ಮಹಾರಾಷ್ಟ್ರ ಸಿಎಂ ಆಗಲ್ಲ ದೇವೇಂದ್ರ ಫಡ್ನವೀಸ್; ಲೆಕ್ಕಾಚಾರವೆಲ್ಲ ಉಲ್ಟಾ-ಪಲ್ಟಾ!
ಮುಂಬೈ, ಜೂನ್ 30: ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಸರ್ಕಾರ ಮುಗ್ಗರಿಸಿದೆ. ಇದರ ಬೆನ್ನಲ್ಲೇ ಗುರುವಾರವೇ ರಾಜ್ಯದ ಮುಖ್ಯಮಂತ್ರಿ ಆಗಿ ದೇವೇಂದ್ರ ಫಡ್ನವೀಸ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಸುದ್ದಿ ಹಬ್ಬಿತು. ಆದರೆ ಎಲ್ಲಾ ರಾಜಕೀಯ ಲೆಕ್ಕಾಚಾರಗಳು ಉಲ್ಟಾ ಹೊಡೆದವು.
ಗುರುವಾರ ಸಂಜೆ 7 ಗಂಟೆಗೆ ದೇವೇಂದ್ರ ಫಡ್ನವೀಸ್ ಇನ್ನೇನು ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಸುದ್ದಿ ಹರಡಿತ್ತು. ಆದರೆ ಕೆಲವೇ ಕೆಲವು ಕ್ಷಣಗಳಲ್ಲಿ ರಾಜಕೀಯವೆಲ್ಲಾ ತಿರುವು-ಮುರುವು ಆಯಿತು.
Maharashtra Political Crisis LIVE: ಗುರುವಾರ ಸಂಜೆ 7 ಗಂಟೆಗೆ ಫಡ್ನವೀಸ್ ಪದಗ್ರಹಣ
ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನಕ್ಕೆ ಬಂಡಾಯ ಶಾಸಕರ ಬಣದ ನಾಯಕ ಏಕನಾಥ್ ಶಿಂಧೆಯೇ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಸ್ವತಃ ದೇವೇಂದ್ರ ಫಡ್ನವೀಸ್ ಅಧಿಕೃತವಾಗಿ ಘೋಷಿಸಿದರು. ಶಿಂಧೆ ಜೊತೆಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದರು. ಈ ರಾಜಕೀಯ ಬೆಳವಣಿಗೆಯ ಹಿಂದೆ ಮತ್ತು ಮುಂದೆ ಏನೆಲ್ಲಾ ನಡೆಯಿತು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.
ಸಂಜೆ 7.30ಕ್ಕೆ ಏಕನಾಥ್ ಶಿಂಧೆ ಪ್ರಮಾಣವಚನ ಕಾರ್ಯಕ್ರಮ
ಶಿವಸೇನೆಯ ಬಂಡಾಯ ಬಣದ ನಾಯಕರಿಗೆ ಇದೀಗ ಮುಖ್ಯಮಂತ್ರಿ ಕುರ್ಚಿಯ ಭಾಗ್ಯ ಒಲಿದು ಬಂದಿದೆ. ಬಿಜೆಪಿಯ ಬೆಂಬಲವನ್ನು ಪಡೆದುಕೊಂಡು 40 ಶಾಸಕರೊಂದಿಗೆ ಸಿಡಿದೆದ್ದ ಶಿಂಧೆ ಈಗ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಸಲಿದ್ದಾರೆ. ಗುರುವಾರ ಸಂಜೆ 7.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಸಿಎಂ ಆಗಿ ಏಕನಾಥ್ ಶಿಂಧೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ರಾಜ್ಯಪಾಲರನ್ನು ಭೇಟಿಯಾದ ಶಿಂಧೆ ಮತ್ತು ಫಡ್ನವೀಸ್
ಉದ್ಧವ್ ಠಾಕ್ರೆ ರಾಜೀನಾಮೆ ಘೋಷಿಸಿದ ಬೆನ್ನಲ್ಲೇ ಗುರುವಾರ ಬಂಡಾಯ ಶಾಸಕ ಏಕನಾಥ್ ಶಿಂಧೆ ಮತ್ತು ಬಿಜೆಪಿಯ ದೇವೇಂದ್ರ ಫಡ್ನವೀಸ್ ರಾಜ್ಯಪಾಲರನ್ನು ಭೇಟಿ ಮಾಡಿದರು. ಮಧ್ಯಾಹ್ನ 3.30ಕ್ಕೆ ರಾಜಭವನಕ್ಕೆ ತೆರಳಿದ ಉಭಯ ನಾಯಕರು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿಯನ್ನು ಭೇಟಿ ಮಾಡಿ ಸರ್ಕಾರ ರಚಿಸುವುದಕ್ಕೆ ಅನುಮತಿ ನೀಡುವಂತೆ ಮನವಿ ಸಲ್ಲಿಸಿದರು. ರಾಜ್ಯಪಾಲರಿಗೆ ಸಿಹಿ ನೀಡುವ ಮೂಲಕ ಸಂತಸ ವ್ಯಕ್ತಪಡಿಸಿದರು.
ಫೇಸ್ಬುಕ್ ಲೈವ್ನಲ್ಲಿ ರಾಜೀನಾಮೆ ಘೋಷಣೆ
ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ಬುಧವಾರವಷ್ಟೇ ರಾಜೀನಾಮೆ ಘೋಷಿಸಿದರು. ಗುರುವಾರ ಬಹುಮತ ಸಾಬೀತುಪಡಿಸಬೇಕು ಎಂಬ ಸುಪ್ರೀಂಕೋರ್ಟ್ ಸೂಚನೆ ಬೆನ್ನಲ್ಲೇ ಅವರು ತಮ್ಮ ನಿರ್ಧಾರ ಪ್ರಕಟಿಸಿದ್ದರು. ಫೇಸ್ಬುಕ್ ಲೈವ್ನಲ್ಲಿ ರಾಜ್ಯವನ್ನು ಉದ್ದೇಶಿಸಿ ಮಾತನಾಡಿದ ಉದ್ಧವ್ ಠಾಕ್ರೆ, ಎರಡು ವರ್ಷಗಳ ತಮ್ಮ ಆಡಳಿತವು ತೃಪ್ತಿ ತಂದಿದೆ ಎಂದರು. ಶರದ್ ಪವಾರ್ ಮತ್ತು ಸೋನಿಯಾ ಗಾಂಧಿಗೆ ಧನ್ಯವಾದ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭಾವನಾತ್ಮಕ ಮಾತು
ಮುಖ್ಯಮಂತ್ರಿ ಸ್ಥಾನದ ಜೊತೆಗೆ ತಮ್ಮ ವಿಧಾನ ಪರಿಷತ್ ಸ್ಥಾನಕ್ಕೂ ಉದ್ಧವ್ ಠಾಕ್ರೆ ರಾಜೀನಾಮೆಯನ್ನು ಘೋಷಿಸಿದ್ದಾರೆ. "ನಾನು ಅನಿರೀಕ್ಷಿತ ರೀತಿಯಲ್ಲಿ (ಅಧಿಕಾರಕ್ಕೆ) ಬಂದಿದ್ದೇನೆ ಮತ್ತು ನಾನು ಅದೇ ರೀತಿಯಲ್ಲಿ ಹೊರಡುತ್ತಿದ್ದೇನೆ. ನಾನು ಶಾಶ್ವತವಾಗಿ ಹೋಗುವುದಿಲ್ಲ, ನಾನು ಇಲ್ಲೇ ಇರುತ್ತೇನೆ ಮತ್ತು ಮತ್ತೊಮ್ಮೆ ಶಿವಸೇನಾ ಭವನದಲ್ಲಿ ಕುಳಿತುಕೊಳ್ಳುತ್ತೇನೆ. ನನ್ನ ಎಲ್ಲಾ ಜನರನ್ನು ನಾನು ಒಟ್ಟುಗೂಡಿಸುವೆನು. ನಾನು ಸಿಎಂ ಮತ್ತು ಎಂಎಲ್ಸಿ ಸ್ಥಾನಕ್ಕೆ ಈಗ ರಾಜೀನಾಮೆ ನೀಡುತ್ತಿದ್ದೇನೆ," ಎಂದು ಉದ್ಧವ್ ಠಾಕ್ರೆ ತಮ್ಮ ಭಾವನಾತ್ಮಕ ಭಾಷಣದಲ್ಲಿ ಹೇಳಿದರು.
Recommended Video