ಸಿಎಂ ಠಾಕ್ರೆ - ಏಕನಾಥ್ ಶಿಂಧೆ ದುಷ್ಮನಿಗೆ 'ಆ ಸಿನಿಮಾ' ಕಾರಣವಾಯಿತೇ?
ಮುಂಬೈ, ಜೂನ್ 24: ಗುವಹಾಟಿಯ ಹೊಟೇಲ್ ನಲ್ಲಿ ಶಿವಸೇನೆಯ ಬಂಡಾಯ ಶಾಸಕರ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಎನ್ಸಿಪಿ ಮುಖಂಡ ಶರದ್ ಪವಾರ್, ಮತ್ತೊಮ್ಮೆ, ಸಿಎಂ ಉದ್ದವ್ ಠಾಕ್ರೆಯವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ.
ರಾಜಕೀಯ ಬದ್ದವೈರಿಗಳ ಜೊತೆಗೆ ಮೈತ್ರಿ, ಸ್ವಪಕ್ಷೀಯ ಶಾಸಕರ ಕಡೆಗಣನೆ, ಏಕಪಕ್ಷೀಯ ನಿರ್ಧಾರಗಳೇ ಸಿಎಂ ಠಾಕ್ರೆ ವಿರುದ್ದ ಇಷ್ಟು ದೊಡ್ಡ ಮಟ್ಟಿನ ಬಂಡಾಯ ಏಳಲು ಕಾರಣ ಎನ್ನುವುದು ಭಿನ್ನಮತೀಯ ಶಾಸಕರ ಅಭಿಪ್ರಾಯ.
ಠಾಕ್ರೆಯ ಶಿವಸೇನೆಯೋ, ಶಿಂಧೆಯ ಶಿವಸೇನೆಯೋ? ಗೊಂದಲದಲ್ಲಿ ಕಾರ್ಯಕರ್ತ
"ನನಗೆ ಐವತ್ತಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ, ಅದರಲ್ಲಿ ನಲವತ್ತು ನಮ್ಮ ಪಕ್ಷದವರು"ಎಂದು ಏಕನಾಥ್ ಶಿಂಧೆ ಹೇಳಿಕೊಂಡಿದ್ದಾರೆ. ಒಂದು ದಿನದ ಹಿಂದೆ ಬಿಜೆಪಿ ವರಿಷ್ಠರ ಅಭಯವಿದೆ ಎಂದು ಹೇಳಿದ್ದ ಶಿಂಧೆ, ಯೂಟರ್ನ್ ಹೊಡೆದಿದ್ದು, ನನ್ನನ್ನು ಯಾರೂ ಸಂಪರ್ಕಿಸಲಿಲ್ಲ ಎಂದು ಹೇಳಿದ್ದಾರೆ.
ಇವೆಲ್ಲದರ ನಡುವೆ, ಒಂದು ಕಾಲದಲ್ಲಿ ಬಾಳಾ ಠಾಕ್ರೆಯವರ ಕಟ್ಟಾ ಅನುಯಾಯಿಯಾಗಿದ್ದ ಏಕನಾಥ್ ಶಿಂಧೆ ಈಗ ಮಗ ಉದ್ದವ್ ವಿರುದ್ದ ತಿರುಗಿಬೀಳಲು ಕಾರಣವೇನು ಎಂದಾಗ ಮರಾಠಿ ಚಿತ್ರವೂ ಒಂದು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಮಹಾರಾಷ್ಟ್ರ ಬಿಕ್ಕಟ್ಟು: ಎನ್ಸಿಪಿ ನಾಯಕ ಅಜಿತ್ ಪವಾರ್ ಅಚ್ಚರಿಯ ಹೇಳಿಕೆ
ಧರ್ಮವೀರ್ - ಮುಕ್ಕಂ ಪೋಸ್ಟ್ ಥಾಣೆ ಎನ್ನುವ ಸಿನಿಮಾ
ಶಿವಸೇನೆಯ ನಾಯಕ ದಿವಂಗತ ಆನಂದ್ ದಿಘೇಯವರ ಜೀವನಾಧಾರಿತ ಮರಾಠಿ ಸಿನಿಮಾವೊಂದು ಕಳೆದ ತಿಂಗಳು ಅಂದರೆ ಮೇ ಹದಿಮೂರರಂದು ಬಿಡುಗಡೆಯಾಗಿತ್ತು. ಪ್ರವೀಣ್ ತರಾಡೆ ಎನ್ನುವ ನಿರ್ದೇಶಕರ ಚಿತ್ರ ಇದಾಗಿತ್ತು. ಧರ್ಮವೀರ್ - ಮುಕ್ಕಂ ಪೋಸ್ಟ್ ಥಾಣೆ ಎನ್ನುವ ಸಿನಿಮಾ ಇದಾಗಿತ್ತು. ಈ ಚಿತ್ರವನ್ನು ವೀಕ್ಷಿಸಲು ಒಂದೇ ದಿನ, ಒಂದೇ ಸಿನಿಮಾ ಹಾಲ್ ನಲ್ಲಿ ಸಿಎಂ ಠಾಕ್ರೆ ಮತ್ತು ಏಕನಾಥ್ ಶಿಂಧೆ ಆಗಮಿಸಿದ್ದರು.
ಶಿವಸೇನೆಯ ಥಾಣೆ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ದಿ.ಆನಂದ ದಿಘೇ
ಶಿವಸೇನೆಯ ಥಾಣೆ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ದಿ.ಆನಂದ ದಿಘೇಯವರ ಈ ಸಿನಿಮಾದ ಕೆಲವೊಂದು ದೃಶ್ಯಗಳಿಗೆ ಸಿಎಂ ಉದ್ಧವ್ ಠಾಕ್ರೆ ಅವರ ಅಸಮಾಧಾನವಿತ್ತು ಎಂದು ಹೇಳಲಾಗುತ್ತಿದೆ. ಈ ಚಿತ್ರವನ್ನು ಪೂರ್ತಿಯಾಗಿ ವೀಕ್ಷಿಸದೇ ಠಾಕ್ರೆ ಕ್ಲೈಮ್ಯಾಕ್ಸ್ ವೇಳೆ ಹೊರ ನಡೆದಿದ್ದರು. ಏಕನಾಥ್ ಶಿಂಧೆಯವರು ಆನಂದ ದಿಘೇಯವರ ಕಟ್ಟಾ ಶಿಷ್ಯರಾಗಿದ್ದರು ಜೊತೆಗೆ, ಠಾಕ್ರೆ ಪೂರ್ತಿ ಸಿನಿಮಾ ನೋಡದೇ ಹೊರ ನಡೆದದ್ದು ಇವರಿಬ್ಬರ ನಡುವೆ ಇನ್ನಷ್ಟು ಅಂತರಕ್ಕೆ ಕಾರಣವಾಯಿತು ಎಂದು ಸಾಮಾಜಿಕ ತಾಣದಲ್ಲಿ ಗುಲ್ಲೆಬ್ಬುತ್ತಿದೆ.
ದಿಘೇಯವರನ್ನು ನೋಡಲು ರಾಜ್ ಠಾಕ್ರೆ ಆಸ್ಪತ್ರೆಗೆ ಬರುತ್ತಾರೆ
ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಬರುವ ದೃಶ್ಯವೊಂದು ಇಬ್ಬರ ನಡುವೆ ಕಂದಕವನ್ನು ಹೆಚ್ಚಿಸಿತು ಎಂದು ಹೇಳಲಾಗುತ್ತಿದೆ. ಚಿತ್ರದ ಕೊನೆಯ ಸನ್ನಿವೇಶದಲ್ಲಿ ದಿವಂಗತ ದಿಘೇ ಮತ್ತು ರಾಜ್ ಠಾಕ್ರೆ ನಡುವೆ ಸಂಭಾಷಣೆಯ ಸನ್ನಿವೇಶವಿದೆ. ಆಕ್ಸಿಡೆಂಟ್ ನಲ್ಲಿ ಆಸ್ಪತ್ರೆಗೆ ದಾಖಲಾಗುವ ದಿಘೇಯವರನ್ನು ನೋಡಲು ರಾಜ್ ಠಾಕ್ರೆ ಆಸ್ಪತ್ರೆಗೆ ಬರುತ್ತಾರೆ. ಆ ವೇಳೆ ರಾಜ್ ಠಾಕ್ರೆ ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿರುತ್ತಾರೆ.
ಠಾಕ್ರೆ - ಏಕನಾಥ್ ಶಿಂಧೆ ದುಷ್ಮನಿಗೆ 'ಆ ಸಿನಿಮಾ' ಕಾರಣವಾಯಿತೇ?
'ನೀವು ಹೀಗೆ ಆಸ್ಪತ್ರೆಯಲ್ಲಿ ಹೀಗೆ ಮಲಗಿದರೆ ಹೇಗೆ, ಹಿಂದುತ್ವದ ಕೆಲಸ ಇನ್ನೂ ಬಾಕಿ ಇದೆ'ಎಂದು ರಾಜ್ ಠಾಕ್ರೆ, ದಿಘೇ ಅವರಿಗೆ ಹೇಳುತ್ತಾರೆ. ಅದಕ್ಕೆ ದಿಘೇ, 'ಹಿಂದುತ್ವದ ಕೆಲಸ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ' ಎಂದು ಹೇಳುತ್ತಾರೆ. ಈ ದೃಶ್ಯ ಇರುವುದನ್ನು ಅರಿತ ಸಿಎಂ ಠಾಕ್ರೆ ಕ್ಲೈಮ್ಯಾಕ್ಸ್ ಗಿಂತ ಮುಂಚೆನೇ ಥಿಯೇಟರ್ ನಿಂದ ಹೊರ ನಡೆಯುತ್ತಾರೆ. ದಿ.ದಿಘೇ ಹಲವು ಬಾರಿ ಬಾಳ್ ಠಾಕ್ರೆಯವರ ಆದೇಶವನ್ನು ಧಿಕ್ಕರಿಸಿದ್ದರಂತೆ. ಆ ಕಾರಣಕ್ಕಾಗಿ ಸಿಎಂ ಠಾಕ್ರೆಗೆ ಈ ಸಿನಿಮಾದ ಅಂತಿಮ ದೃಶ್ಯ ಹಿಡಿಸಲಿಲ್ಲವಂತೆ. ಆದರೆ ಸಿಎಂ ಹಿಂಬಾಲಕರು ಹೇಳುವುದೇನಂದರೆ ಸಿನಿಮಾ ಪರದೆಯಲ್ಲೂ ದಿಘೇ ಅವರ ಸಾವನ್ನು ನೋಡುವುದು ಠಾಕ್ರೆಗೆ ಇಷ್ಟವಿಲ್ಲವಂತೆ ಎಂದು. ಕೊನೆಯದಾಗಿ, ಆ ಸಿನಿಮಾದ ಹೀರೋ ದಿಘೇಯವರ ಕಟ್ಟಾ ಹಿಂಬಾಲಕ ಈಗಿನ ರೆಬೆಲ್ ಏಕನಾಥ್ ಶಿಂಧೆ.