ಬಂಧನದಿಂದ ಪಾರಾಗಲು ರಾಜ್ ಕುಂದ್ರಾರಿಂದ 25 ಲಕ್ಷ ರೂ. ಲಂಚ?
ಮುಂಬೈ, ಜು. 22: ಅಶ್ಲೀಲ ಚಿತ್ರ ನಿರ್ಮಾಣ ಹಾಗೂ ಮೊಬೈಲ್ ಆಪ್ ಮೂಲಕ ಪ್ರಸಾರ ಮಾಡಿದ ಅರೋಪದಡಿ ಬಂಧನಕ್ಕೆ ಒಳಗಾಗಿರುವ ನಟಿ ಶಿಲ್ಪಾಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಪ್ರಕರಣದ ಹೊಸ ಸಂಗತಿ ಹೊರ ಬಿದ್ದಿದೆ. ಅಶ್ಲೀಲ ಚಿತ್ರ ನಿರ್ಮಾಣ ಮತ್ತು ಪ್ರಸಾರ ಮಾಡಿದ ಆರೋಪ ಸಂಬಂಧ ಮುಂಬಯಿ ಅಪರಾಧ ವಿಭಾಗದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೀಗಿರುವಾಗಲೇ ಕುಂದ್ರಾ ಮೇಲೆ ಹೊಸ ಆರೋಪ ಕೇಳಿ ಬಂದಿದೆ. ಅಶ್ಲೀಲ ಚಿತ್ರ ನಿರ್ಮಾಣ ಜಾಲದಲ್ಲಿರುವ ರಾಜ್ ಕುಂದ್ರಾ ಬಂಧನದಿಂದ ತಪ್ಪಿಸಿಕೊಳ್ಳಲು ಮುಂಬಯಿ ಕ್ರೈಮ್ ಬ್ರಾಂಚ್ ಪೊಲೀಸರಿಗೆ 25 ಲಕ್ಷ ರೂ. ಲಂಚ ಪಾವತಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಅಶ್ಲೀಲ ಚಿತ್ರ ನಿರ್ಮಾಣ ಮತ್ತು ಪ್ರಸಾರ ಮಾಡಿದ ಆರೋಪ ಸಂಬಂಧ ರಾಜ್ ಕುಂದ್ರಾನನ್ನು ನಾಲ್ಕು ದಿನಗಳ ಹಿಂದೆ ಮುಂಬಯಿ ಕ್ರೈಮ್ ಬ್ರಾಂಚ್ ಪೊಲೀಸರು ಬಂಧಿಸಿದ್ದರು. ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಜು. 23 ರ ವರೆಗೆ ಪೊಲೀಸರ ಕಸ್ಟಡಿಗೆ ಪಡೆದಿದ್ದಾರೆ. ಈ ಅಶ್ಲೀಲ ಚಿತ್ರ ನಿರ್ಮಾಣ ವಹಿವಾಟಿನ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ತನಿಖೆ ನಡೆಸುತ್ತಿರುವ ಕ್ರೈಮ್ ಬ್ರಾಂಚ್ ಪೊಲೀಸರ ಮೇಲೆಯೇ ಇಂತಹ ಆರೋಪ ಕೇಳಿ ಬಂದಿದೆ.
ಉದ್ಯಮಿ ರಾಜ್ ಕುಂದ್ರ ಬಂಧನ ಹಿಂದಿದೆ, ಜನರ ಪೋರ್ನೋಗ್ರಫಿ ಡೆಪೆಂಡೆನ್ಸಿಯ ಅಂಕಿಅಂಶಗಳು!
ಪೋರ್ನೋಗ್ರಫಿ ಜಾಲದ ಬಗ್ಗೆ ಕಳೆದ ಮಾರ್ಚ್ ನಲ್ಲಿ ಮಂಬಯಿ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಜಾಲದ ಪ್ರಮುಖ ಆರೋಪಿ ಎನ್ನಲಾದ ಅರವಿಂದ್ ಶ್ರೀವತ್ಸವ್ ಅಲಿಯಾಸ್ ಯಶ್ ಠಾಕೂರ್ ಈ ಕುರಿತು ಆಗಲೇ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಇ ಮೇಲ್ ಮೂಲಕ ದೂರು ನೀಡಿದ್ದರು. ರಾಜ್ ಕುಂದ್ರಾ ಕೂಡ ಅಶ್ಲೀಲ ಸಿಡಿ ತಯಾರಿಕೆ ಮತ್ತು ಪ್ರಸಾರ ಜಾಲದಲ್ಲಿ ಶಾಮೀಲಾಗಿದ್ದರು. ಮುಂಬಯಿ ಸಿಸಿಬಿ ಪೊಲೀಸರ ಬಂಧನ ಭೀತಿಯಿಂದ ತಪ್ಪಿಸಿಕೊಳ್ಳಲು 25 ಲಕ್ಷ ರೂ. ಲಂಚವನ್ನು ಕುಂದ್ರಾ ನೀಡಿದ್ದರು ಎಂದು ಕಿಂಗ್ ಪಿನ್ ಶ್ರೀವತ್ಸವ್ ಆರೋಪಿಸಿ ಮುಂಬಯಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಇ ಮೇಲ್ ಬರೆದಿದ್ದ. ಈ ದೂರನ್ನು ಮುಂಬಯಿ ಎಸಿಬಿ ಪೊಲೀಸರು ಏಪ್ರಿಲ್ ನಲ್ಲಿಯೇ ಮುಂಬಯಿ ನಗರ ಪೊಲೀಸ್ ಆಯುಕ್ತರಿಗೆ ವರ್ಗಾವಣೆ ಮಾಡಿದ್ದರು. ಇದೀಗ ಕುಂದ್ರಾ ಮುಂಬಯಿ ಕ್ರೈಮ್ ಬ್ರಾಂಚ್ ಪೊಲೀಸರಿಗೆ ಲಂಚ ನೀಡಿದ ವಿವಾದ ಕೂಡ ಹೊರಗೆ ಬಿದ್ದಿದೆ.
ಕಳೆದ ಮಾರ್ಚ್ ನಲ್ಲಿ ಇದೇ ಪೋರ್ನೋಗ್ರಫಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬಯಿ ಪೊಲೀಸರು ಕೇಸು ದಾಖಲಿಸಿದ್ದರು. ರಾಜ್ ಕುಂದ್ರಾ ಆಪ್ತ ಎನ್ನಲಾದ ಶ್ರೀವತ್ಸ ತಲೆ ಮರೆಸಿಕೊಂಡಿದ್ದ. ರಾಜ್ ಕುಂದ್ರಾ ಪೊಲೀಸರಿಗೆ ಲಂಚ ನೀಡಿ ಬಚಾವ್ ಆಗಿದ್ದರು ಎಂಬ ಆರೋಪ ಈಗ ಕೇಳಿ ಬಂದಿದ್ದು, ಮುಂದೆ ಯಾವ ಸ್ವರೂಪ ಪಡೆದುಕೊಳ್ಳಲಿದೆಯೋ ಕಾದು ನೋಡಬೇಕು.