ಸಂಜಯ್ ದತ್ ಕೈಗೆ ಬಾಂಬ್ ನೀಡಿರಲಿಲ್ಲ: ಅಬು ಸಲೇಂ
ಮುಂಬೈ, ಆಗಸ್ಟ್ 12: ಮುಂಬೈನಲ್ಲಿ 1993ರಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದ ವೇಳೆ ಬಾಲಿವುಡ್ ನಟ ಸಂಜಯ್ ದತ್ ಮನೆಗೆ ತೆರಳಿ ಸ್ಫೋಟಕ ವಸ್ತುಗಳನ್ನು ಸಾಗಿಸಿರಲಿಲ್ಲ ಎಂದು ಭೂಗತ ಪಾತಕಿ ಅಬು ಸಲೇಂ ಹೇಳಿದ್ದಾರೆ. ಟಾಡಾ ನ್ಯಾಯಾಲಯದ ಮುಂದೆ ಗ್ಯಾಂಗ್ ಸ್ಟರ್ ನೀಡುವ ಹೇಳಿಕೆ ಈ ಪ್ರಕರಣಕ್ಕೆ ಹೊಸ ತಿರುವು ನೀಡುವ ಸಾಧ್ಯತೆಯಿದೆ.
ಮುಂಬೈ ಸರಣಿ ಬಾಂಬ್ ಸ್ಫೋಟಕ ಸಂಬಂಧಿಸಿದಂತೆ ಈಗಾಗಲೇ ಪೊಲೀಸರ ವಶದಲ್ಲಿರುವ ಸಂಜಯ್ ದತ್ ಅವರಿಗೆ ಎರಡು ಎಕೆ-47 ಬಂದೂಕು, ಗ್ರಾನೈಡ್ ಬಾಂಬ್ಗಳನ್ನು ಪೂರೈಕೆ ಮಾಡಿರುವ ಆರೋಪ ನಿಜವಲ್ಲ. ನಾನು ಯಾವುದೇ ಸ್ಫೋಟಕ ವಸ್ತುಗಳನ್ನು ನೀಡಿರಲಿಲ್ಲ ಎಂದು ಟಾಡಾ ನ್ಯಾಯಾಲಯದ ಮುಂದೆ ಅಬು ಸಲೇಂ ತನ್ನ ಹೇಳಿಕೆ ದಾಖಲಿಸಿದ್ದಾರೆ.
ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಕಾರಣಕ್ಕೆ ನಟ ಸಂಜಯ್ದತ್ ಅವರಿಗೆ ಮುಂಬೈನ ಟಾಡಾ ನ್ಯಾಯಾಲಯ ಮೂರೂವರೆ ವರ್ಷ ಜೈಲು ಶಿಕ್ಷೆ ವಿಧಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ಈ ಪ್ರಕರಣದಲ್ಲಿ ಅಬು ಸಲೇಂ ಜತೆಗೆ ರಿಯಾಜ್ ಸಿದ್ದಿಕಿ , ಕರೀಂ ಉಲ್ಲಾ ಖಾನ್, ಫೆರೋಜ್ ಅಬ್ದುಲ್ ರಸೀದ್, ತಾಹಿರ್ ಮರ್ಚೆಂಟ್ ಮತ್ತು ಮುಸ್ತಫ ಜೋಸಾ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ.
ಇತ್ತೀಚೆಗಷ್ಟೆ ನಾಗ್ಪುರ್ ಸೆಂಟ್ರಲ್ ಜೈಲಿನಲ್ಲಿ ಮುಂಬೈ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಮೊದಲ ಅಪರಾಧಿಯಾಗಿ ನೇಣಿಗೇರಿದ ಯಾಕೂಬ್ ಮೆಮನ್ ಕೂಡಾ ಅಪರಾಧಿಯಾಗಿದ್ದರು.ಭಾರತದಿಂದ ತಲೆಮರೆಸಿಕೊಂಡು ಪೋರ್ಚ್ಗಲ್ನಲ್ಲಿದ್ದ ಅಬುಸಲೇಂನನ್ನು 2012ರಲ್ಲಿ ಭಾರತಕ್ಕೆ ಕರೆ ತರಲಾಗಿತ್ತು. (ಪಿಟಿಐ)