಕಿದ್ದಾರೆ.